ಕೆ.ಆರ್.ಪೇಟೆಯಲ್ಲಿ ಕರುಗಳ ಮಾಂಸ ಮಾರಾಟ ದಂಧೆ!
ಮಂಡ್ಯ, ಏಪ್ರಿಲ್ 08: ಲಾಕ್ ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಮಾಂಸ ಮಾರಾಟದ ಮೇಲೆ ನಿಷೇಧ ಹೇರಲಾಗಿದೆ. ಹೀಗಾಗಿ ಕೆಲವು ಮಾಂಸ ಪ್ರಿಯರು ಸಿಕ್ಕ ಸಿಕ್ಕ ಕಡೆಯಿಂದ ಮಾಂಸ ತರಿಸಿ ಸೇವಿಸುತ್ತಿದ್ದಾರೆ.
ಈ ಪರಿಸ್ಥಿತಿಯನ್ನೇ ಲಾಭಕ್ಕೆ ಬಳಸಿಕೊಂಡು, ಕೆ.ಆರ್.ಪೇಟೆಯ ಹೊಸಹೊಳಲು ಗ್ರಾಮದಲ್ಲಿ ಸೀಮೆ ಹಸುವಿನ ಕರುಗಳನ್ನು ತಂದು ಅವುಗಳನ್ನು ಕೊಂದು ಮಾಂಸ ಮಾಡಿ ಕುರಿ ಮಾಂಸದೊಂದಿಗೆ ಬೆರೆಸಿ ಮಾರಾಟ ಮಾಡುತ್ತಿದ್ದದ್ದು ಬೆಳಕಿಗೆ ಬಂದಿದೆ.
ಕೊರೊನಾ ಸುಳ್ಳು ವದಂತಿ: ಮೈಸೂರಿನಲ್ಲಿ ಕೇಸ್ ದಾಖಲು
ಕಳೆದ ಕೆಲವು ದಿನಗಳಿಂದ ಈ ವ್ಯವಹಾರ ನಡೆಯುತ್ತಿದ್ದರೂ ಯಾರಿಗೂ ಗೊತ್ತಾಗಿರಲಿಲ್ಲ. ಆದರೆ ಸುಮಾರು ಮೂವತೈದಕ್ಕೂ ಹೆಚ್ಚು ಕರುಗಳನ್ನು ಒಂದೆಡೆ ಕೂಡಿ ಹಾಕಿದ್ದಲ್ಲದೆ, ಅವುಗಳನ್ನು ಬೇರೆಡೆಗೆ ಗೂಡ್ಸ್ ವಾಹನದಲ್ಲಿ ಸಾಗಿಸಲು ಮುಂದಾಗುತ್ತಿರುವುದು ಗೊತ್ತಾಗುತ್ತಿದ್ದಂತೆಯೇ, ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪಟ್ಟಣ ಪೊಲೀಸರು ದಾಳಿ ನಡೆಸಿ ಸುಮಾರು ಮೂವತ್ತೈದು ಕರುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.