ವಿದ್ಯಾನಗರದಲ್ಲಿರುವ ರಮ್ಯಾ ನಿವಾಸಕ್ಕೆ ಪೊಲೀಸ್ ಭದ್ರತೆ ನಿಯೋಜನೆ
ಮಂಡ್ಯ, ನವೆಂಬರ್ 28: ಅಂಬರೀಶ್ ಅಂತ್ಯ ಸಂಸ್ಕಾರಕ್ಕೆ ಹಾಜರಾಗದ ಮಾಜಿ ಸಂಸದೆ ರಮ್ಯಾ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿರುವ ಕಾರಣ, ಮಂಡ್ಯದ ವಿದ್ಯಾನಗರದಲ್ಲಿರುವ ಅವರ ನಿವಾಸಕ್ಕೆ ಭದ್ರತೆ ಒದಗಿಸಲಾಗಿದೆ.
ಅಂಬಿ ಅಂತ್ಯಕ್ರಿಯೆಗೆ ರಮ್ಯಾ ಬಂದಿದ್ದರೆ ಅವರ ಮೇಲೆ ಹಲ್ಲೆ ನಡೆಯುತ್ತಿತ್ತೇ?
ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಮುನ್ನೆಚ್ಚರಿಕೆಯಿಂದ ರಮ್ಯಾ ಅವರ ಮನೆಯ ಮುಂದೆ ಕಾನ್ಸ್ಟೇಬಲ್ಗಳನ್ನು ನಿಯೋಜಿಸಲಾಗಿದೆ.
ರಮ್ಯಾ ವಿರುದ್ಧ ಆಕ್ರೋಶಗೊಂಡ ಅಂಬರೀಶ್ ಅಭಿಮಾನಿಗಳು
ಅಂಬರೀಶ್ ಅವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ರಮ್ಯಾ ಬಂದಿದ್ದರೆ ಅವರ ಮೇಲೆ ಹಲ್ಲೆ ನಡೆಯುವ ಸಾಧ್ಯತೆ ಇತ್ತು ಎಂದು ರಾಜ್ಯ ಗುಪ್ತಚರ ಸಂಸ್ಥೆ ಮಾಹಿತಿ ನೀಡಿತ್ತು. ಹೀಗಾಗಿ ಎಚ್ಚರಿಕೆ ವಹಿಸಿದ್ದ ರಮ್ಯಾ, ದೆಹಲಿಯಿಂದ ಬೆಂಗಳೂರಿಗೆ ಕಾಯ್ದಿರಿಸಿದ್ದ ವಿಮಾನ ಟಿಕೆಟ್ ಅನ್ನು ರದ್ದುಗೊಳಿಸಿದ್ದರು ಎನ್ನಲಾಗಿದೆ.
ರಮ್ಯಾ ಅವರ ವಿರುದ್ಧ ಅಭಿಮಾನಿಗಳಲ್ಲಿ ಆಕ್ರೋಶ ಮಡುಗಟ್ಟಿರುವುದರಿಂದ ಮತ್ತು ಅವರ ರಾಜಕೀಯ ವಿರೋಧಿಗಳ ಕೋಪಕ್ಕೂ ತುತ್ತಾಗಿರುವುದರಿಂದ ರಮ್ಯಾ ಎಲ್ಲರ ಕೆಂಗಣ್ಣಿಗೆ ಒಳಗಾಗಿದ್ದಾರೆ. ಈ ಸಂದರ್ಭದಲ್ಲಿ ಹೆಚ್ಚಿನ ಸಮಸ್ಯೆಗಳು ತಲೆದೋರಬಾರದು ಎಂಬ ಎಚ್ಚರಿಕೆ ವಹಿಸಿ ಅವರ ನಿವಾಸಕ್ಕೆ ಭದ್ರತೆ ಒದಗಿಸಲಾಗಿದೆ.
ಅಂಬಿ ಅಂತ್ಯಕ್ರಿಯೆಗೆ ರಮ್ಯಾ ಗೈರಾಗಲು ನಿಜಕ್ಕೂ ಇದೇ ಕಾರಣವೇ?
ಅಂಬರೀಶ್ ನಿಧನದ ಬಳಿಕ ರಮ್ಯಾ, ಟ್ವಿಟ್ಟರ್ನಲ್ಲಿ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದರು. ಆದರೆ, ಬಳಿಕ ಯಾವುದೇ ಹೇಳಿಕೆಗಳನ್ನು ನೀಡಿರಲಿಲ್ಲ. ಅಂಬಿ ನಿಧನರಾಗಿ ಎರಡು ದಿನವಾಗಿದ್ದರೂ, ಮಂಡ್ಯ ಅಥವಾ ಬೆಂಗಳೂರಿನಲ್ಲಿ ಅವರ ಅಂತಿಮ ದರ್ಶನಕ್ಕೆ ಆಗಮಿಸಿರಲಿಲ್ಲ.