ಮಂಡ್ಯದ ಪ್ರವಾಸಿ ತಾಣಗಳಲ್ಲಿ ಪುಂಡರ ಹಾವಳಿ, ಹದ್ದಿನ ಕಣ್ಣಿಟ್ಟ ಪೊಲೀಸ್
Recommended Video
ಮಂಡ್ಯ, ಸೆಪ್ಟೆಂಬರ್.19: ಜಿಲ್ಲೆಯ ಬಲಮುರಿ, ರಂಗನತಿಟ್ಟು, ಮುತ್ತತ್ತಿ ಸೇರಿದಂತೆ ಹಲವು ಪ್ರವಾಸಿ ತಾಣಗಳಲ್ಲಿ ಪುಂಡರ ಹಾವಳಿ ಹೆಚ್ಚಾಗಿದ್ದು, ದೂರದಿಂದ ಬರುವ ಪ್ರವಾಸಿಗರೊಂದಿಗೆ ಅದರಲ್ಲೂ ಹೆಣ್ಣು ಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸುವ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಲಿವೆ.
ಹೆಚ್ಚಿನ ಪ್ರವಾಸಿಗರು ಅದನ್ನೆಲ್ಲ ಸಹಿಸಿಕೊಂಡು ಹಿಂತಿರುಗುತ್ತಿರುವ ಕಾರಣ ಪ್ರಕರಣಗಳು ಬೆಳಕಿಗೆ ಬರುತ್ತಿಲ್ಲ. ಬಲಮುರಿಗೆ ಮೋಜು ಮಸ್ತಿಗೆಂದೇ ಹೆಚ್ಚಿನವರು ಬರುತ್ತಿದ್ದು, ಪಾನಮತ್ತರಾಗುವ ಇವರು ಅನುಚಿತವಾಗಿ ವರ್ತಿಸುವುದಲ್ಲದೆ, ಅಶ್ಲೀಲ ಮಾತುಗಳನ್ನಾಡಿ ಮುಜುಗರವನ್ನುಂಟು ಮಾಡುತ್ತಿದ್ದಾರೆ.
ಧುಮ್ಮಿಕ್ಕುತ್ತಿರುವ ಜೋಗದ ವೈಭವ ನೋಡಲು ಮುಗಿಬಿದ್ದ ಪ್ರವಾಸಿಗರು
ಹೆಂಡದ ಅಮಲಿನಲ್ಲಿ ಬಾಟಲಿಗಳನ್ನು ನೀರಿಗೆ ಎಸೆಯುವುದು, ಪುಂಡಾಟ ನಡೆಸುವುದು ಮಾಮೂಲಾಗಿದೆ. ದೂರದಿಂದ ಬರುವ ಪ್ರವಾಸಿಗರು ತಮಗೇಕೆ ಅನಗತ್ಯ ಕಿರಿಕ್? ಬಂದಿದ್ದಕ್ಕೆ ವಾಪಾಸ್ ಹೋದರೆ ಸಾಕೆಂದು ಜಾಗ ಖಾಲಿ ಮಾಡಿಬಿಡುತ್ತಾರೆ.
ಇದನ್ನೇ ಬಂಡವಾಳ ಮಾಡಿಕೊಳ್ಳುವ ಕೆಲವು ಪುಂಡರು ತಮ್ಮ ಆಟಾಟೋಪವನ್ನು ಮುಂದುವರೆಸುತ್ತಾರೆ. ಇನ್ನು ಜಿಲ್ಲೆಯ ಹಲವೆಡೆ ಪ್ರೇಕ್ಷಣೀಯ ತಾಣಗಳ ಸುತ್ತಲೂ ರೆಸಾರ್ಟ್ ಗಳಿದ್ದು, ಇಲ್ಲಿ ಮೋಜು ಮಸ್ತಿ ಮಾಡಿ ಅದೇ ಮತ್ತಲ್ಲಿ ಪ್ರವಾಸಿ ತಾಣದೊಳಗೆ ಬರುತ್ತಿದ್ದು, ಸ್ಥಳೀಯ ಸಿಬ್ಬಂದಿ ಮತ್ತು ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ.
ಜೋರು ಮಳೆಯಲ್ಲೂ ಕೊಡಚಾದ್ರಿ ಚಾರಣ, ಮೈ ನಡುಗಿಸುವ ಜೀಪ್ ಪಯಣ
ಇವರಿಗೆ ಸ್ಥಳೀಯರು ಹಣದಾಸೆಗಾಗಿ ಕುಮ್ಮಕ್ಕು ನೀಡುತ್ತಾರೆ. ಇನ್ನು ಪ್ರವಾಸಕ್ಕೆ ಹೆಚ್ಚಾಗಿ ಹೊರ ರಾಜ್ಯದವರೇ ಬರುತ್ತಾರೆ. ಅವರಲ್ಲಿ ಹೆಚ್ಚಿನವರು ಮೋಜು ಮಸ್ತಿಗಾಗಿ ಬರುತ್ತಾರೆ. ಹೀಗೆ ಬರುವ ಪ್ರವಾಸಿಗರು ಇಲ್ಲಿನ ರೆಸಾರ್ಟ್ ಗಳಲ್ಲಿ ಪಾನಗೋಷ್ಠಿ ನಡೆಸುತ್ತಾರೆ. ಇನ್ನು ಏನೇನು ಮಾಡ್ತಾರೆ ನೋಡಿ...
ಸ್ಥಳೀಯರಿಂದ ಹಣದಾಸೆ
ಪಾನಮತ್ತರಾಗಿ ಅಧಿಕಾರಿಗಳು ಹಾಗೂ ಪ್ರವಾಸಿಗರೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ. ಹೀಗೆ ಮಾಡಿ ಹಲವರು ಧರ್ಮದೇಟು ತಿಂದ ಪ್ರಕರಣಗಳು ಬೇಕಾದಷ್ಟಿವೆ. ಆದರೆ ಅವು ಯಾವುದೂ ಬೆಳಕಿಗೆ ಬಾರದೆ ಮುಚ್ಚಿ ಹೋಗಿವೆ.
ಇಂತಹ ಪ್ರಕರಣಗಳು ಹೆಚ್ಚಾಗಿ ಶ್ರೀರಂಗಪಟ್ಟಣ, ರಂಗನತಿಟ್ಟು, ಕೆ.ಆರ್.ಎಸ್., ಬೃಂದಾವನ, ಮುತ್ತತ್ತಿ, ಶಿವನಸಮುದ್ರ, ಬಲಮುರಿ, ಗಗನಚುಕ್ಕಿ ಮುಂತಾದ ಕಡೆಗಳಲ್ಲಿ ನಡೆಯುತ್ತಿದ್ದು, ಕೆಲವು ಪುಂಡರಿಗೆ ಸ್ಥಳೀಯರೇ ಹಣದಾಸೆಗಾಗಿ ಸಾಥ್ ನೀಡುತ್ತಾರೆ ಎಂಬ ಆರೋಪವೂ ಇದೆ.
ಮುಂದಾದ ಪೊಲೀಸ್
ರಂಗನತಿಟ್ಟು ಸುತ್ತಮುತ್ತ ಸ್ಥಳೀಯರು ಪಕ್ಷಿ ಬೇಟೆಗೆ ಯತ್ನಿಸಿದ ಬಗ್ಗೆ ಪೊಲೀಸ್ ಇಲಾಖೆ ಗಮನಕ್ಕೆ ಬಂದಿದ್ದರಿಂದ ಅರಣ್ಯ ಇಲಾಖೆಯ ಸಿಬ್ಬಂದಿಗೆ ಬಂದೂಕು ನೀಡಲಾಗಿದೆ. ಜತೆಗೆ ಅಂತಹವರ ಮಾಹಿತಿ ಕಲೆಹಾಕಿ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ ಎನ್ನಲಾಗಿದೆ.
ಹದ್ದಿನ ಕಣ್ಣು
ಕೆಲ ವರ್ಷಗಳ ಹಿಂದೆ ಪುಂಡ ಪ್ರವಾಸಿಗರ ತಂಡವೊಂದು ಮುತ್ತತ್ತಿಯಲ್ಲಿ ಮಹಿಳೆಯೊಬ್ಬರನ್ನು ನಗ್ನಗೊಳಿಸಿ ಅವರ ಚಿತ್ರವನ್ನು ಸೆರೆ ಹಿಡಿದ ಪ್ರಕರಣವೂ ನಡೆದಿತ್ತು. ಹೀಗಾಗಿ ಪ್ರವಾಸಿ ತಾಣಗಳಲ್ಲಿ ಅಕ್ರಮ ಚಟುವಟಿಕೆ, ಪುಂಡಾಟವನ್ನೆಲ್ಲ ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯೂ ಮುಂದಾಗಿದ್ದು ಹದ್ದಿನ ಕಣ್ಣಿಟ್ಟಿದೆ.
ಮೋಜಿನ ತಾಣವಾಗದಿರಲಿ
ಪ್ರವಾಸಿ ತಾಣಗಳ ಬಳಿ ಅಕ್ರಮ ಪಾನಗೋಷ್ಠಿ, ಜೂಜಾಟ ಮತ್ತಿತರ ಅಕ್ರಮ ಚಟುವಟಿಕೆ, ಪುಂಡಾಟಿಕೆ ಎಲ್ಲದಕ್ಕೂ ಪೊಲೀಸರು ತಡೆಯೊಡ್ಡಬೇಕಿದೆ. ಇಲ್ಲದೆ ಹೋದರೆ ಪ್ರವಾಸಿ ತಾಣಗಳು ಮೋಜು ಮಸ್ತಿನ ಕೇಂದ್ರವಾಗಿ ಹೆಣ್ಣುಮಕ್ಕಳು ಬರಲು ಭಯ ಪಡಬೇಕಾದ ಪರಿಸ್ಥಿತಿ ಎದುರಾಗುವುದರಲ್ಲಿ ಎರಡು ಮಾತಿಲ್ಲ.