ಚಾಮರಾಜನಗರ, ಮಂಡ್ಯ ಪಿಎಫ್ಐ ಮುಖಂಡರ ಮನೆ ಮೇಲೆ ದಾಳಿ, ಮೂವರ ಬಂಧನ
ಮಂಡ್ಯ, ಸೆಪ್ಟೆಂಬರ್ 27 : ರಾಷ್ಟ್ರೀಯ ತನಿಖೆ ಸಂಸ್ಥೆ ದೇಶಾದ್ಯಂತ ಪಿಎಫ್ಐ ಮತ್ತು ಎಸ್ಡಿಎಫ್ಐ ಸಂಘಟನೆಗಳ ಮುಖಂಡರು, ಕಾರ್ಯಕರ್ತರ ಮನೆಗಳ ಮೇಲೆ ದಾಳಿ ನಡೆಸಿದ ಬಳಿಕ ಮಂಡ್ಯದಲ್ಲಿ ಪೊಲೀಸರು ಪಿಎಫ್ಐ ಸಂಘಟನೆಯ ಜಿಲ್ಲಾಧ್ಯಕ್ಷನ ಮನೆ ಮೇಲೆ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ.
ನಗರದ ಗುತ್ತಲು ಬಡಾವಣೆಯ ಸಪ್ದರಿಯಾ ನಗರದಲ್ಲಿ ವಾಸವಾಗಿರುವ ಇರ್ಫಾನ್ (34)ಎಂಬಾತ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು, ಆತನನ್ನು ವಶಕ್ಕೆ ಪಡೆದರು. ಬಳಿಕ ಆರೋಪಿಯನ್ನು ತಹಸೀಲ್ದಾರ್ ಮನೆಗೆ ಹಾಜರುಪಡಿಸಿದ ನಂತರ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.
ಆರ್ಎಸ್ಎಸ್ ಮೇಲೆ ಎನ್ಐಎ ಇನ್ನೂ ಯಾಕೆ ದಾಳಿ ಮಾಡಿಲ್ಲ: ಎಸ್ಡಿಪಿಐ
ಎನ್ಐಎ ದೇಶಾದ್ಯಂತ ದಾಳಿ ನಡೆಸಿದ ಕಾರಣ ಅದನ್ನು ವಿರೋಧಿಸಿ ಇರ್ಫಾನ್, ಪಿಎಫ್ಐ ಕಾರ್ಯಕರ್ತರು ಮತ್ತು ಇತರರನ್ನು ಬಳಸಿಕೊಂಡು ಮಂಡ್ಯ ಮತ್ತು ಇತರೆ ಕಡೆಗಳಲ್ಲಿ ಗೊಂದಲ ಸೃಷ್ಟಿ ಮಾಡಲು ಹುನ್ನಾರ ನಡೆಸಿದ್ದ ಎನ್ನಲಾಗಿದೆ. ಈ ಬಗ್ಗೆ ಎಚ್ಚೆತ್ತ ಪೊಲೀಸರು ಆತನನ್ನ ಕರೆದು ತಿಳಿ ಹೇಳಿದ್ದರು. ಆದರೂ ಸಹ ನಗರದ ವಿವಿಧಡೆ ಸಭೆಗಳನ್ನು ನಡೆಸಿ ಗೊಂದಲ ಸೃಷ್ಟಿಸುವ ಹುನ್ನಾರ ಮುಂದುವರಿಸಿದ್ದ.
ಇದರಿಂದ ಎಚ್ಚೆತ್ತ ಪೊಲೀಸರು ಇಂದು ಬೆಳಗ್ಗೆ 4 ಗಂಟೆ ವೇಳೆಗೆ ಆತನ ಮೇಲೆ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದರು. ಬಳಿಕ ತಹಸೀಲ್ದಾರ್ ಮಹಮದ್ ಕುಂಞ ಅಹಮದ್ ಅವರ ನಿವಾಸಕ್ಕೆ ಹಾಜರುಪಡಿಸಿ ನಂತರ ಅವರ ಆದೇಶದ ಮೇರೆಗೆ ನ್ಯಾಯಾಂಗ ವಶಕ್ಕೆ ನೀಡಲಾಗಿದೆ.
ಇನ್ನು ಆರೋಪಿ ಇರ್ಫಾನ್ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ಗುತ್ತಲು ಬಡಾವಣೆಯ ಪಿಎಫ್ಐ ಕಾರ್ಯಕರ್ತರು ನಗರದ ವಿನೋಬ ರಸ್ತೆ ಬಳಿ ಇರುವ ತಹಸೀಲ್ದಾರ್ ನಿವಾಸದ ಬಳಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರು ಪ್ರತಿಭಟನಾಕಾರರನ್ನು ತಡೆದು ಮನವೊಲಿಸುವ ಯತ್ನ ನಡೆಸಿದರಾದರು ಪೊಲೀಸರ ವಿರುದ್ಧವೇ ಘೋಷಣೆ ಕೂಗಿದ ಕಾರಣ ಪ್ರತಿಭಟನಾಕಾರರ ಪೈಕಿ ಮೂವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ಯತೀಶ್ ಅವರ ಸೂಚನೆ ಮೇರೆಗೆ ಇನ್ಸ್ಪೆಕ್ಟರ್ ಸಂತೋಷ್ ಮತ್ತು ಪಿಎಸ್ಐ ರಮೇಶ್ ಅವರುಗಳು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದರು. ಈ ಸಂಬಂಧ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಚಾಮರಾಜನಗರದಲ್ಲಿ ಇಬ್ಬರು ಪಿಎಫ್ಐ ಮುಖಂಡರು ಅರೆಸ್ಟ್;
ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿ ಇಬ್ಬರು ಮುಖಂಡರನ್ನು ಚಾಮರಾಜನಗರ ಪೊಲೀಸರು ಬಂಧಿಸಿ, ತಹಸಿಲ್ದಾರ್ ಮುಂದೆ ಹಾಜರು ಪಡಿಸಿದ್ದಾರೆ.
ಪಿಎಫ್ಐ ಸಂಘಟನೆಯ ಜಿಲ್ಲಾಧ್ಯಕ್ಷ ಕಪಿಲ್ ಹಾಗೂ ಕಾರ್ಯದರ್ಶಿ ಶೋಯೆಬ್ ಬಂಧಿತರು. ಬೆಳಗಿನ ಜಾವ ಇವರಿಬ್ಬರ ಮನೆಗಳಿಗೆ ದಾಳಿ ಮಾಡಿ ಇಬ್ಬರನ್ನೂ ಬಂಧಿಸಿ ಚಾಮರಾಜನಗರ ತಹಸಿಲ್ದಾರ್ ನಿವಾಸಕ್ಕೆ ಹಾಜರು ಪಡಿಸಿ ಜಿಲ್ಲಾ ಕಾರಾಗೃಹಕ್ಕೆ ಕರೆತಂದು ಬಿಡಲಾಗಿದೆ.
ಎನ್ಐಎ ಕೊಟ್ಟ ಮಾಹಿತಿ ಮೇರೆಗೆ ಈ ದಾಳಿ ನಡೆಸಿದ್ದಾರೆ ಎನ್ನಲಾಗಿದ್ದು ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡ ಇವರಿಬ್ಬರನ್ನು ಬಂಧಿಸಿದ್ದು ವಿಚಾರಣೆಗೊಳಪಡಿಸುವ ಸಾಧ್ಥತೆ ಇದೆ.