ಮದುವೆಗೆ ಅಡ್ಡಿಯಾದ ಅನೈತಿಕ ಸಂಬಂಧ; ಈತ ಮಾಡಿದ್ದೇನು?
ಮಂಡ್ಯ, ಡಿಸೆಂಬರ್ 2: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ 15 ದಿನಗಳ ಹಿಂದೆ ಕೊಲೆಯಾಗಿದ್ದ ಮೊಬೀನಾ (40) ಹತ್ಯೆ ಪ್ರಕರಣವನ್ನು ಬೇಧಿಸುವಲ್ಲಿ ಮದ್ದೂರು ಪೊಲೀಸರು ಯಶಸ್ವಿಯಾಗಿದ್ದು, ಕೊಲೆ ಸಂಬಂಧ ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.
ಮದ್ದೂರಿನ ಹಳೇ ಎಂ.ಸಿ. ರಸ್ತೆಯ ಫ್ಲವರ್ ಸರ್ಕಲ್ನ ಬಾಳೇಹಣ್ಣಿನ ಮಂಡಿ ವ್ಯಾಪಾರಿ ಹಿದಾಯತ್ ಉಲ್ಲಾಖಾನ್ (35) ಬಂಧಿತ ಆರೋಪಿ. ಈತನನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಮೊಬೀನಾಳ ಇಡೀ ಕೊಲೆ ರಹಸ್ಯ ಬಯಲಿಗೆ ಬಂದಿದೆ.
ತನ್ನ ಗೆಳತಿ ಹಿಂದೆ ಬಿದ್ದಿದ್ದಕ್ಕೆ ಇಂಥ ಘೋರ ಶಿಕ್ಷೆ ಕೊಟ್ಟ ಪ್ರೇಮಿ
ಮದ್ದೂರು ಹೊಳೆ ಬೀದಿ ನಿವಾಸಿ ಮೊಬೀನಾಳೊಂದಿಗೆ ಆರೋಪಿ ಹಿದಾಯತ್ ಹಲವು ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದ. ವಿವಾಹವಾಗುವಂತೆ ಆತನನ್ನು ಮೊಬೀನಾ ಪದೇ ಪದೇ ಪೀಡಿಸುತ್ತಿದ್ದಳು. ಈ ಮಧ್ಯೆ ಆತ ವಿವಾಹವಾಗುವ ಉದ್ದೇಶದಿಂದ ಬೇರೆ ಕಡೆ ಹೆಣ್ಣು ನೋಡಲು ಆರಂಭಿಸಿದ್ದ. ಇದಕ್ಕೆ ಅಡ್ಡಿಪಡಿಸಿದ ಮೊಬೀನಾ ಹಿದಾಯತ್ ನನ್ನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಹೆಣ್ಣು ಕೊಡಲು ಮುಂದೆ ಬರುವ ಪೋಷಕರಿಗೆ ತಿಳಿಸಿ ವಿವಾಹಕ್ಕೆ ಅಡ್ಡಿಪಡಿಸುತ್ತಿದ್ದಳು. ಇದರಿಂದ ಬೇಸತ್ತ ಹಿದಾಯತ್ ಮೊಬೀನಾಳನ್ನು ಕೊಲೆ ಮಾಡಲು ಸಂಚು ರೂಪಿಸಿದ್ದನು.
ತನ್ನ ಬಾಳೇಹಣ್ಣಿನ ಮಂಡಿಯ ಎದುರಿನಲ್ಲಿರುವ ಅಂಗಡಿಯೊಂದರಲ್ಲಿ ಮೊಬೀನಾಳ ಕುತ್ತಿಗೆಗೆ ವೇಲ್ನಿಂದ ಬಿಗಿದು ಕೊಲೆ ಮಾಡಿದ ನಂತರ ಶವವನ್ನು ಗೋಣಿಚೀಲದಲ್ಲಿ ಹಾಕಿ ಸ್ಕೂಟರ್ ನಲ್ಲಿ ಪಟ್ಟಣದ ಹೊರ ವಲಯದಲ್ಲಿರುವ ಶಿಂಷಾ ನದಿ ಸಮೀಪದ ಹೊಳೇ ಆಂಜನೇಯಸ್ವಾಮಿ ದೇಗುಲದ ರಸ್ತೆಯ ಪುರಸಭೆ ಒಳಚರಂಡಿ ನೀರಿನ ಶುದ್ಧೀಕರಣ ಘಟಕದ ಕಾಲುವೆ ಬಳಿ ಬಿಸಾಡಿ ಪರಾರಿಯಾಗಿದ್ದನು.
ಆರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮೊಬೀನಾಳ ಶವ ಕಳೆದ ನ. 17ರಂದು ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಮದ್ದೂರು ಪೊಲೀಸರು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದರು. ಹೊಳೇಬೀದಿಯ ವೈನ್ ಸ್ಟೋರ್ ಒಂದರಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದಾಗ ಆರೋಪಿ ತನ್ನ ಸ್ಕೂಟರ್ನಲ್ಲಿ ಕೊಲೆ ಮಾಡಿದ್ದ ಮೊಬೀನಾಳ ಶವವನ್ನು ಸಾಗಿಸುತ್ತಿದ್ದುದು ಪತ್ತೆಯಾಗಿದೆ.
ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.