ಪ್ರಧಾನಿ ಮೋದಿ ಮೈಸೂರಿನ ಕಾರ್ಯಕ್ರಮಕ್ಕೆ ತೆರಳಲು ಮಂಡ್ಯದಿಂದ 233 ಬಸ್ ವ್ಯವಸ್ಥೆ
ಮಂಡ್ಯ, ಜೂ.19: ಮೈಸೂರಿನ ಮಹಾರಾಜ ಕಾಲೇಜು ಆವರಣದಲ್ಲಿ ಸೋಮವಾರ (ಜೂ.20) ಪ್ರಧಾನಮಂತ್ರಿ ನರೇಂದ್ರಮೋದಿ ನೇತೃತ್ವದಲ್ಲಿ ನಡೆಯಲಿರುವ ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳೊಂದಿಗೆ ಚರ್ಚೆ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಆಯ್ದ ಫಲಾನುಭವಿಗಳನ್ನು ಕರೆತರಲು ಜಿಲ್ಲಾಡಳಿತ ಮಂಡ್ಯದಿಂದ 233 ಬಸ್ ವ್ಯವಸ್ಥೆ ಮಾಡಿದೆ.
ಮಂಡ್ಯದ 233 ಗ್ರಾಮ ಪಂಚಾಯಿತಿಯಿಂದ 11,650 ಮಂದಿ ಫಲಾನುಭವಿಗಳನ್ನು ಕರೆತರಲಾಗುತ್ತಿದ್ದು, ಪ್ರತಿ ಪಂಚಾಯಿತಿಯಿಂದ 50 ಫಲಾನುಭವಿಗಳನ್ನು ಕರೆತರುವುದನ್ನು ಕಡ್ಡಾಯಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಇದಕ್ಕಾಗಿ ತಾಲೂಕುವಾರು ನೋಡಲ್ ಅಧಿಕಾರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೇಮಕ ಮಾಡಿದ್ದಾರೆ.
ಪೈಪ್ಲೈನ್ ಒಡೆದು ಅದಕ್ಕೆ ಕಲುಷಿತ ನೀರು ಸೇರ್ಪಡೆ: ನಗರಕೆರೆಯಲ್ಲಿ ಕಟ್ಟೆಚ್ಚರ
ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಕೇಂದ್ರ ಸರ್ಕಾರದಿಂದ ಸಹಾಯಧನ ಪಡೆಯುತ್ತಿರುವ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ತಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಹಾಯಧನ ಪಡೆಯುತ್ತಿರುವ 50 ಮಂದಿಯನ್ನು ಗುರುತಿಸಿ ಬಸ್ಗಳಲ್ಲಿ ಕರೆತರುವುದು. ಕಾರ್ಯಕ್ರಮ ಮುಗಿದ ಬಳಿಕ ಅವರನ್ನು ಅದೇ ಬಸ್ಗಳಲ್ಲಿ ವಾಪಸ್ ಕರೆದೊಯ್ಯುವುದು ಹಾಗೂ ಊಟೋಪಚಾರದ ವ್ಯವಸ್ಥೆಯನ್ನು ಯಾವುದೇ ಲೋಪಗಳಿಲ್ಲದೆ ನಡೆಸುವಂತೆ ಸೂಚಿಸಿದ್ದಾರೆ. ಗ್ರಾಪಂ ನೋಡಲ್ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಅವರ ಮೊಬೈಲ್ ಸಂಖ್ಯೆಗಳನ್ನು ಬಸ್ಗಳಿಗೆ ನೇಮಿಸಿರುವ ನೋಡಲ್ ಅಧಿಕಾರಿಗಳಿಗೆ ನೀಡಲಾಗಿದೆ.
ಗ್ರಾಮೀಣ ಭಾಗಕ್ಕೆ ಬಸ್ಗಳ ವ್ಯತ್ಯಯ ಸಂಭವ
ಮೈಸೂರಿನಲ್ಲಿ ನಡೆಯಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ 233 ಸಾರಿಗೆ ಬಸ್ಗಳು ತೆರಳುತ್ತಿರುವುದರಿಂದ ಗ್ರಾಮೀಣ ಭಾಗದ ಸಾರಿಗೆ ಬಸ್ಗಳ ಸಂಚಾರದಲ್ಲಿ ಸೋಮವಾರ ವ್ಯತ್ಯಯವಾಗುವ ಸಾಧ್ಯತೆಗಳಿವೆ.
ಮಾರದೇವನಹಳ್ಳಿ ಕೆರೆಗೆ ವಿಷಹಾಕಿದ ಕಿಡಿಗೇಡಿಗಳು, ಸಾವಿರಾರು ಮೀನುಗಳ ಮಾರಣಹೋಮ
ಜಿಲ್ಲೆಯಲ್ಲಿರುವ 447 ಬಸ್ಗಳ ಪೈಕಿ 422 ಬಸ್ಗಳು ನಿತ್ಯ ವಿವಿಧ ಭಾಗಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದವು. ಸೋಮವಾರ 233 ಸಾರಿಗೆ ಬಸ್ಗಳು ಮೈಸೂರಿಗೆ ತೆರಳುತ್ತಿವೆ. ಉಳಿದ 189 ಬಸ್ಗಳು ಮಾತ್ರ ಸಂಚಾರ ನಡೆಸಲಿವೆ. ಮಂಡ್ಯ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಟಿ.ನಾಗರಾಜ್ ಹೇಳುವ ಪ್ರಕಾರ, "ಮಂಡ್ಯದಿಂದ ಬೆಂಗಳೂರು ಮಾರ್ಗದಲ್ಲಿ ತೆರಳುವ ಹೆಚ್ಚಿನ ಸಂಖ್ಯೆಯ ಬಸ್ಗಳನ್ನು ಮೈಸೂರಿಗೆ ಕಳುಹಿಸಲಾಗುವುದು. ಗ್ರಾಮೀಣ ಭಾಗದ ಜನರಿಗೆ ತೊಂದರೆಯಾಗದಂತೆ ಬಸ್ಗಳನ್ನು ಸಂಚಾರಕ್ಕೆ ಬಿಡಲಾಗುವುದು. ಎಲ್ಲಿ ಹೆಚ್ಚಿನ ಪ್ರಯಾಣಿಕರ ಒತ್ತಡವಿರುವುದೋ ಅಲ್ಲಿಗೆ ಬಸ್ಗಳ ಕಾರ್ಯಾಚರಣೆ ನಡೆಸಿ ಪರಿಸ್ಥಿತಿ ನಿಭಾಯಿಸುವುದಾಗಿ," ತಿಳಿಸಿದರು.