ತನ್ನ ಕನಸಿನ ಮನೆ ಉಳಿಸಿಕೊಳ್ಳಲೇಬೇಕೆಂದು ಮಾಲೀಕ ಮಾಡಿದ್ದೇನು ಗೊತ್ತಾ?
ಮಂಡ್ಯ, ಜನವರಿ 02: ರಸ್ತೆ ಕಾಮಗಾರಿ, ವಾಸ್ತು ಕಾರಣದಿಂದಾಗಿ ದೊಡ್ಡ ದೊಡ್ಡ ಮರ, ದೇವಸ್ಥಾನಗಳನ್ನು ಅಡಿಪಾಯದ ಸಮೇತ ಲಿಫ್ಟ್ ಮಾಡುವುದನ್ನು ಕೇಳಿದ್ದೇವೆ. ಅದೇ ರೀತಿ ಇಲ್ಲೊಬ್ಬರು ತಮ್ಮ ಮನೆಯನ್ನೇ ಸ್ಥಳಾಂತರ ಮಾಡಲು ಮುಂದಾಗಿದ್ದಾರೆ.
ಬೈಪಾಸ್ ನಿರ್ಮಾಣದ ಕಾರಣದಿಂದಾಗಿ ಮನೆಯೊಂದನ್ನು ಒಡೆಯಬೇಕಾದ ಪರಿಸ್ಥಿತಿ ಬಂದಿತ್ತು. ಹೀಗಾಗಿ ಆ ತನ್ನ ಕನಸಿನ ಮನೆಯನ್ನು ಉಳಿಸಿಕೊಳ್ಳಲೇಬೇಕೆಂದು 20 ಲಕ್ಷ ರೂ. ಖರ್ಚು ಮಾಡಿ ಸ್ಥಳಾಂತರಿಸುವ ಕಾರ್ಯಕ್ಕೆ ಕೈಹಾಕಿದ್ದಾರೆ.
ನೆರೆ ತಪ್ಪಿಸಿಕೊಳ್ಳಲು ಬೈಲಗುತ್ತು ನಿವಾಸಿ ಮಾಡಿದ ಸಾಹಸವೇನು ಗೊತ್ತಾ?
ಕೋಣನಹಳ್ಳಿಯ ಮಲ್ಲಿಕಾರ್ಜುನ್ 5 ವರ್ಷದ ಹಿಂದೆ ವಿ.ಸಿ.ಫಾರಂ ಮಾರ್ಗಮಧ್ಯೆ 36 ಚದರ ಅಡಿಯಲ್ಲಿ ಮನೆ ಕಟ್ಟಿಕೊಂಡು ವಾಸವಿದ್ದಾರೆ. ಮೇಲಂತಸ್ತಿನಲ್ಲಿ 2 ಚಿಕ್ಕ ಮನೆಗಳನ್ನು ಕಟ್ಟಿ ಬಾಡಿಗೆಗೆ ಕೊಟ್ಟಿದ್ದಾರೆ. ಆದರೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆ ತಗ್ಗಿಸುವ ಉದ್ದೇಶದಿಂದ ಆರಂಭವಾಗಿರುವ ಬೈಪಾಸ್ ರಸ್ತೆ ವಿಸ್ತರಣೆ ಕಾಮಗಾರಿಯಿಂದಾಗಿ ಮನೆಯ ಅರ್ಧ ಭಾಗವನ್ನೇ ಒಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಹೊಸ ಮನೆ ಕಟ್ಟಲು ಲಕ್ಷಾಂತರ ರೂಪಾಯಿ ವೆಚ್ಚವಾಗುವುದಲ್ಲದೆ ಗುಣಮಟ್ಟದ ಮರಳು ಸಿಗುವುದೂ ಕಷ್ಟ. ಜೊತೆಗೆ ಇಷ್ಟಪಟ್ಟು ಕಟ್ಟಿದ ಮನೆ ಒಡೆಯಲು ಇಷ್ಟವಿಲ್ಲದ ಮಲ್ಲಿಕಾರ್ಜುನ್, ಲಿಫ್ಟಿಂಗ್ ಯೋಜನೆ ರೂಪಿಸಿ ಹರಿಯಾಣ ಮೂಲದ ಕಂಪನಿ ಮೊರೆ ಹೋಗಿದ್ದಾರೆ.
20 ಲಕ್ಷ ರೂ. ವೆಚ್ಚದಲ್ಲಿ ಮನೆ ಲಿಫ್ಟಿಂಗ್ ಮಾಡಲು ಒಪ್ಪಂದವಾದ ಬಳಿಕ ಕೆಲಸ ಆರಂಭವಾಗಿದೆ. 2 ತಿಂಗಳಿನಲ್ಲಿ ಮನೆಯನ್ನು 3 ಅಡಿ ಎತ್ತರಿಸಲಾಗಿದೆ. ಇನ್ನು 15 ದಿನದಲ್ಲಿ ಕಾಂಪೌಂಡ್ ಹೊರತುಪಡಿಸಿ 45 ಅಡಿ ಹಿಂದಕ್ಕೆ ಮತ್ತು 20 ಅಡಿ ಪಕ್ಕಕ್ಕೆ ಲಿಫ್ಟ್ ಮಾಡಲಾಗುತ್ತದೆ.
ಅರೆರೆ, ಮೈಸೂರಿನಲ್ಲಿ ಅಲ್ಲಿಂದ ಇಲ್ಲಿಗೆ ಬಂತು ಅರಳಿಮರ!
ಒಪ್ಪಂದದಂತೆ, ಕೆಲಸ ಪ್ರಾರಂಭಕ್ಕೆ ಮುನ್ನ ಆಗಿರುವ ಡ್ಯಾಮೇಜ್ ಹೊರತುಪಡಿಸಿ ಲಿಫ್ಟಿಂಗ್ ಪೂರ್ಣಗೊಳ್ಳುವವರೆಗೆ ಮನೆ ಕಂಪನಿ ವಶದಲ್ಲಿರುತ್ತದೆ. ಈ ವೇಳೆ ಡ್ಯಾಮೇಜ್ ಆದರೆ ಕಂಪನಿಯೇ ಸರಿಪಡಿಸಿಕೊಳ್ಳಬೇಕಿದೆ.