ಆಯುರ್ವೇದ ವೈದ್ಯ ನೀಡಿದ ಚುಚ್ಚುಮದ್ದೇ ವಿಷವಾಯ್ತು, ವ್ಯಕ್ತಿ ಸಾವು
ಮಂಡ್ಯ, ನವೆಂಬರ್ 22: ಆಯುರ್ವೇದ ವೈದ್ಯರೊಬ್ಬರು ನೀಡಿದ ಚುಚ್ಚುಮದ್ದು ವ್ಯತಿರಿಕ್ತ ಪರಿಣಾಮ ಬೀರಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಮಳವಳ್ಳಿಯ ದಡಮಹಳ್ಳಿಯಲ್ಲಿ ನಡೆದಿದೆ.
ದಡಮಹಳ್ಳಿ ಗ್ರಾಮದ ನಿವಾಸಿ ಶಿವಲಿಂಗೇಗೌಡ (58) ಎಂಬುವರೇ ಸಾವನ್ನಪ್ಪಿದ ದುರ್ದೈವಿ. ಇವರಿಗೆ ಆಯುರ್ವೇದ ವೈದ್ಯ ಕೃಷ್ಣಮೂರ್ತಿ ಎಂಬುವರು ಜ್ವರಕ್ಕೆಂದು ಚುಚ್ಚುಮದ್ದು ನೀಡಿದ್ದು, ಅದು ವ್ಯತಿರಿಕ್ತ ಪರಿಣಾಮ ಬೀರಿದ್ದೇ ಸಾವಿಗೆ ಕಾರಣ ಎನ್ನಲಾಗಿದೆ. ವೈದ್ಯ ಕೃಷ್ಣಮೂರ್ತಿ ಎಂಬಾತ ಮಂಗಳೂರು ಮೂಲದವನಾಗಿದ್ದು, ತೊರೆಕಾಡನಹಳ್ಳಿ ಗ್ರಾಮದಲ್ಲಿ ಖಾಸಗಿ ಕ್ಲಿನಿಕ್ ನಡೆಸುತ್ತಿದ್ದ. ಈತನ ಬಳಿಗೆ ಜ್ವರದಿಂದ ಬಳಲುತ್ತಿದ್ದ ದಡಮಹಳ್ಳಿ ಗ್ರಾಮದ ಶಿವಲಿಂಗೇಗೌಡ ಭಾನುವಾರ ಸಂಜೆ ಬಂದಿದ್ದು, ಪರೀಕ್ಷಿಸಿ ಜ್ವರಕ್ಕೆ ಚುಚ್ಚುಮದ್ದು ನೀಡಲಾಗಿತ್ತು. ಚುಚ್ಚುಮದ್ದು ನೀಡಿದ ಸ್ಥಳದಲ್ಲಿ ಶಿವಲಿಂಗೇಗೌಡ ಅವರಿಗೆ ಊತ ಕಾಣಿಸಿಕೊಂಡಿದೆ. ಹೀಗಾಗಿ ಸೋಮವಾರ ಕ್ಲಿನಿಕ್ ಗೆ ತೆರಳಿ ವೈದ್ಯರಿಗೆ ತಿಳಿಸಿದಾಗ ಇದರಿಂದ ಏನು ತೊಂದರೆ ಆಗಲ್ಲ, ಔಷಧಿ ಹಚ್ಚಿದರೆ ಗುಣವಾಗಲಿದೆ ಎಂದು ಸಮಾಧಾನಿಸಿ ಕಳುಹಿಸಿದ್ದಾರೆ.
ಗರ್ಭಿಣಿಗೆ ಎಚ್ ಐವಿ ಸೋಂಕಿನ ರಕ್ತ ನೀಡಿದ ಸರ್ಕಾರಿ ಆಸ್ಪತ್ರೆ!
ಆದರೆ ನೋವು ತಾಳಲಾರದ ಶಿವಲಿಂಗೇಗೌಡ ಮಂಡ್ಯ ಜಿಲ್ಲಾಸ್ಪತ್ರೆಗೆ ಹೋದಾಗ, ವೈದ್ಯರು, ಚುಚ್ಚುಮದ್ದು ಪಡೆದ ಜಾಗ ವಿಷಯುಕ್ತವಾಗಿದ್ದು ಪೂರ್ತಿ ದೇಹಕ್ಕೆ ಹರಡುವ ಸಂಭವವಿದೆ ಎಂದಿದ್ದಾರೆ. ಹೀಗಾಗಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿಯೇ ದೇಹಪೂರ್ತಿ ವಿಷಮಯವಾದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಮೃತಪಟ್ಟಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ತಾಲೂಕು ವೈದ್ಯಾಧಿಕಾರಿ ಡಾ.ವೀರಭದ್ರಪ್ಪ ಭೇಟಿ ನೀಡಿದ್ದು, ಈ ವೈದ್ಯನ ಬಳಿ ವೈದ್ಯಕೀಯ ವೃತ್ತಿಗೆ ಸಂಬಂಧಿಸಿದ ಯಾವುದೇ ದಾಖಲೆಗಳು ಇರಲಿಲ್ಲ ಎಂಬುದು ತಿಳಿದುಬಂದಿದೆ. ಹೀಗಾಗಿ ಕ್ಲಿನಿಕ್ ಮುಚ್ಚಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ಯಾಕ್ಟೀರಿಯಾ ಸೋಂಕು; ಶಿಕಾರಿಪುರದಲ್ಲಿ ರಾತ್ರಿ ಕಳೆದು ಬೆಳಗಾಗುವುದರಲ್ಲಿ 60 ಕುರಿಗಳು ಸಾವು
ಘಟನೆಗೆ ಸಂಬಂಧಿಸಿದಂತೆ ಮೃತರ ಸಂಬಂಧಿ ನಂದೀಶ್ ಮಾತನಾಡಿ, ವೈದ್ಯ ಕೃಷ್ಣಮೂರ್ತಿ ಬಳಿ ಚಿಕುನ್ ಗುನ್ಯಾ, ಮಂಡಿ ನೋವು ಸೇರಿದಂತೆ ಇತರೆ ಕಾಯಿಲೆಗಳಿಗೆ ಚಿಕಿತ್ಸೆ ಪಡೆದರೆ ಶೀಘ್ರ ಗುಣವಾಗುತ್ತದೆ ಎಂದು ದೂರದ ಗ್ರಾಮಗಳಿಂದ ನೂರಾರು ರೋಗಿಗಳು ಬರುತ್ತಾರೆ. ಹೀಗಾಗಿ ಬೇರೆಯವರ ಜೀವಕ್ಕೆ ಆಪತ್ತು ಬರುವ ಮುನ್ನ ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.