ಇನ್ನು ಮುಂದೆ ರಂಗನತಿಟ್ಟಿನಲ್ಲಿ ವರ್ಷ ಪೂರ್ತಿ ಪ್ರವಾಸಿಗರಿಗೆ ಬೋಟಿಂಗ್ ಅನುಭವ
ಮಂಡ್ಯ, ಜೂನ್ 22 : ಪಕ್ಷಿ ಕಾಶಿ ಎಂದೇ ಹೆಸರಾದ ಮಂಡ್ಯ ಜಿಲ್ಲೆಯ ರಂಗನತಿಟ್ಟು ಪಕ್ಷಿಧಾಮದಲ್ಲಿ ಪ್ರವಾಸಿಗರಿಗೆ ಇನ್ನುಮುಂದೆ ವರ್ಷ ಪೂರ್ತಿ ಬೋಟಿಂಗ್ ಅನುಭವ ದೊರೆಯಲಿದೆ. ನದಿಯಲ್ಲಿ ಮಂಡಿಯುದ್ದ ನೀರಿದ್ದರೂ ನಡೆಯುವ ಸಮತಟ್ಟಾದ ತಳ ಹೊಂದಿರುವ ಹೊಸ ವಿನ್ಯಾಸದ ದೋಣಿಗಳು ಕಾವೇರಿ ನದಿಗೆ ಇಳಿಯಲಿವೆ.
18 ಜನರು ಕೂರಬಹುದಾದ ಹೊಸ ಮಾದರಿಯ ದೋಣಿಯೊಂದು ವಾರದಿಂದ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದೆ. ಇಂತಹ ಇನ್ನೂ ನಾಲ್ಕು ದೋಣಿಗಳು ಪಕ್ಷಿಧಾಮಕ್ಕೆ ಶೀಘ್ರ ಬರಲಿವೆ. ಬೇಸಿಗೆ ವೇಳೆ ಕಾವೇರಿ ನದಿಯಲ್ಲಿ ನೀರು ಕಡಿಮೆಯಾಗುತ್ತಿದ್ದ ಸಂದರ್ಭದಲ್ಲಿ ಬೋಟಿಂಗ್ ಸ್ಥಗಿತಗೊಳ್ಳುತ್ತಿತ್ತು. ದೋಣಿಯಲ್ಲಿ ಸಾಗುತ್ತಾ ಪಕ್ಷಿಗಳನ್ನು ಕಣ್ತುಂಬಿ ಕೊಳ್ಳುತ್ತಿದ್ದ ಪ್ರವಾಸಿಗರು ಬೇಸರ ಮಾಡಿಕೊಳ್ಳುತ್ತಿದ್ದರು. ಕಲ್ಲುಗಳ ಮೇಲೆ ನಿದ್ದೆ ಮಾಡುತ್ತಿದ್ದ ಮೊಸಳೆಗಳನ್ನು ವೀಕ್ಷಿಸುವ ಅನುಭವ ತಪ್ಪಿ ಹೋಗುತ್ತಿತ್ತು.
ರಂಗನತಿಟ್ಟು ಪಕ್ಷಿಧಾಮಕ್ಕೆ ಸಿಗಲಿದೆಯೇ ಅಂತರಾಷ್ಟ್ರೀಯ ಮಾನ್ಯತೆ?
ಪ್ರವಾಸಿಗರಿಗೆ ವರ್ಷದ 365 ದಿನಗಳೂ ಬೋಟಿಂಗ್ ಅನುಭವ ನೀಡುವ ಉದ್ದೇಶದಿಂದ ಎರಡು ಅಡಿ ನೀರಿನಲ್ಲೂ ನಡೆಯುವ ದೋಣಿಯನ್ನು ಅಭಿವೃದ್ಧಿ ಪಡಿಸಲಾಗಿದೆ. ಬೆಂಗಳೂರಿನ ಕರ್ನಾಟಕ ದೋಣಿ ಕೇಂದ್ರ ಐದು ಹೊಸ ದೋಣಿಗಳನ್ನು ರಂಗನತಿಟ್ಟು ಪಕ್ಷಿಧಾಮಕ್ಕೆ ನೀಡುತ್ತಿದೆ.
ಪ್ರವಾಸಿಗರ ಸಂಖ್ಯೆ ಹೆಚ್ಚಳ : ಮಳೆಗಾಲ ಆರಂಭಗೊಂಡಿದ್ದು, ರಂಗನತಿಟ್ಟು ಪಕ್ಷಿಧಾಮ ಹಸಿರಿನಿಂದ ಕಂಗೊಳಿಸುತ್ತಿದೆ. ದೇಶ, ವಿದೇಶಗಳ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತಿದೆ.
ರಂಗನತಿಟ್ಟಿನಲ್ಲಿ ಪಕ್ಷಿಗಣತಿ: ಒಂದೇ ದಿನ 60 ಜಾತಿ ಹಕ್ಕಿಗಳು ಪತ್ತೆ
ಇತ್ತೀಚೆಗಷ್ಟೇ ಹಕ್ಕಿ ಗಣತಿ ಪೂರ್ಣಗೊಂಡಿದ್ದು, 65 ಜಾತಿಯ 3 ಸಾವಿರಕ್ಕೂ ಹೆಚ್ಚು ಹಕ್ಕಿಗಳನ್ನು ಗುರುತಿಸಲಾಗಿದೆ. ದೇಶ, ವಿದೇಶಗಳಿಂದ ಬರುವ ಪ್ರವಾಸಿಗರು ಪಕ್ಷಿಧಾಮದ ಆವರಣದಲ್ಲಿರುವ ಹಸಿರು ವಾತಾವರಣವನ್ನು ಕಣ್ಣು ತುಂಬಿಕೊಳ್ಳುತ್ತಿದ್ದಾರೆ. ದ್ವೀಪಗಳ ಸುತ್ತಲೂ ದೋಣಿ ವಿಹಾರದಲ್ಲಿ ತೆರಳಿ ಪಕ್ಷಿಗಳ ಕಲರವ ಅನುಭವಿಸುತ್ತಿದ್ದಾರೆ.