ಮುಂಬೈ ಟು ಮಂಡ್ಯ; ಸದ್ದಿಲ್ಲದೇ ಬಂದು ಸೇರಿದ ಕೊರೊನಾ
ಮಂಡ್ಯ, ಮೇ 15: ಮಂಡ್ಯ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಹೋಗುತ್ತಿರುವುದು ಜನತೆಯಲ್ಲಿ ಭೀತಿಯನ್ನುಂಟು ಮಾಡಿದೆಯಲ್ಲದೆ, ಜಿಲ್ಲಾಡಳಿತಕ್ಕೂ ಸವಾಲಾಗಿ ಪರಿಣಮಿಸಿದೆ.
ಮೊದಲಿಗೆ ನಂಜನಗೂಡು ಜುಬಿಲಿಯಂಟ್ ಹಾಗೂ ತಬ್ಲಿಘಿ ಸಂಪರ್ಕದಿಂದ ಆರಂಭವಾದ ಸೋಂಕು ದಿನ ಕಳೆದಂತೆ ಹೆಚ್ಚುತ್ತಲೇ ಹೋಗುತ್ತಿದ್ದು, ಇನ್ನೇನು ಸೋಂಕು ಕಡಿಮೆಯಾಗುತ್ತಿದೆ ಎನ್ನುವಾಗಲೇ ಮುಂಬೈನಿಂದ ಬರುತ್ತಿರುವವರಿಂದ ಸೋಂಕಿನ ಪ್ರಮಾಣ ಹೆಚ್ಚಾಗುತ್ತಾ ಹೋಗುತ್ತಿದೆ. ಇದೀಗ ಸೋಂಕಿತರ ಸಂಖ್ಯೆ 35ಕ್ಕೆ ಏರಿದೆ.
ಮುಂಬೈನಿಂದ ಸಾರಂಗಿ ಗ್ರಾಮಕ್ಕೆ ಬಂದಿದ್ದ ಮಹಿಳೆಗೆ ಕೊರೊನಾ
ಸದ್ಯ ಸೋಂಕಿತರನ್ನು ಪಿ-961, ಪಿ-962, ಪಿ-963, ಪಿ-964 ಎಂದು ಗುರುತಿಸಲಾಗಿದೆ. ಪಿ-961 ಸೋಂಕಿತೆ ಮೂಲತಃ ಕೆ.ಆರ್.ಪೇಟೆ ತಾಲೂಕು ಜಾಗಿನಕೆರೆ ಸಮೀಪದ ಸಾರಂಗಿ ಗ್ರಾಮದವರಾಗಿದ್ದು, 48 ವರ್ಷದ ಮಹಿಳೆಯಾಗಿದ್ದಾರೆ. ಇವರು ಹಲವು ವರ್ಷಗಳಿಂದ ಮುಂಬೈನ ಅಂಧೇರಿ ಈಸ್ಟ್ನಲ್ಲಿ ಪತಿ ಜೊತೆ ವಾಸವಾಗಿದ್ದರು. ಪತಿ ಆಟೋ ಚಾಲಕನಾಗಿದ್ದು, ಮಗ ಬ್ಯಾಂಕ್ ಉದ್ಯೋಗಿಯಾಗಿದ್ದಾನೆ. ಇವರು ಮುಂಬೈನಲ್ಲಿ ಜೀವನ ನಡೆಸುವುದು ಕಷ್ಟವಾದ ಹಿನ್ನೆಲೆಯಲ್ಲಿ ಪಾಸ್ ತೆಗೆದುಕೊಂಡು ಮೇ 10ರಂದು ಮುಂಬೈನಿಂದ ಟಿಟಿ ವಾಹನದಲ್ಲಿ ಪ್ರಯಾಣ ಆರಂಭಿಸಿ 11ರಂದು ತುಮಕೂರು ಜಿಲ್ಲೆ ಮಾಯಸಂದ್ರ ಚೆಕ್ಪೋಸ್ಟ್ ಮೂಲಕ ಜಿಲ್ಲೆಗೆ ಪ್ರವೇಶ ಪಡೆದಿದ್ದರು. ಹೀಗಾಗಿ ಅವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು. ಮೇ 13ರಂದು ಗಂಟಲುದ್ರವವನ್ನು ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ಇರುವುದು ದೃಢಪಟ್ಟಿದೆ. ಇವರ ಪ್ರಾಥಮಿಕ ಸಂಪರ್ಕದಲ್ಲಿ ಈಕೆಯ ಪತಿ ಹಾಗೂ ಮಗನನ್ನು ಗುರುತಿಸಲಾಗಿದೆ. ಇಬ್ಬರಲ್ಲೂ ಸೋಂಕು ಇಲ್ಲದಿರುವುದು ಕಂಡುಬಂದಿದೆ.
ಮಂಡ್ಯದಲ್ಲಿ ಮುಂಬೈನಿಂದ ಬಂದಿದ್ದ ಗರ್ಭಿಣಿ ಸೇರಿ ಇಬ್ಬರು ಮಹಿಳೆಯರಿಗೆ ಕೊರೊನಾ
ಮುಂಬೈನ ಹೋಟೆಲ್ ನಲ್ಲಿ ಬೌನ್ಸರ್ ಆಗಿದ್ದ ವ್ಯಕ್ತಿ
ಇನ್ನು ಪಿ-962ರ ಸೋಂಕಿತ 38 ವರ್ಷದ ವ್ಯಕ್ತಿಯಾಗಿದ್ದು, ಇವರು ಮೂಲತಃ ನಾಗಮಂಗಲ ತಾಲೂಕು ಗಿಡದಹೊಸಹಳ್ಳಿ ಗ್ರಾಮದವರಾಗಿದ್ದಾರೆ. ಕೆ.ಆರ್.ಪೇಟೆಯ ಜಯನಗರದಲ್ಲಿ ವಾಸವಾಗಿದ್ದರು. ಹತ್ತು ವರ್ಷದಿಂದ ಮುಂಬೈನ ನೆಹರುನಗರದ ವಿಲೆಪಾರ್ಲೆಯ ಮುಂಬೈ ವೆಸ್ಟ್ನಲ್ಲಿರುವ ಹೋಟೆಲ್ನಲ್ಲಿ ಬೌನ್ಸರ್ ಆಗಿ ಕೆಲಸ ಮಾಡಿಕೊಂಡಿದ್ದನು. ಮುಂಬೈನ ಸಾಂತಾಕ್ರೂಜ್ನ ವೆಸ್ಟ್ಲಿಂಕ್ ರಸ್ತೆಯಲ್ಲಿ ವಾಸವಾಗಿದ್ದರು. ಮೇ 10ರಂದು ಟೆಂಪೋ ಟ್ರಾವೆಲ್ ಮೂಲಕ ವಿಲೆಪಾರ್ಲೆಯಿಂದ ಪತ್ನಿ ಹಾಗೂ ಪುತ್ರನೊಂದಿಗೆ ಪ್ರಯಾಣ ಆರಂಭಿಸಿದ ವ್ಯಕ್ತಿ ಮೇ 11ರಂದು ಮಾಯಸಂದ್ರ ಮೂಲಕ ಬಂದಿದ್ದು, ಇವರನ್ನು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಬಳಿಕ ಗಂಟಲು ದ್ರವವನ್ನು ಪರೀಕ್ಷೆಗೊಳಪಡಿಸಿದಾಗ ಸೋಂಕಿರುವುದು ಪತ್ತೆಯಾಗಿದೆ.
6 ವರ್ಷದ ಬಾಲಕನಿಗೂ ಸೋಂಕು
ಪಿ-963ರ ಸೋಂಕಿತ 6 ವರ್ಷದ ಬಾಲಕನಾಗಿದ್ದು, ಪಿ-962ರ ಪುತ್ರನಾಗಿದ್ದಾನೆ. ಈತ ಕೂಡ ತಂದೆ-ತಾಯಿಯೊಂದಿಗೆ ಬಂದಿದ್ದಾನೆ. ಪಿ-964ರ ಸೋಂಕಿತ 26 ವರ್ಷದ ವ್ಯಕ್ತಿಯಾಗಿದ್ದು, ಮುಂಬೈ ಸೆಂಟ್ರಲ್ನ ಮೆರಿನ್ ಡ್ರೈವ್ನಲ್ಲಿ ವಾಸವಾಗಿದ್ದರು. ಕಳೆದ ಹಲವಾರು ವರ್ಷಗಳಿಂದ ಹೋಟೆಲ್ನಲ್ಲಿ ಕೆಲಸ ಮಾಡಿಕೊಂಡಿದ್ದರು. ಇವರು ಬಸ್ ಮೂಲಕ ಸ್ನೇಹಿತರೊಂದಿಗೆ ಮಾ.29ರಂದು ಮುಂಬೈನಿಂದ ಮಡಗಾಂವ್ಗೆ ಆಗಮಿಸಿ ಮೇ 8ರವರೆಗೂ ಅಲ್ಲಿಯೇ ವಾಸವಾಗಿದ್ದರು. ಬಳಿಕ ಮೇ 10ರಂದು ಕೆ.ಆರ್.ಪೇಟೆಗೆ ಆಗಮಿಸಿದ ಇವರನ್ನು ಮೊರಾರ್ಜಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಅದೇ ದಿನ ಗಂಟಲುದ್ರವವನ್ನು ಪರೀಕ್ಷೆಗೆ ಕಳುಹಿಸಿದ್ದು, ಪರೀಕ್ಷಾ ವರದಿಯಲ್ಲಿ ಸೋಂಕಿರುವುದು ದೃಢಪಟ್ಟಿದೆ.
ಮಂಡ್ಯದಲ್ಲಿ ಮತ್ತೆ ನಾಲ್ವರಿಗೆ ಕೊರೊನಾ ಪಾಸಿಟಿವ್
ಜಿಲ್ಲೆಯಲ್ಲಿ 19 ಮಂದಿ ಗುಣಮುಖ
ಇವರೊಂದಿಗೆ ಏಳು ಜನ ಪ್ರಾಥಮಿಕ ಸಂಪರ್ಕ ಹಾಗೂ ಐದು ಜನರನ್ನು ಎರಡನೇ ಹಂತದ ಸಂಪರ್ಕದಲ್ಲಿ ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ. ಜಿಲ್ಲೆಯಲ್ಲಿರುವ ಒಟ್ಟು ಸೋಂಕಿತರಲ್ಲಿ 19 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮಂಡ್ಯ, ಮಳವಳ್ಳಿ ಹಾಗೂ ನಾಗಮಂಗಲ ತಾಲೂಕು ಸಾತೇನಹಳ್ಳಿ ಗ್ರಾಮದ ಸೋಂಕಿತರು ಗುಣಮುಖರಾಗಿದ್ದಾರೆ.