ರಾಜ್ಯದ ಜನ ಮಂಡ್ಯದತ್ತ ಕಣ್ಣಿಟ್ಟು ನೋಡುತ್ತಿರುವುದೇಕೆ?
ಮಂಡ್ಯ, ಏಪ್ರಿಲ್ 02: ಮಂಡ್ಯದಲ್ಲಿ ಅಧಿಕಾರ ಪ್ರಭಾವ ಬಳಸಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಗೆಲುವಿಗಾಗಿ ಹಲವು ತಂತ್ರಗಳನ್ನು ಮಾಡುತ್ತಿದ್ದಾರೆ ಎಂಬ ಆರೋಪವನ್ನು ಮಂಡ್ಯ ಲೋಕಸಭಾ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಮಾಡಿದ್ದಾರೆ.
ಅಷ್ಟೇ ಅಲ್ಲ, ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಕೆ ವೇಳೆ ಮತ್ತು ನಂತರದ ಬೆಳವಣಿಗೆಗಳನ್ನು ಜನರ ಮುಂದೆ ತೆರೆದಿಟ್ಟಿದ್ದಾರೆ. ಇದು ದಳಪತಿಗಳು ನಿಗಿನಿಗಿ ಕೆಂಡದಂತಾಗಲು ಕಾರಣವಾಗಿದೆ.
ಸುಮಲತಾ ಜಾತಿ ಕೆದಕುವ ಶಿವರಾಮೇಗೌಡ್ರೇ, ಸೋನಿಯಾ ಬಳಿಯೂ ಇದನ್ನೇ ಕೇಳ್ತೀರಾ?
ಯಾವಾಗ ಸುಮಲತಾ ಅವರು ಮಾಧ್ಯಮದ ಮುಂದೆ ತಮ್ಮ ಆರೋಪಗಳನ್ನು ಸಾಕ್ಷಿ ಸಹಿತ ಬಿಚ್ಚಿಡುತ್ತಾ ಹೋದರೋ ಮಂಡ್ಯದಲ್ಲಿ ಆರೋಪ ಪ್ರತ್ಯಾರೋಪಗಳ ಸುರಿಮಳೆ ಆರಂಭವಾಗಿದೆ. ಆರೋಪ-ಪ್ರತ್ಯರೋಪಗಳ ಸುರಿಮಳೆ ಪಕ್ಷೇತರ ಅಭ್ಯರ್ಥಿ ಸುಮಲತಾ ಬೆಂಬಲಕ್ಕೆ ಜೋಡೆತ್ತಾಗಿ ದರ್ಶನ್ ಮತ್ತು ಯಶ್ ನಿಂತಿದ್ದರೆ, ಅತ್ತ ನಿಖಿಲ್ ಗೆ ಬೆನ್ನೆಲುಬಾಗಿ ತಂದೆ ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ನಿಂತಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಈ ಜೋಡೆತ್ತುಗಳ ಬಗ್ಗೆ ಕಾರ್ಯಕರ್ತರ ವಲಯದಲ್ಲಿ ಟೀಕಾಸ್ತ್ರಗಳು ನಡೆಯುತ್ತಲೇ ಇದೆ. ಕುಮಾರಸ್ವಾಮಿ ಅವರು ದರ್ಶನ್ ಮತ್ತು ಯಶ್ ಜೋಡೆತ್ತುಗಳಲ್ಲ ಕಳ್ಳ ಎತ್ತುಗಳು ಎಂದರೆ, ಅತ್ತ ಸುಮಲತಾ ಅಭಿಮಾನಿಗಳು ಎಚ್ಡಿಕೆ ಮತ್ತು ಡಿಕೆಶಿ ಜೋಡೆತ್ತುಗಳಲ್ಲ ಮುದಿ ಎತ್ತುಗಳು ಎಂದು ಹಾಸ್ಯ ಮಾಡುತ್ತಿದ್ದಾರೆ. ಮುಂದೆ ಓದಿ...
ನಿಖಿಲ್ ಕುಮಾರಸ್ವಾಮಿಯನ್ನು ಏಕೆ ಗೆಲ್ಲಿಸಬೇಕು?
ಒಂದೆಡೆ ಕುಟುಂಬ ರಾಜಕಾರಣದ ವಿರುದ್ಧ ಆಕ್ರೋಶಗಳು ಕೇಳಿ ಬರುತ್ತಿದ್ದರೆ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಕುಮಾರಸ್ವಾಮಿ ಅವರು ತನ್ನ ಪುತ್ರ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯೂ ಆಗಿರುವ ನಿಖಿಲ್ ಕುಮಾರಸ್ವಾಮಿಯನ್ನು ಏಕೆ ಗೆಲ್ಲಿಸಬೇಕು ಎಂಬುದಕ್ಕೆ ಕಾರಣಗಳ ದೊಡ್ಡ ಪಟ್ಟಿಯನ್ನೇ ಮುಂದಿಟ್ಟಿದ್ದಾರೆ. ಅದು ಹೀಗಿದೆ. ಆತ(ನಿಖಿಲ್) ಜಿಲ್ಲೆಯ ಪ್ರತಿ ಕುಟುಂಬದ ಸಮಸ್ಯೆಗಳಿಗೆ ಸ್ಪಂದಿಸುತ್ತಾನೆ. ನನ್ನ ಪ್ರತಿನಿಧಿಯಾಗಿ ನಿಮ್ಮೊಂದಿಗೆ ಆತನಿದ್ದು, ನಿಮ್ಮೆಲ್ಲಾ ಕೆಲಸ ಕಾರ್ಯಗಳನ್ನು ಮಾಡಿಕೊಡಲಿದ್ದಾನೆ. ನಿಮ್ಮ ಕಷ್ಟ-ಸುಖಕ್ಕೆ ಸ್ಪಂದಿಸುವ ಪ್ರಾಮಾಣಿಕ ಕೆಲಸವನ್ನು ಮಾಡುತ್ತಾನೆ. ನಿಖಿಲ್ ಗೆ ಕೊಡುವ ಮತ ಮಂಡ್ಯ ಅಭಿವೃದ್ಧಿಗೆ ಕೊಡುವ ಮತವಾಗುತ್ತದೆ. ನನ್ನನ್ನು ಬೆಳೆಸಿದಂತೆ ನನ್ನ ಮಗನನ್ನೂ ಬೆಳೆಸಿ. ನಿಖಿಲ್ ನನ್ನು ಸಸಿಯಾಗಿ ನಿಮ್ಮ ಮನೆಯ ಅಂಗಳಕ್ಕೆ ಕೊಟ್ಟಿದ್ದೇನೆ. ಅದಕ್ಕೆ ನೀರೆರೆದು ನಾಡಿನ ಜನರಿಗೆ ನೆರಳಾಗುವಂತೆ ನೀವು ಬೆಳೆಸಿ. ಸಾಯೋವರೆವಿಗೂ ನಿಮ್ಮೊಂದಿದ್ದು ನಿಮ್ಮ ಋಣ ತೀರಿಸುತ್ತಾನೆ.
ದಳಪತಿಗಳು ಬೆಚ್ಚಿಬಿದ್ದದ್ದು ಯಾವಾಗ?
ಇಷ್ಟಕ್ಕೂ ಸುಮಲತಾ ಅವರ ಬಗ್ಗೆ ಮೃದುಧೋರಣೆ ತಳೆಯುತ್ತಾ ಬಂದಿದ್ದ ದಳಪತಿಗಳು ಇದ್ದಕ್ಕಿದ್ದಂತೆ ಕಾಲುಕೆರೆದುಕೊಂಡು ಜಗಳಕ್ಕೆ ಹೋಗಲು ಕಾರಣವಿದೆ. ಒಂದು ವೇಳೆ ಮಂಡ್ಯದಲ್ಲಿ ಬಿಜೆಪಿಯಿಂದ ಯಾವುದಾದರೂ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರೆ ಬಹುಶಃ ದಳಪತಿಗಳು ಇವತ್ತು ಈ ಮಟ್ಟಿಗೆ ಸುಮಲತಾ ಅಂಬರೀಶ್ ವಿರುದ್ಧ ಹರಿಹಾಯುತ್ತಿರಲಿಲ್ಲವೇನೋ? ಅವರಿಗೆ ಆರೋಪ ಮಾಡಲು ಬಿಜೆಪಿ ಅಭ್ಯರ್ಥಿ ಸಿಗುತ್ತಿದ್ದನೇನೋ? ಆದರೆ ಯಾವಾಗ ಬಿಜೆಪಿಯ ನಾಯಕರು ಮಂಡ್ಯದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಸುಮಲತಾ ಅವರ ಬೆಂಬಲಕ್ಕೆ ನಿಂತರೋ ದಳಪತಿಗಳು ಬೆಚ್ಚಿ ಬಿದ್ದರು.
ಮಂಡ್ಯದಲ್ಲಿ ದಳಪತಿಗಳಿಂದ ಸುಮಲತಾರನ್ನು ಮಣಿಸಲು ತಂತ್ರ..!
ಆಕೆ ಮಂಡ್ಯದ ಗೌಡ್ತಿ ಅಲ್ಲ, ನಾಯ್ಡು
ದಳಪತಿಗಳು ಒಂದಷ್ಟು ಕೀಳು ಮಟ್ಟದ ಆರೋಪಗಳನ್ನು ಬಿಜೆಪಿ ವಿರುದ್ಧ ಮಾಡಿದರು. ಆದರೆ ಅದರಿಂದ ಪ್ರಯೋಜನವಾಗಲಿಲ್ಲ. ಜತೆಗೆ ಸುಮಲತಾ ಅಂಬರೀಶ್ ಅವರ ಚುನಾವಣಾ ಪ್ರಚಾರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಬಾವುಟಗಳು ಹಾರಾಡುತ್ತಿರುವುದು ಕಂಡು ಬಂದವು. ಇದು ನುಂಗಲಾರದ ತುತ್ತಾಗಿ ಪರಿಣಮಿಸತೊಡಗಿತು. ಸುಮಲತಾ ಮಂಡ್ಯದ ಗೌಡ್ತಿ ಅಲ್ಲ ಟೀಕೆ ಮೇಲೆ ಟೀಕೆ, ಆರೋಪದ ಮೇಲೆ ಆರೋಪ ಮಾಡುತ್ತಾ ಬರುತ್ತಿರುವ ಜೆಡಿಎಸ್ ನ ಮುಖಂಡರಿಗೆ ಸದ್ಯಕ್ಕೆ ಯಾವ ವಿಷಯವನ್ನು ಮುಂದಿಟ್ಟುಕೊಂಡು ಆರೋಪ ಮಾಡಬೇಕು ಎಂಬುದೇ ಗೊತ್ತಾಗದಂತಾಗಿದೆ. ಹೀಗಾಗಿ ಜಾತಿಯನ್ನು ಎಳೆದು ತರುತ್ತಿದ್ದಾರೆ. ಆಕೆ ಮಂಡ್ಯದ ಗೌಡ್ತಿ ಅಲ್ಲ, ನಾಯ್ಡು ಆಕೆಗೆ ಮತ ಹಾಕಬೇಡಿ ಎಂದು ಬಹಿರಂಗವಾಗಿಯೇ ಕೆಲವು ನಾಯಕರು ಪ್ರಚಾರ ಮಾಡುತ್ತಿದ್ದಾರೆ.
ಲೋಕಸಭೆ ಚುನಾವಣೆ 2019: ಸಕ್ಕರೆ ನಾಡು ಮಂಡ್ಯ ಕ್ಷೇತ್ರದ ಪರಿಚಯ
ಗಮನಸೆಳೆವ ಸುಮಲತಾರ ಪ್ರಬುದ್ಧ ಮಾತು
ಈಗಾಗಲೇ ಚುನಾವಣಾ ಪ್ರಚಾರಕ್ಕೆ ಧುಮುಕಿರುವ ಸುಮಲತಾ ಅವರು ಪತಿ ಅಂಬರೀಶ್ ಅವರನ್ನು ಮುಂದಿಟ್ಟಿಕೊಂಡು ಮತ ಕೇಳುತ್ತಿದ್ದಾರೆ. ಎಲ್ಲಿಯೂ ಯಾರನ್ನೂ ಬೊಟ್ಟು ಮಾಡಿ ಟೀಕೆ ಮಾಡುತ್ತಿಲ್ಲ. ತಮ್ಮ ಪ್ರತಿ ಮಾತಿನಲ್ಲೂ ಗೌರವ ಎದ್ದು ಕಾಣುತ್ತಿದ್ದು, ಪ್ರಬುದ್ಧತೆಯನ್ನು ಮೆರೆಯುತ್ತಿದ್ದಾರೆ. ಅವರ ಮಾತು ಕೇಳಲೆಂದೇ ಅಭಿಮಾನಿಗಳು ಬರುತ್ತಿದ್ದಾರೆ. ಅಷ್ಟೇ ಅಲ್ಲ, ಅವರಿಗೆ ಬೆಂಬಲ ನೀಡುವ ಸಲುವಾಗಿ ಯುವಕರು, ಮಹಿಳೆಯರು, ಪುರುಷರು ಹೀಗೆ ಎಲ್ಲರೂ ತಮ್ಮ ಕೆಲಸವನ್ನು ಬಿಟ್ಟು ಬರುತ್ತಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಪಕ್ಷ ಬೇಧ ಮರೆತು ಸುಮಲತಾ ಗೆಲುವಿಗೆ ಕೆಲಸ ಮಾಡುತ್ತಿದ್ದಾರೆ.
ಜನ ಮಂಡ್ಯದತ್ತ ನೋಡುತ್ತಿರುವುದೇಕೆ?
ಇವತ್ತು ರಾಜ್ಯದ ಜನ 28 ಲೋಕಸಭಾ ಕ್ಷೇತ್ರಗಳ ಪೈಕಿ ಅತಿ ಹೆಚ್ಚು ಕುತೂಹಲದಿಂದ ಮಂಡ್ಯದತ್ತ ನೋಡುತ್ತಿದ್ದಾರೆ. ಇಲ್ಲಿ ನಡೆಯುತ್ತಿರುವ ಪ್ರತಿಯೊಂದು ರಾಜಕೀಯ ಬೆಳವಣಿಗೆಗಳನ್ನು ಎಚ್ಚರಿಕೆಯಿಂದ ಗಮನಿಸುತ್ತಿದ್ದಾರೆ. ಅಂಬರೀಶ್ ಅವರನ್ನು ನೋಡುತ್ತಾ ಬಂದ ಜನ ಅವರ ಪತ್ನಿ ಸುಮಲತಾ ರಾಜಕೀಯವಾಗಿ ಹೇಗೆ ನಿಭಾಯಿಸುತ್ತಾರೆ? ಇಡೀ ಆಡಳಿತ ಯಂತ್ರವೇ ವಿರುದ್ಧವಾಗಿರುವಾಗ ಯಾವುದಕ್ಕೂ ಹೆದರದೆ ಮುನ್ನುಗ್ಗುತ್ತಿರುವ ಅವರ ಛಲವನ್ನು ನೋಡಿ ಕೊಂಡಾಡುತ್ತಾ ಮುಂದೇನಾಗಬಹುದೆಂಬ ಕಾತುರದಲ್ಲಿದ್ದಾರೆ.