ಲಾಕ್ ಡೌನ್ ನಡುವೆ ಮಂಡ್ಯದಲ್ಲಿ ಬೇಕರಿ, ಸಲೂನ್ ತೆರೆಯಲು ಅನುಮತಿ
ಮಂಡ್ಯ, ಏಪ್ರಿಲ್ 04: ಮಂಡ್ಯ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ. ಹೀಗಾಗಿ ಮಂಡ್ಯ ಜಿಲ್ಲಾಡಳಿತ ಹಂತ ಹಂತವಾಗಿ ಲಾಕ್ ಡೌನ್ ಸಡಿಲಗೊಳಿಸಲು ಮುಂದಾಗಿದೆ. ಲಾಕ್ಡೌನ್ ಸಡಿಲಗೊಳಿಸಲು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಆಲೋಚಿಸಿದ್ದಾರೆ.
ಕೆಲವು ಷರತ್ತುಗಳನ್ನು ವಿಧಿಸಿ ಇಂದಿನಿಂದ ಬೇಕರಿ, ಸಲೂನ್ ತೆರೆಯಲು ಅನುಮತಿ ನೀಡಲಾಗಿದೆ. ಬೇಕರಿಯಲ್ಲಿ ಮಾಸ್ಕ್ ಮತ್ತು ಹ್ಯಾಂಡ್ ಗ್ಲೌಸ್ ಬಳಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ಪಡಿತರವನ್ನೂ ಮನೆ ಬಾಗಿಲಿಗೆ ಕೊಡಲಿದೆ ಮೈಸೂರು ಜಿಲ್ಲಾಡಳಿತ
ಜಿಲ್ಲೆಯಲ್ಲಿ ನಿನ್ನೆಯಿಂದ ಮಾಂಸ ಮಾರಾಟದ ಮೇಲಿದ್ದ ನಿರ್ಬಂಧವನ್ನು ಸಡಿಲಿಸಿ ಕೋಳಿ, ಕುರಿ, ಮೇಕೆ, ಮೀನು ಮಾಂಸ ಮಾರಾಟ ನಡೆಸಲಾಗುತ್ತಿತ್ತು. ಇದೀಗ ಬೇಕರಿ ಹಾಗೂ ಸಲೂನ್ ತೆರೆಯಲು ಅನುಮತಿ ನೀಡಲಾಗಿದೆ. ಆದರೆ ಜಿಲ್ಲಾಡಳಿತದ ಈ ಕ್ರಮ ಜನರಲ್ಲಿ ಆತಂಕ ಮೂಡಿಸಿದೆ. ಈ ನಿಯಮ ಸಡಿಲಿಕೆಯಿಂದ ಜನ ಗುಂಪಾಗಿ ಸೇರುವ ಸಾಧ್ಯತೆಯೇ ಹೆಚ್ಚಿದ್ದು, ಮುಂಜಾಗ್ರತೆ ವಹಿಸದಿದ್ದರೆ ಸೋಂಕು ಹರಡುವ ಭೀತಿ ಇದೆ.
ಮೈಸೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಿದೆ. ಇಂಥ ವೇಳೆಯಲ್ಲಿ ಮೈಸೂರಿನ ಪಕ್ಕದ ಮಂಡ್ಯದಲ್ಲಿ ಸಲೂನ್, ಬೇಕರಿ ತೆರೆಯಲು ಅನುಮತಿ ಕೊಟ್ಟಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.