ಕೊಕ್ಕರೆ ಬೆಳ್ಳೂರಿನಲ್ಲಿ ಮತ್ತೆ ಪೆಲಿಕಾನ್ ಸಾವು; ಜಂತುಹುಳು ಕಾರಣ?
ಮಂಡ್ಯ, ನವೆಂಬರ್ 7: ಪಕ್ಷಿಗಳ ಆಶ್ರಯ ತಾಣವಾಗಿರುವ ಕೊಕ್ಕರೆ ಬೆಳ್ಳೂರಿನಲ್ಲಿ ಪೆಲಿಕಾನ್ ಪಕ್ಷಿಗಳ ಸಾವು ಪಕ್ಷಿ ಪ್ರಿಯರನ್ನು ಆತಂಕಕ್ಕೀಡು ಮಾಡಿದೆ. ಈಗಾಗಲೇ ಒಂದು ಪೆಲಿಕಾನ್ ಸಾವನ್ನಪ್ಪಿ ಮತ್ತೊಂದು ಅಸ್ವಸ್ಥಗೊಂಡಿರುವ ಘಟನೆ ಬೆಳಕಿಗೆ ಬಂದಿದ್ದು ಇವುಗಳ ಸಾವಿಗೆ ಕಾರಣ ಏನೆಂಬ ಗೊಂದಲ ಏರ್ಪಟ್ಟಿದೆ.
ಎರಡು ದಿನಗಳ ಹಿಂದೆ ಅಸ್ವಸ್ಥಗೊಂಡಿದ್ದ ಪೆಲಿಕಾನ್ ಸಾವನ್ನಪ್ಪಿತ್ತು. ಇದರ ಬೆನ್ನಲ್ಲೇ ಇಂದು ಮತ್ತೊಂದು ಪಕ್ಷಿ ಅಸ್ವಸ್ಥಗೊಂಡಿದೆ. ಹೀಗಾಗಿ ಇವುಗಳು ಅಸ್ವಸ್ಥಗೊಂಡು ಸಾಯಲು ಕಾರಣವೇನು ಎಂಬುದು ನಿಖರವಾಗಿ ತಿಳಿಯಬೇಕಿದೆ. ಕಳೆದ ವರ್ಷವೂ ಇದೇ ರೀತಿಯ ಪರಿಸ್ಥಿತಿ ತಲೆದೋರಿ ಜಂತುಹುಳು ಸಮಸ್ಯೆಯಿಂದ ಸುಮಾರು 45ಕ್ಕೂ ಹೆಚ್ಚು ಪಕ್ಷಿಗಳು ಸಾವನಪ್ಪಿದ್ದವು.
ಕುಕ್ಕರಹಳ್ಳಿಯಲ್ಲಿ ಪೆಲಿಕಾನ್ ಸಾವು; ಹಕ್ಕಿಜ್ವರ ಕಾರಣವಲ್ಲ
ಹೊರದೇಶಗಳಿಂದ ವಲಸೆ ಬರುವ ಪಕ್ಷಿಗಳು ಮಂಡ್ಯ ಜಿಲ್ಲೆಯ ಕೊಕ್ಕರೆ ಬೆಳ್ಳೂರಲ್ಲಿ ಸಂತಾನೋತ್ಪತ್ತಿ ಮಾಡಿಕೊಂಡು ಸ್ವದೇಶಕ್ಕೆ ಹಿಂದಿರುಗುವುದು ಮೊದಲಿನಿಂದಲೂ ನಡೆದು ಬಂದಿದೆ. ಕೆಲವು ತಿಂಗಳ ಹಿಂದೆ ಬಂದು ನೆಲೆಸಿರುವ ಪೆಲಿಕಾನ್ ಗಳು ಯಾವುದೇ ತೊಂದರೆಯಿಲ್ಲದೆ ಹಾರಾಡುತ್ತಿದ್ದವು. ಆದರೆ ಈಚೆಗೆ ಒಂದು ಹಕ್ಕಿ ಸಾವನ್ನಪ್ಪಿ ಮತ್ತೊಂದು ಅಸ್ವಸ್ಥಗೊಂಡಿರುವುದು ಕಳೆದ ವರ್ಷದಂತೆ ಈ ವರ್ಷವೂ ಪೆಲಿಕಾನ್ ಪಕ್ಷಿಗಳ ಸರಣಿ ಸಾವು ಸಂಭವಿಸುವ ಆತಂಕ ಕಾಡುತ್ತಿದೆ.
ಕಳೆದ ವರ್ಷ ಈ ಪಕ್ಷಿಗಳ ಸಾವನ್ನು ನೋಡಿದ ಗ್ರಾಮಸ್ಥರು ಹಕ್ಕಿ ಜ್ವರದ ಆತಂಕ ವ್ಯಕ್ತಪಡಿಸಿ ಕ್ರಮ ವಹಿಸಲು ಪ್ರತಿಭಟನೆ ನಡೆಸಿದ್ದರು. ಇದರಿಂದ ಎಚ್ಚೆತ್ತ ಅರಣ್ಯ ಇಲಾಖೆ ರಾಸಾಯನಿಕ ಸಿಂಪಡಿಸಿತು. ಮೃತ ಪೆಲಿಕಾನ್ ಗಳ ದೇಹವನ್ನು ಪ್ರಯೋಗಾಲಯಕ್ಕೂ ಕಳುಹಿಸಿತ್ತು. ಸ್ಥಳಕ್ಕೆ ತಜ್ಞರು ಬಂದು ಪರಿಶೀಲನೆ ನಡೆಸಿ, ಪೆಲಿಕಾನ್ ಗಳು ಹಕ್ಕಿ ಜ್ವರದಿಂದ ಮೃತಪಟ್ಟಿಲ್ಲ, ಜಂತುಹುಳುಗಳಿಂದ ಮೃತಪಟ್ಟಿವೆ ಎಂಬ ಮಾಹಿತಿ ನೀಡಿದ್ದರು. ಜತೆಗೆ ಪೆಲಿಕಾನ್ ತಿಂದು ಉಗುಳಿದ ಮೀನನ್ನು ಪರೀಕ್ಷೆ ಮಾಡಿದಾಗ ಅದರಲ್ಲಿ ಜಂತುಹುಳುಗಳು ಕಂಡು ಬಂದಿದ್ದವು. ಈ ಜಂತುಹುಳುಗಳೇ ಪೆಲಿಕಾನ್ ಗಳ ಪ್ರಾಣಕ್ಕೆ ಸಂಚಕಾರ ತರುತ್ತಿವೆ ಎಂಬುದು ಗೊತ್ತಾಗಿತ್ತು.
ಈ ಬಾರಿ ಕೂಡ ಪಕ್ಷಿಗಳು ಸಾವನ್ನಪ್ಪುತ್ತಿದ್ದು, ಅವುಗಳ ಸಾವಿಗೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ.