ಕೊಕ್ಕರೆ ಬೆಳ್ಳೂರಿನಲ್ಲಿ ನಿಲ್ಲದ ಪೆಲಿಕಾನ್ ಸಾವು, ಹಕ್ಕಿ ಜ್ವರದ ಆತಂಕ
ಮಂಡ್ಯ, ಜನವರಿ 24: ಭಾರತೀನಗರ ಬಳಿಯ ಕೊಕ್ಕರೆ ಬೆಳ್ಳೂರಿನಲ್ಲಿ ಪೆಲಿಕಾನ್ ಹಕ್ಕಿಗಳ ಸಾವು ಆತಂಕ ಸೃಷ್ಠಿಸಿದ್ದು, ಇದುವರೆಗೂ ಹಕ್ಕಿಗಳ ಸಾವಿಗೆ ನಿಖರ ಕಾರಣಗಳು ತಿಳಿದು ಬಾರದಿರುವುದರಿಂದ ಹಕ್ಕಿಜ್ವರನಾ ಎಂಬ ಭಯ ಜನರಲ್ಲಿ ಹುಟ್ಟುಹಾಕಿದೆ.
ಕೊಕ್ಕರೆ ಬೆಳ್ಳೂರಿನಲ್ಲಿ ಇದುವರೆಗೆ ಸುಮಾರು 14ಪೆಲಿಕಾನ್ ಹಕ್ಕಿಗಳು ಸಾವನ್ನಪ್ಪಿದ್ದರೆ, ಸೂಳೆಕೆರೆಯಲ್ಲಿ 2, ಮಾದರಹಳ್ಳಿ ಕೆರೆಯಲ್ಲಿ 1 ಹಕ್ಕಿ ಸೇರಿ ಒಟ್ಟು 17 ಹಕ್ಕಿಗಳು ಸಾವನ್ನಪ್ಪಿವೆ. ಹೀಗೆ ಸರಣಿಯಾಗಿ ಹಕ್ಕಿಗಳು ಸಾವನ್ನಿಪುರುವುದನ್ನು ನೋಡಿದರೆ ಹಕ್ಕಿಗಳಿಗೆ ಯಾವುದೋ ಒಂದು ರೀತಿಯ ರೋಗ ಬಾಧಿಸಿರುವುದಂತೂ ಸತ್ಯ. ಆದರೆ ಅದು ಹಕ್ಕಿಜ್ವರನಾ ಎಂಬುವುದು ಮಾತ್ರ ಇನ್ನೂ ದೃಢಪಟ್ಟಿಲ್ಲ.
ಮಂಡ್ಯದಲ್ಲೂ ಶುರುವಾಯ್ತು ಹಕ್ಕಿಜ್ವರದ ಆತಂಕ
ಅದು ತಿಳಿಯಬೇಕಾದರೆ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿರುವ ಮೃತ ಹಕ್ಕಿಗಳ ಮರಣೋತ್ತರ ಪರೀಕ್ಷೆ ವರದಿ ಬರಲೇಬೇಕು. ಅಲ್ಲಿಯ ತನಕ ಜನ ಭಯದಿಂದಲೇ ಬದುಕುವಂತಾಗಿದೆ.
ಹಕ್ಕಿಗಳ ಸಾವಿನ ನೈಜ ಕಾರಣ ತಿಳಿಯಲು ಪ್ರಯೋಗಾಲಯದಿಂದ ವರದಿ ಬರಬೇಕೆಂದು ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಹನುಮೇಗೌಡ ಕೂಡ ಹೇಳಿದ್ದಾರೆ. ಈ ನಡುವೆ ರಾಸಾಯನಿಕ ಸಿಂಪಡಣೆ ಮಾಡುವ ಮೂಲಕ ಹಕ್ಕಿಗಳ ಸರಣಿ ಸಾವಿನ ಸಂಖ್ಯೆ ಕಳೆದ 1 ತಿಂಗಳಿಂದ ಕಡಿಮೆಯಾಗಿತ್ತು. ಆದರೆ ಇದೀಗ ಮತ್ತೆ ಎರಡು ಹಕ್ಕಿಗಳು ಸಾವನ್ನಪ್ಪಿವೆ. ಇದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಪಶುವೈದ್ಯಾಧಿಕಾರಿ ಡಾ.ಸತೀಶ್, ಡಾ.ಗೋವಿಂದ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.