ಮಂಡ್ಯ; ಆರಂಭವಾಗದ ಕೇಂದ್ರೀಯ ವಿದ್ಯಾಲಯ ಕಟ್ಟಡ, ಪೋಷಕರಲ್ಲಿ ಆತಂಕ
ಮಂಡ್ಯ, ಜುಲೈ 1 : ಮಂಡ್ಯಕ್ಕೆ ಕೇಂದ್ರೀಯ ವಿದ್ಯಾಲಯ ಮಂಜೂರಾಗಿ 7 ವರ್ಷಗಳ ಬಳಿಕ ಕಟ್ಟಡ ನಿರ್ಮಾಣಕ್ಕೆ ಹಣ ಬಿಡುಗಡೆಯಾಗಿದ್ದರೂ ಕಾಮಗಾರಿ ಆರಂಭಕ್ಕೆ ಇನ್ನೂ ಕಾಲ ಕೂಡಿಬಂದಿಲ್ಲ. ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ವಿಳಂಬ ನೀತಿಯಿಂದ ಕಟ್ಟಡ ನಿರ್ಮಾಣ ಕಾಮಗಾರಿ ನೆನೆಗುದಿಗೆ ಬೀಳುವಂತಾಗಿದೆ.
ಕೇಂದ್ರೀಯ ವಿದ್ಯಾಲಯದ ಕಟ್ಟಡ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ 26.57 ಕೋಟಿ ರೂ. ಹಣ ಬಿಡುಗಡೆಯಾಗಿದೆ. ಕಾಮಗಾರಿ ನೀಲಿ ನಕಾಶೆಯೂ ಸಿದ್ಧವಾಗಿದೆ. ಅಂದುಕೊಂಡಂತೆ ಎಲ್ಲವೂ ನಡೆದಿದ್ದರೆ ಜೂ.15ರಂದು ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ಸಿಗಬೇಕಿತ್ತು. ಆದರೆ, ಕೇಂದ್ರೀಯ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳನ್ನು ಮೈಷುಗರ್ ಪ್ರೌಢಶಾಲೆಗೆ ತಾತ್ಕಾಲಿಕವಾಗಿ ಸ್ಥಳಾಂತರ ಮಾಡುವುದಕ್ಕೆ ನಿರ್ಧರಿಸಿದ್ದರೂ ಅಲ್ಲಿ ಮತ್ತೊಂದು ರೀತಿಯ ಸಮಸ್ಯೆ ಎದುರಾಗಿದೆ.
ಮಂಡ್ಯದಲ್ಲಿ ಭತ್ತದ ಬಂಪರ್ ಬೆಳೆ; ಖರೀದಿಗೆ ಸರ್ಕಾರದ ನಿರಾಸಕ್ತಿ
ಮೈಷುಗರ್ ಪ್ರೌಢಶಾಲೆಯ ಮೇಲಂತಸ್ತಿನಲ್ಲಿ 12 ಕೊಠಡಿಗಳಿವೆ. ಅವು ದೊಡ್ಡದಾದ ಕೊಠಡಿಗಳಾಗಿವೆ. ಕೊಠಡಿಗಳು ದೊಡ್ಡದಾಗಿದ್ದರೂ ಕಟ್ಟಡದ ಮೇಲ್ಛಾವಣಿಯ ಕಾಂಕ್ರೀಟ್ ಕುಸಿದುಬೀಳುತ್ತಿದೆ. ಮೇಲ್ಭಾಗದಲ್ಲಿ ಚುರುಕಿ ಹಾಕಿ ರಿಪೇರಿ ಮಾಡಲಾಗಿರುವುದರಿಂದ ಒಳಗಿನ ಕಾಂಕ್ರೀಟ್ ಕಳಚಿ ಬೀಳುತ್ತಿದೆ.
ಇದು ನೋಡಲು ಅಪಾಯಕಾರಿಯಾಗಿ ಕಂಡುಬರುತ್ತಿದೆ. ಈಗಾಗಲೇ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರು, ಮಕ್ಕಳ ಪೋಷಕರು ಮೈಷುಗರ್ ಪ್ರೌಢಶಾಲೆಗೆ ಶಾಲೆಯನ್ನು ಸ್ಥಳಾಂತರ ಮಾಡುವುದಕ್ಕೆ ಪೂರ್ಣ ಪ್ರಮಾಣದಲ್ಲಿ ಒಪ್ಪಿಗೆ ಸೂಚಿಸಿದ್ದಾರೆ. ಆದರೆ, ಕಳಚಿ ಬೀಳುತ್ತಿರುವ ಕಾಂಕ್ರೀಟ್ನಡಿ ಮಕ್ಕಳನ್ನು ಕೂರಿಸಿ ತರಗತಿ ನಡೆಸುವುದು ಹೇಗೆ? ಎನ್ನುವುದು ಚಿಂತೆಗೀಡುಮಾಡಿದೆ.
ಮಂಡ್ಯ; ರೈತರಿಗೆ ಬೆಳೆ ನಷ್ಟದ ಪರಿಹಾರ ನೀಡಲು ಕಾರ್ಖಾನೆಗೆ ಆದೇಶ
ಹೊಸ ಕಟ್ಟಡದ ನಿರ್ಮಾಣ ಯಾವಾಗ
ಮೈಷುಗರ್ ಪ್ರೌಢಶಾಲೆಯ ಮೇಲಂತಸ್ತಿನ ಕೊಠಡಿಗಳ ಪರಿಶೀಲನೆ ನಡೆಸಿರುವ ಅಪರ ಜಿಲ್ಲಾಧಿಕಾರಿ, ಲೋಕೋಪಯೋಗಿ ಹಾಗೂ ನಿರ್ಮಿತಿ ಕೇಂದ್ರದ ಇಂಜಿನಿಯರ್ಗಳು 10 ರಿಂದ 15 ಲಕ್ಷ ರೂ. ದುರಸ್ತಿಗೆ ವೆಚ್ಚವಾಗಲಿದೆ ಎಂದು ಅಂದಾಜಿಸಿದ್ದಾರೆ. ಈ ಹಣವನ್ನು ಯಾವ ಮೂಲದಿಂದ ಭರಿಸುವುದು ಎಂಬ ಬಗ್ಗೆ ಸುಮಾರು ಎರಡು ತಿಂಗಳಿಂದ ನಿರ್ಧಾರವಾಗಿಲ್ಲ. ಕೇಂದ್ರೀಯ ವಿದ್ಯಾಲಯದ ಅನುದಾನದಲ್ಲೇ ಹಣ ಬಿಡುಗಡೆಗೊಳಿಸಿ ದುರಸ್ತಿ ಮಾಡಿಸುವುದಕ್ಕೂ ಯಾರೂ ಮುಂದಾಗಿಲ್ಲ. ಇದರಿಂದ ಹೊಸ ಕಟ್ಟಡದ ನಿರ್ಮಾಣ ಇನ್ನೂ ಕನಸಾಗಿಯೇ ಉಳಿಯುವಂತಾಗಿದೆ.
ಜಿಲ್ಲಾಡಳಿತ ನಡೆಗೆ ಪೋಷಕರ ಬೇಸರ
ಕೊಠಡಿಗಳ ದುರಸ್ತಿ ಮಾಡುವುದು ಇನ್ನೂ ಅಂದಾಜು ಪಟ್ಟಿ ಸಿದ್ಧತಾ ಹಂತದಲ್ಲೇ ಇದೆ. ಅದಕ್ಕಿನ್ನೂ ಅಂತಿಮ ಅಂಕಿತ ಬಿದ್ದಿಲ್ಲ. ಹೀಗಾಗಿ ಇತ್ತ ಕೊಠಡಿಗಳ ದುರಸ್ತಿ ಕಾಮಗಾರಿಯೂ ನಡೆಯದೆ, ಅತ್ತ ಕಟ್ಟಡ ನಿರ್ಮಾಣ ಕಾಮಗಾರಿಯೂ ಆರಂಭವಾಗದೆ ಪೋಷಕರು ಮತ್ತು ಮಕ್ಕಳು ಅತಂತ್ರ ಸ್ಥಿತಿ ಎದುರಿಸುವಂತಾಗಿದೆ. ಮಕ್ಕಳ ಹಿತದೃಷ್ಟಿಯಿಂದ ಇಂತಹದೊಂದು ಸಣ್ಣ ಕಾಮಗಾರಿಯನ್ನು ನಡೆಸುವುದಕ್ಕೆ ಜಿಲ್ಲಾಡಳಿತದ ಬಳಿ ಹಣವಿಲ್ಲವೇ? ಈ ವಿಷಯವಾಗಿ ತೀರ್ಮಾನ ಮಾಡುವುದಕ್ಕೆ ಎರಡು ತಿಂಗಳಿಂದ ವಿಳಂಬ ಮಾಡುತ್ತಿರುವ ಜಿಲ್ಲಾಡಳಿತದ ನಡೆಯ ಬಗ್ಗೆ ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ.
ಕೇಂದ್ರೀಯ ವಿದ್ಯಾಲಯದ ಮಕ್ಕಳು ಇಕ್ಕಟ್ಟಾದ ಜಾಗದೊಳಗೆ, ಅವ್ಯವಸ್ಥಿತ ಕೊಠಡಿಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ವಿಳಂಬವಾದರೂ ಕಟ್ಟಡ ನಿರ್ಮಾಣಕ್ಕೆ ಹಣ ಬಿಡುಗಡೆಯಾಗಿದೆ. ಅದರಿಂದ ಬೇಗ ಕಟ್ಟಡ ನಿರ್ಮಾಣವಾಗಬಹುದೆಂಬ ಆಶಾಭಾವನೆ ಪೋಷಕರಲ್ಲಿದ್ದರೂ ಸ್ಥಳಾಂತರಕ್ಕೆ ಎದುರಾಗಿರುವ ಸಮಸ್ಯೆ ನಿವಾರಣೆಯಾಗದಿರುವುದು ಅವರಿಗೆ ತಲೆನೋವಾಗಿ ಪರಿಣಮಿಸಿದೆ.
ಮಕ್ಕಳ ಸ್ಥಳಾಂತರಿದ ನಂತರ ಕೇಂದ್ರೀಯ ಕಟ್ಟಡ ಕಾಮಾಗಾರಿ ಆರಂಭ
ಮೈಷುಗರ್ ಪ್ರೌಢಶಾಲೆಗೆ ಕೇಂದ್ರೀಯ ವಿದ್ಯಾಲಯದ ಮಕ್ಕಳನ್ನು ತಾತ್ಕಾಲಿಕವಾಗಿ ಸ್ಥಳಾಂತರ ಮಾಡುವುದಕ್ಕೆ ಕೆಲವೊಂದು ಸಣ್ಣಪುಟ್ಟ ಸಮಸ್ಯೆಗಳಿವೆ. ಅಪರ ಜಿಲ್ಲಾಧಿಕಾರಿಗಳು ಈಗಾಗಲೇ ಸ್ಥಳ ವೀಕ್ಷಣೆ ನಡೆಸಿ ವರದಿ ನೀಡಿದ್ದಾರೆ. ಶೀಘ್ರದಲ್ಲೇ ಕಟ್ಟಡದ ಮೇಲ್ಛಾವಣಿಯ ದುರಸ್ತಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು. ದುರಸ್ತಿ ಕಾರ್ಯ ಪೂರ್ಣಗೊಂಡ ಬಳಿಕ ಮಕ್ಕಳನ್ನು ಅಲ್ಲಿಗೆ ಸ್ಥಳಾಂತರಿಸಿ ಕೇಂದ್ರೀಯ ಕಟ್ಟಡ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎಸ್. ಅಶ್ವತಿ ತಿಳಿಸಿದ್ದಾರೆ.
ಮೇಲ್ಛಾವಣಿ ದುರಸ್ತಿ ನಂತರ ಸ್ಥಳಾಂತರ
ಮೈಷುಗರ್ ಪ್ರೌಢಶಾಲೆಗೆ ಕೇಂದ್ರೀಯ ವಿದ್ಯಾಲಯದ ಮಕ್ಕಳನ್ನು ಸ್ಥಳಾಂತರಕ್ಕೆ ಪೋಷಕರು ಮತ್ತು ನಾವು ಒಪ್ಪಿದ್ದೇವೆ. ಆದರೆ, ಮೇಲಂತಸ್ತಿನಲ್ಲಿರುವ ಕೊಠಡಿಗಳ ಮೇಲ್ಛಾವಣಿಯ ಕಾಂಕ್ರೀಟ್ ಕಳಚಿ ಬೀಳುತ್ತಿರುವುದು ಮಕ್ಕಳಿಗೆ ಅಪಾಯಕಾರಿಯಾಗಿದೆ. ಅಪರ ಜಿಲ್ಲಾಧಿಕಾರಿಗಳು, ಪಿಡಬ್ಲ್ಯುಡಿ, ನಿರ್ಮಿತಿ ಕೇಂದ್ರದ ಇಂಜಿನಿಯರ್ಗಳು ಕೊಠಡಿಗಳ ವೀಕ್ಷಣೆ ನಡೆಸಿ ದುರಸ್ತಿಗೆ 10-15 ಲಕ್ಷ ರು.ವೆಚ್ಚವಾಗಲಿದೆ ಎಂದಿದ್ದಾರೆ. ಅದರ ಅಂದಾಜುಪಟ್ಟಿಯನ್ನು ಜಿಲ್ಲಾಡಳಿತಕ್ಕೆ ಕಳುಹಿಸಿದ್ದು, ಒಪ್ಪಿಗೆ ದೊರೆತ ನಂತರ ದುರಸ್ತಿ ಕಾಮಗಾರಿ ಆರಂಭವಾಗಲಿದೆ ಎಂದು ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರಾದ ಸುಧೀರ್ ಶರ್ಮಾ ತಿಳಿಸಿದ್ದಾರೆ.
Recommended Video