ಅವಘಡದ ಸೂಚನೆ ನೀಡುತ್ತಿದೆ ಕೆ.ಆರ್.ಪೇಟೆ ಗ್ರಾಮದ ಈ ನೀರಿನ ಟ್ಯಾಂಕ್
ಮಂಡ್ಯ, ಅಕ್ಟೋಬರ್ 29: ಸಂಪೂರ್ಣ ಶಿಥಿಲವಾಗಿ ಇಂದೋ ನಾಳೆಯೋ ಬೀಳುವಂತಿರುವ ನೀರಿನ ಓವರ್ ಹೆಡ್ ಟ್ಯಾಂಕ್ ಗ್ರಾಮದ ಹೃದಯ ಭಾಗದಲ್ಲಿದ್ದರೂ ಅದನ್ನು ಗ್ರಾಮ ಪಂಚಾಯಿತಿ ತೆರವುಗೊಳಿಸದೆ ಅದರಲ್ಲಿಯೇ ನೀರನ್ನು ಸಂಗ್ರಹಿಸಿ ಸರಬರಾಜು ಮಾಡುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ.
ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಮುರುಕನಹಳ್ಳಿ ಗ್ರಾಮದಲ್ಲಿ ಹಳೆಯದಾದ ಓವರ್ ಹೆಡ್ ಟ್ಯಾಂಕ್ ದುಸ್ಥಿತಿಗೊಳಗಾಗಿದೆ. ಆದರೂ ಅದನ್ನು ತೆರವುಗೊಳಿಸದೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುವುದರೊಂದಿಗೆ ಅದನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ನೀರಿನ ಟ್ಯಾಂಕ್ ಗೆ ಬಿದ್ದು ಒಂದೇ ಕುಟುಂಬದ ಮೂವರು ಮಕ್ಕಳ ಸಾವು
ಕಳೆದ ಹಲವು ವರ್ಷಗಳಿಂದ ಈ ಓವರ್ ಹೆಡ್ ಟ್ಯಾಂಕ್ನಲ್ಲಿ ನೀರು ಶೇಖರಣೆಯಾಗುತ್ತಿದೆ. ಸದ್ಯ ಟ್ಯಾಂಕ್ ಬಿರುಕು ಬಿಟ್ಟಿದ್ದು, ಯಾವಾಗ ಬೇಕಾದರೂ ಧರೆಗೆ ಉರುಳುವ ಸಾಧ್ಯತೆಯಿದೆ. ಈ ಟ್ಯಾಂಕ್ ಪಕ್ಕದಲ್ಲಿ ವಾಸ ಮಾಡುವ ಗ್ರಾಮದ ಸುಮಾರು ಇಪ್ಪತ್ತು ಕುಟುಂಬಗಳು ಯಾವಾಗ ಈ ಟ್ಯಾಂಕ್ ಬೀಳುತ್ತದೆಯೋ ಎಂಬ ಭಯದಲ್ಲಿಯೇ ದಿನ ಕಳೆಯುತ್ತಿದ್ದಾರೆ.
Recommended Video
ಇಡೀ ಗ್ರಾಮಕ್ಕೆ ಈ ಓವರ್ ಹೆಡ್ ಟ್ಯಾಂಕ್ ನಲ್ಲಿ ನೀರು ಸಂಗ್ರಹಿಸಿ ಬಳಿಕ ಸರಬರಾಜು ಮಾಡಲಾಗುತ್ತಿದೆ. ಈ ಟ್ಯಾಂಕ್ ತೆರವುಗೊಳಿಸಬೇಕಾದರೆ ಮತ್ತೊಂದು ಸುಸ್ಥಿತಿಯಲ್ಲಿರುವ ಟ್ಯಾಂಕ್ ನಿರ್ಮಾಣ ಮಾಡಬೇಕಾದ ಅಗತ್ಯವಿದೆ. ಆದರೆ ಯಾರೂ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಸದ್ಯ ಹಳೆಯ ಟ್ಯಾಂಕ್ ಸ್ಥಿತಿ ಹೀಗಿದ್ದರೂ ಅದರಲ್ಲಿಯೇ ನೀರು ಶೇಖರಣೆ ಮಾಡುತ್ತಿದ್ದಾರೆ.
ಈ ನಡುವೆ ಇಲ್ಲಿನ ನಿವಾಸಿಗಳು ಓವರ್ ಹೆಡ್ ಟ್ಯಾಂಕ್ ದುರಸ್ತಿ ಪಡಿಸಿ ಎಂದು ತಾಲೂಕು ಪಂಚಾಯಿತಿ ಅಧಿಕಾರಗಳಿಗೆ ಮನವಿ ನೀಡಿದ್ದಾರೆ. ಆದರೆ ಪಂಚಾಯಿತಿ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ವಹಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇನ್ನಾದರೂ ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಇತ್ತ ಗಮನ ಹರಿಸಿ ಈ ಓವರ್ ಹೆಡ್ ಟ್ಯಾಂಕ್ ರಿಪೇರಿ ಮಾಡಿಸಬೇಕು ಎಂದು ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ರಾಮು ಆಗ್ರಹಿಸಿದ್ದಾರೆ.