ಮಂಡ್ಯ: ಹಸಿರುವನವಾಗಿದೆ ನಾಗಮಂಗಲದ ಈ ಸಾರಿಗೆ ಕಚೇರಿ ಆವರಣ
ಮಂಡ್ಯ, ಸೆಪ್ಟೆಂಬರ್ 3: ಸಾಮಾನ್ಯವಾಗಿ ಸರ್ಕಾರಿ ಕಚೇರಿಗಳು ಆಯಾಯ ಇಲಾಖೆಯ ಕೆಲಸ ಕಾರ್ಯಗಳಿಗಷ್ಟೆ ಸೀಮಿತವಾಗಿರುತ್ತವೆ. ಆದರೆ ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದ ಹೊರ ವಲಯದಲ್ಲಿರುವ ಸಹಾಯಕ ಸಾರಿಗೆ ಕಚೇರಿ ಮಾತ್ರ ವಿಭಿನ್ನವಾಗಿದೆ. ಸಾರಿಗೆ ಇಲಾಖೆಯ ಆವರಣದಲ್ಲಿರುವ ಖಾಲಿ ಜಾಗದಲ್ಲಿ ಬೆಲೆಬಾಳುವ ಮರಗಳು, ವಿವಿಧ ಆಯುರ್ವೇದ ಗಿಡಗಳನ್ನು ಬೆಳೆಯಲಾಗಿದೆ.
Recommended Video
ಕಚೇರಿ ಕಟ್ಟಡದ ಆವರಣದ ಸುಮಾರು ಐದು ಎಕರೆ ಪ್ರದೇಶದಲ್ಲಿ 300ಕ್ಕೂ ಹೆಚ್ಚು ಮರಗಿಡಗಳನ್ನು ಬೆಳೆಸಲಾಗಿದೆ. ಅದರಲ್ಲೂ 200ಕ್ಕೂ ಹೆಚ್ಚು ವಿವಿಧ ಪ್ರಭೇದಗಳ ಆಯುರ್ವೇದ ಗಿಡಗಳಿರುವುದೇ ಇಲ್ಲಿನ ವಿಶೇಷ. ಇದೆಲ್ಲವೂ ಸಾಧ್ಯವಾಗಿರುವುದು ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾರಿಗೆ ಅಧೀಕ್ಷಕ ಎಂ.ಜಿ.ಎನ್.ಪ್ರಸಾದ್ ಅವರ ಪರಿಸರ ಪ್ರೇಮದಿಂದ.
ಗುಂಡ್ಲುಪೇಟೆಯಲ್ಲಿದ್ದಾರೆ ಪರಿಸರ ಪ್ರೇಮಿ ತಹಶೀಲ್ದಾರ್!
ಆಯುರ್ವೇದ ಗಿಡಗಳಿಗೆ ಒತ್ತು: ಪರಿಸರ ಪ್ರೇಮಿಯಾಗಿರುವ ಪ್ರಸಾದ್ ಅವರು ಅಧಿಕಾರ ವಹಿಸಿಕೊಂಡ ಬಳಿಕ, ಖಾಲಿಯಿದ್ದ ಜಾಗದಲ್ಲಿ ಮರಗಿಡಗಳನ್ನು ನೆಡುವ ಚಿಂತನೆ ಮಾಡಿದರು. ನೆರಳು ನೀಡುವ ಹೊಂಗೆಮರ, ಹೆಬ್ಬೇವು ಮರಗಳು, ಹಣ್ಣಿನ ಮರಗಳಾದ ಹಲಸು, ಸೀಬೆ, ಸಪೋಟ, ತೆಂಗಿನ ಗಿಡಗಳನ್ನು ನೆಟ್ಟಿದ್ದಾರೆ. ಇದರೊಂದಿಗೆ ಮೈಸೂರಿನ ಆಯುರ್ವೇದ ಕಾಲೇಜು ನಿರ್ವಹಣೆ ಮಾಡುತ್ತಿರುವ ಚಂದನವನ ನರ್ಸರಿಯಿಂದ ಇನ್ನೂರಕ್ಕೂ ಹೆಚ್ಚು ಪ್ರಭೇದಗಳ ಆಯುರ್ವೇದ ಗಿಡಮೂಲಿಕೆಗಳಾದ ದೊಡ್ಡಪತ್ರೆ, ತುಳಸಿ, ಕೃಷ್ಣ ತುಳಸಿ, ಲವಂಗ, ಬಜೆ, ಅಗಸೆ, ಲವಂಚ, ಕಡುಬಸಳೆ, ಕೆಂಪು ಬಸಳೆ, ನಾಗದಾಳೆ, ಆಕರಿಕೆ ಸೇರಿದಂತೆ ನೂರಾರು ಬಗೆಯ ಗಿಡಮೂಲಿಕೆಗಳನ್ನು ಪೋಷಿಸುತ್ತಿದ್ದಾರೆ.
ಮಂಡ್ಯದಲ್ಲಿ ಮನೆಗೆ ಬರಲು ಸಜ್ಜಾಗಿದ್ದಾನೆ "ಆಯುರ್ವೇದ ಗಣಪ"
ಸಾಧಕ ಹೆಣ್ಣುಮಕ್ಕಳ ನಾಮಫಲಕ: ಇಲ್ಲಿರುವ ಗಿಡಮರಗಳನ್ನು ನೆಟ್ಟು ಪೋಷಿಸುವುದಷ್ಟೆ ಅಲ್ಲದೆ ಇಲ್ಲಿ ಬೆಳೆದು ನಿಂತಿರುವ ಗಿಡ-ಮರಗಳಿಗೆ ಹೆಣ್ಣು ಮಕ್ಕಳ ಮತ್ತು ಸಾಧನೆ ಮಾಡಿದ ಮಹಿಳೆಯರ ಹೆಸರಿನ ನಾಮಫಲಕವನ್ನು ಹಾಕಿಸುವ ಮೂಲಕ ಗೌರವ ಸಲ್ಲಿಸಿದ್ದಾರೆ. ಸಾಮಾನ್ಯವಾಗಿ ಎಲ್ಲರೂ ಪರಿಸರದ ಬಗ್ಗೆ ಮಾತನಾಡುತ್ತಾರೆ. ಆದರೆ ಪರಿಸರ ಸಂರಕ್ಷಣೆ ಕುರಿತಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪರಿಸರದ ಕಾಳಜಿ ತೋರುವುದು ಅಪರೂಪವೇ. ಹೀಗಿರುವಾಗ ಪ್ರಸಾದ್ ಅವರ ಈ ಕಾರ್ಯ ಶ್ಲಾಘನೀಯವಾಗಿದೆ.