ಪೈಪ್ಲೈನ್ ಒಡೆದು ಅದಕ್ಕೆ ಕಲುಷಿತ ನೀರು ಸೇರ್ಪಡೆ: ನಗರಕೆರೆಯಲ್ಲಿ ಕಟ್ಟೆಚ್ಚರ
ಮಂಡ್ಯ, ಜೂ18: ಕಲುಷಿತ ನೀರು ಸೇವಿಸಿ 20ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ಘಟನೆ ಮದ್ದೂರು ತಾಲೂಕಿನ ನಗರಕೆರೆ ಗ್ರಾಮದಲ್ಲಿ ನಡೆದಿದೆ.
ಗ್ರಾಮಕ್ಕೆ ಸರಬರಾಜು ಮಾಡುವ ಕುಡಿಯುವ ನೀರಿನ ಪೈಪ್ಲೈನ್ ಒಡೆದುಹೋಗಿ, ಅದಕ್ಕೆ ಕಲುಷಿತ ನೀರು ಸೇರ್ಪಡೆಯಾಗಿದೆ. ಈ ನೀರು ಸೇವಿಸಿದ ಗ್ರಾಮಸ್ಥರಿಗೆ ವಾಂತಿ ಬೇಧಿ ಕಾಣಿಸಿಕೊಂಡು ಅಸ್ವಸ್ಥರಾಗಿದ್ದರು. ತಕ್ಷಣ ಅವರನ್ನು ಮದ್ದೂರು ಅಸ್ಪತ್ರೆಗೆ ದಾಖಲಿಸಲಾಗಿತ್ತು.
ಮಾರದೇವನಹಳ್ಳಿ ಕೆರೆಗೆ ವಿಷಹಾಕಿದ ಕಿಡಿಗೇಡಿಗಳು, ಸಾವಿರಾರು ಮೀನುಗಳ ಮಾರಣಹೋಮ
800 ಜನರಿಗೂ ಆರೋಗ್ಯ ತಪಾಸಣೆ
ಗ್ರಾಮದ ಸುಮಾರು 26 ಮಂದಿಗೆ ವಾಂತಿ, ಬೇದಿ ಕಾಣಿಸಿಕೊಂಡಿದ್ದು, ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಸುದ್ಧಿ ತಿಳಿದ ತಕ್ಷಣ ಸ್ಥಳಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಟಿ.ಎನ್.ಧನಂಜಯ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮದಲ್ಲಿ ಸುಮಾರು 1800 ಜನರಿಗೂ ಆರೋಗ್ಯ ತಪಾಸಣೆಗೊಳಪಡಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಆರೋಗ್ಯಾಧಿಕಾರಿಗಳು ಗ್ರಾಮದಲ್ಲೇ ವಾಸ್ತವ್ಯ ಹೂಡಿ ಪರಿಶೀಲನೆ ನಡೆಸುತ್ತಿದ್ದಾರೆ. ಜೊತೆಗೆ ಗ್ರಾಮದಲ್ಲಿ ತಾತ್ಕಾಲಿಕ ಚಿಕಿತ್ಸಾಲಯವನ್ನು ತೆರೆಯಲಾಗಿದೆ.
ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ
ಕಲುಷಿತಗೊಂಡಿದ್ದ ನೀರು ಟ್ಯಾಂಕ್ ಸರಬರಾಜಾಗಿದ್ದು, ತಕ್ಷಣ ಟ್ಯಾಂಕನ್ನು ಸ್ವಚ್ಛಗೊಳಿಸುವಂತೆ ಸೂಚಿಸಲಾಗಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಹ ಸ್ಥಳಕ್ಕೆ ತೆರಳಿ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ. ಸಧ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಧನಂಜಯ್ ತಿಳಿಸಿದ್ದಾರೆ. ಈಗಾಗಲೇ ಗ್ರಾಮದ ಎಲ್ಲರಿಗೂ ತಪಾಸಣೆ ಮಾಡಲಾಗಿದೆ. ಎಲ್ಲರೂ ಕಡ್ಡಾಯವಾಗಿ ಬಿಸಿ ನೀರು ಸೇವಿಸುವಂತೆ ಸೂಚಿಸಲಾಗಿದೆ. ಸಾರ್ವಜನಿಕರ ಆರೋಗ್ಯದ ಮೇಲೆ ಸಿಬ್ಬಂದಿಗಳು ಸಂಪೂರ್ಣ ನಿಗಾ ವಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ವಾಂತಿ ಬೇಧಿಗೆ ಆರು ಮಂದಿ ಸಾವು
ರಾಯಚೂರಿನಲ್ಲಿ ಕಲುಷಿತ ಕುಡಿವ ನೀರು ಪೂರೈಕೆಯಿಂದ ವಾಂತಿ ಬೇಧಿ ಉಲ್ಬಣಗೊಂಡು ನಗರದ ಏಳು ಮಂದಿಮೃತಪಟ್ಟು, ವಿವಿಧ ವಾರ್ಡ್ ಗಳ ನೂರಾರು ಜನ ಗಂಭೀರ ಪರಿಸ್ಥಿತಿಯಲ್ಲಿ ರಿಮ್ಸ್ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ನರಳುವಂತಿದ್ದಾರೆ.
ಕುಡಿವ ನೀರು ಪೂರೈಕೆಗೆ ಸಂಬಂಧಿಸಿದಂತೆ ಕಳೆದ 15 ದಿನಗಳಿಂದ ಜನರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ನಗರಸಭೆ ನಿರ್ಲಕ್ಷ್ಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಸಕಾಲಕ್ಕೆ ಎಚ್ಚೆತ್ತುಕೊಳ್ಳದ ಪರಿಣಾಮ ನೂರಾರು ಜನರು ವಾಂತಿ, ಬೇಧಿಯ ಶಾಪಕ್ಕೆ ಗುರಿಯಾಗಿ ರಿಮ್ಸ್ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 24x7 ಶುದ್ಧ ಕುಡಿವ ನೀರು ಪೂರೈಕೆಗೆ 135 ಕೋಟಿ ಯೋಜನೆಯಲ್ಲಿ70 ಕೋಟಿ ರೂ. ಗುತ್ತೇದಾರರಿಗೆ ಪಾವತಿಸಿದರೂ, ಹನಿ ನೀರು ಪೂರೈಕೆಯಾಗದೇ, ಹಣ ಲೂಟಿ ಮಾಡಿದ ಜನ ಒಂದೆಡೆ ಮಜಾ ಮಾಡುತ್ತಿದ್ದರೇ, ಜನರು ಮಾತ್ರ ಕಲುಷಿತ ನೀರಿನಿಂದ ಸಾಯುವ ಮತ್ತು ಆಸ್ಪತ್ರೆಯಲ್ಲಿ ನರಳುವಂತಹ ದುಸ್ಥಿತಿ ನಗರದಲ್ಲಿದೆ.
ಶುದ್ಧ ಕುಡಿವ ನೀರು ಪೂರೈಕೆಗೆ ಕ್ರಮಕ್ಕೆ ಆಗ್ರಹ
ನಗರಸಭೆ ನಿರ್ಲಕ್ಷ್ಯದಿಂದ ಮಕ್ಕಳು, ವಯೋವೃದ್ಧರು ತೀವ್ರ ಅನಾರೋಗ್ಯದಿಂದ ಬಳಲುವಂತಹ ಪರಿಸ್ಥಿತಿಗೆ ಕಾರಣವಾಗಿದೆ. ಶುದ್ಧ ಕುಡಿವ ನೀರಿನ ಪೂರೈಕೆಗೆ ಕೋಟ್ಯಾಂತರ ರೂ. ಪ್ರತಿ ವರ್ಷ ವೆಚ್ಚವಾಗುವುದು ಬಿಟ್ಟರೇ, ಸಾರ್ವಜನಿಕರಿಗೆ ಉತ್ತಮ ಕುಡಿವ ನೀರು ಪೂರೈಕೆಯಾಗುತ್ತಿಲ್ಲ. ಈ ಬಗ್ಗೆ ಪದೇ ಪದೇ ವಿವಿಧ ವಾರ್ಡ್ ಜನ ನಗರಸಭೆ ಗಮನಕ್ಕೆ ತಂದರೂ ಯಾವುದೇ ಉಪಯೋಗವಾಗಿಲ್ಲ. ಅನಾಹುತ ಸಂಭವಿಸಿದಾಗಲೇ ಎಚ್ಚೆತ್ತುಕೊಳ್ಳುವುದು ಬಿಟ್ಟರೇ, ಶಾಶ್ವತ ಪರಿಹಾರ ಒದಗಿಸುವ ಯಾವುದೇ ಪರ್ಯಾಯ ಕ್ರಮ ಕೈಗೊಳ್ಳದ ಜಡತ್ವ ನಗರಸಭೆ ಭಾಗವಾಗಿದೆ. ಅಶುದ್ಧ ಕುಡಿವ ನೀರಿನ ಪೂರೈಕೆಯಿಂದ ಇಂದು ಕಳೆದ ಎರಡು ದಿನಗಳಿಂದ ರಿಮ್ಸ್ ಆಸ್ಪತ್ರೆಯಲ್ಲಿ ವಾಂತಿ ಬೇಧಿ ಪ್ರಕರಣಗಳ ಸಂಖ್ಯೆ ಇದ್ದಕ್ಕಿದ್ದಂತೆ ಹೆಚ್ಚಳವಾಗಿವೆ.
ಇದರ ಮಧ್ಯೆ ಶುದ್ಧ ಕುಡಿವ ನೀರು ನೀಡದಿದ್ದರೇ, ಮೂಲಭೂತ ಸೌಕರ್ಯಗಳಿಗೆ ಜನ ಎಲ್ಲಿಗೆ ಹೋಗಬೇಕು ಎನ್ನುವ ಪ್ರಶ್ನೆಗೆ ಸ್ಥಳೀಯ ಸಂಸ್ಥೆ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಉತ್ತರಿಸಬೇಕಾಗಿದೆ.
(ಒನ್ಇಂಡಿಯಾ ಸುದ್ದಿ)