ಚೋಳರ ಕಾಲದ ಹರಿಹರೇಶ್ವರ ದೇಗುಲ ತೆರವಿಗೆ ವಿರೋಧ!
ಮಂಡ್ಯ, ಮಾರ್ಚ್ 29: ನಮ್ಮ ರಾಜ್ಯದಲ್ಲಿ ಹಲವು ಶತಮಾನಗಳ ಇತಿಹಾಸ ಹೊಂದಿರುವ ನೂರಾರು ದೇವಾಲಯಗಳಿವೆ. ಆದರೆ ಅವುಗಳ ಸಮರ್ಪಕ ನಿರ್ವಹಣೆಯ ಕೊರತೆಯಿಂದಾಗಿ ಶಿಥಿಲಾವಸ್ಥೆಯನ್ನು ತಲುಪಿದ್ದು, ಈ ಪೈಕಿ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನಲ್ಲಿರುವ ಹರಿಹರಪುರ ಗ್ರಾಮದ ಹೊರವಲಯದಲ್ಲಿರುವ ಚೋಳರ ಕಾಲದ ಪುರಾತನ ಹರಿಹರೇಶ್ವರ ದೇಗುಲವೂ ಒಂದಾಗಿದೆ.
ಈ ದೇಗುಲವನ್ನು ನೋಡಿದ ತಕ್ಷಣವೇ ಇದು ಪುರಾತನ ಕಾಲದ್ದು ಎಂಬುದಾಗಿ ಸುಲಭವಾಗಿ ಹೇಳಬಹುದಾಗಿದೆ. ಇಂತಹ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿ ಅಭಿವೃದ್ಧಿಪಡಿಸುವ ಬದಲಿಗೆ ಇಲ್ಲಿರುವ ದೇವರ ಮೂರ್ತಿ ಮತ್ತು ಶಿವಲಿಂಗವನ್ನು ನೂತನವಾಗಿ ನಿರ್ಮಿಸಿರುವ ದೇವಸ್ಥಾನಕ್ಕೆ ಸ್ಥಳಾಂತರ ಮಾಡಿ ದೇವಾಲಯವನ್ನು ತೆರವುಗೊಳಿಸಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿದ್ದು ಅದಕ್ಕೆ ವಿರೋಧಗಳು ಕೂಡ ವ್ಯಕ್ತವಾಗಿವೆ.
ನಂಜನಗೂಡಿನ ಈ ಉದ್ಯಾನಕ್ಕೆ ಕಾಲಿಟ್ಟರೆ ಹಿಡಿಶಾಪ ಹಾಕ್ತೀರಾ..!
ಅಪರೂಪದ ವಾಸ್ತುಶಿಲ್ಪದ ಈ ದೇವಾಲಯ
ಹಾಗೆ ನೋಡಿದರೆ ಈಶ್ವರ ಲಿಂಗವನ್ನು ಹೊಂದಿರುವ ಕಾರಣ ಹರಿಹರೇಶ್ವರ ದೇವಾಲಯವೆಂದು ಕರೆಯಲಾಗುತ್ತಿದ್ದು, ಹರಿಹರೇಶ್ವರ ದೇಗುಲವಿರುವ ಕಾರಣ ಗ್ರಾಮವು ಹರಿಹರಪುರವಾಗಿದೆ. ಈ ದೇಗುಲ ಪೌರಾಣಿಕ ಮತ್ತು ಐತಿಹಾಸಿಕತೆಯನ್ನು ಹೊಂದಿದ್ದು, ಅಪರೂಪದ ವಾಸ್ತುಶಿಲ್ಪವು ಈ ದೇವಾಲಯದ ಪ್ರಮುಖ ಆಕರ್ಷಣೆಯಾಗಿದೆ.
ಐದು ಅಡಿ ಎತ್ತರದ ಹರಿಹರೇಶ್ವರ ಮೂರ್ತಿ
ಇನ್ನು ದೇವಾಲಯದ ವಾಸ್ತುಶಿಲ್ಪ ಇನ್ನಿತರ ಕಲಾಕುಶಲತೆಯನ್ನು ನೋಡುವುದಾದರೆ ಇದು ಚೋಳರ ಕಾಲದಲ್ಲಿ ನಿರ್ಮಾಣವಾಗಿರುವ ದೇವಾಲಯವಾಗಿರಬಹುದೆಂದು ಹೇಳಬಹುದಾಗಿದೆ. ಮೇಲ್ನೋಟಕ್ಕೆ ಈ ದೇವಾಲಯವು ಸಂಸ್ಕೃತಿ ಮತ್ತು ಪರಂಪರೆಯ ಕುರಿತಂತೆ ಬೆಳಕು ಚೆಲ್ಲುವಂತಿದ್ದು, ಸಾಲಿಗ್ರಾಮ ಕೃಷ್ಣಶಿಲೆಯಿಂದ ನಿರ್ಮಿಸಿರುವ ಐದು ಅಡಿ ಎತ್ತರದ ಹರಿಹರೇಶ್ವರ ಮೂರ್ತಿ ಮತ್ತು ಕಾಶಿ ವಿಶ್ವನಾಥ ದೇವಸ್ಥಾನದ ಶಿವಲಿಂಗದ ಮಾದರಿಯಲ್ಲಿರುವ ಈಶ್ವರ ಲಿಂಗ ದೇವಾಲಯದ ವಿಶೇಷತೆಯಾಗಿದೆ.
ಶಿವಲಿಂಗವನ್ನು ಸ್ಥಳಾಂತರ ಮಾಡಲಾಗುತ್ತಿದೆ
ರಾಜ್ಯದಲ್ಲಿರುವ ದೇವಾಲಯಗಳಲ್ಲಿ ಹರಿಹರೇಶ್ವರ ದೇವಾಲಯವು ಅಪರೂಪದ್ದಾಗಿದ್ದು, ಇದನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಪ್ರಯತ್ನವನ್ನು ಮಾಡಬಹುದಾಗಿತ್ತು. ಆದರೆ ದೇವಾಲಯ ಶಿಥಿಲಾವಸ್ಥೆಯಲ್ಲಿದೆ ಎಂಬ ಕಾರಣ ನೀಡಿ ಇಲ್ಲಿರುವ ದೇವರ ಮೂರ್ತಿ ಮತ್ತು ಶಿವಲಿಂಗವನ್ನು ಸ್ಥಳಾಂತರ ಮಾಡಲಾಗುತ್ತಿದೆ ಎಂಬ ಆರೋಪಗಳನ್ನು ಇತಿಹಾಸಕಾರರು ಮಾಡುತ್ತಿದ್ದಾರೆ.
ದೇವರ ಮೂರ್ತಿಯನ್ನು ಒಂದೇ ಶಿಲ್ಪದಲ್ಲಿ ಕೆತ್ತಲಾಗಿದೆ
ಈ ಕುರಿತಂತೆ ಮಾತನಾಡಿರುವ ಇತಿಹಾಸಕಾರರಾದ ತೈಲೂರು ವೆಂಕಟಕೃಷ್ಣ ಮತ್ತು ಹರವು ದೇವೇಗೌಡ ಅವರು, ದೇವಾಲಯದಲ್ಲಿರುವ ಮೂರ್ತಿಗಳನ್ನು ಸ್ಥಳಾಂತರ ಮಾಡದೆ ಶಿಥಿಲವಾಗಿರುವ ದೇವಾಲಯವನ್ನು ಜೀರ್ಣೋದ್ಧಾರ ಮಾಡಿ ಅಭಿವೃದ್ಧಿಪಡಿಸಬೇಕು ಸರ್ಕಾರವನ್ನು ಒತ್ತಾಯಿಸಿದ್ದಾರೆ. ದೇವರ ಮೂರ್ತಿಯನ್ನು ಒಂದೇ ಶಿಲ್ಪದಲ್ಲಿ ಕೆತ್ತಲಾಗಿದ್ದು, ಇದು ಅಪರೂಪದ ವಾಸ್ತುಶಿಲ್ಪವಾಗಿದೆ.
Recommended Video
ವಾಸ್ತು ವೈಭವದ ಬಗ್ಗೆ ಬೆಳಕು ಚೆಲ್ಲುವ ದೇವಾಲಯ
ದೇವಸ್ಥಾನವನ್ನು ಶಿಥಿಲವಾಗಿದೆ ಎಂಬ ಒಂದೇ ಒಂದು ಕಾರಣ ನೀಡಿ ಒಡೆದು ಹಾಕುವುದು ಸರಿಯಾದ ಕ್ರಮವಲ್ಲ. ಈ ಬಗ್ಗೆ ರಾಜ್ಯ ಹಾಗೂ ಕೇಂದ್ರ ಪುರಾತತ್ವ ಇಲಾಖೆಗಳಿಗೆ ದೂರು ನೀಡುವುದಾಗಿ ತಿಳಿಸಿರುವ ಅವರು, ನಮ್ಮ ಸಂಸ್ಕೃತಿ ಪರಂಪರೆ, ಆಚಾರ-ವಿಚಾರಗಳು ಹಾಗೂ ದೇವಸ್ಥಾನದ ವಾಸ್ತು ವೈಭವದ ಬಗ್ಗೆ ಬೆಳಕು ಚೆಲ್ಲುವ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿ ಮುಂದಿನ ಪೀಳಿಗೆಗೆ ಉಳಿಸಿ ಸಂರಕ್ಷಣೆ ಮಾಡುವಂತೆ ಮನವಿ ಮಾಡಿದ್ದಾರೆ. ಸರ್ಕಾರ ಈ ಕುರಿತಂತೆ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.