ಮೈಷುಗರ್ ನಲ್ಲಿ ‘ಬ್ಯಾಡ್ ಮ್ಯಾನರ್ಸ್’ ಚಿತ್ರೀಕರಣಕ್ಕೆ ಅಪಸ್ವರ!
ಮಂಡ್ಯ, ಜನವರಿ 21: ದಿ.ಅಂಬರೀಶ್ ಪುತ್ರ, ಅಭಿಷೇಕ್ ಅಂಬರೀಶ್ ಅವರು ನಟಿಸುತ್ತಿರುವ 'ಬ್ಯಾಡ್ ಮ್ಯಾನರ್ಸ್' ಚಿತ್ರದ ಚಿತ್ರೀಕರಣವನ್ನು ಮಂಡ್ಯದ ಮೈಷುಗರ್ ಕಾರ್ಖಾನೆಯಲ್ಲಿ ನಡೆಸುವುದಕ್ಕೆ ಪರ-ವಿರೋಧಗಳು ವ್ಯಕ್ತವಾಗತೊಡಗಿದೆ. ರೈತ ಹಿತರಕ್ಷಣಾ ಸಮಿತಿಯು ಸಂಸದೆ ಸುಮಲತಾ ಅವರನ್ನೇ ಗುರಿಯಾಗಿಸಿಕೊಂಡು ಆರೋಪಗಳನ್ನು ಮಾಡುತ್ತಿದ್ದರೆ, ಇನ್ನು ಕೆಲವು ಸಂಘಟನೆಗಳು ಸುಮಲತಾ ಪರ ಬ್ಯಾಟಿಂಗ್ ಮಾಡುತ್ತಿರುವುದು ಕಂಡು ಬರುತ್ತಿದೆ. ಅಭಿಷೇಕ್ ಅಂಬರೀಶ್ ನಟಿಸುತ್ತಿರುವ ಈ ಸಿನಿಮಾ ಭಾರೀ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಈ ಸಿನಿಮಾವನ್ನು ದುನಿಯಾ ಸೂರಿ ನಿರ್ದೇಶಿಸುತ್ತಿದ್ದಾರೆ.
ರಾಷ್ಟ್ರಪತಿ, ಪ್ರಧಾನಮಂತ್ರಿಗೆ ಪತ್ರ ಬರೆದ ಮಂಡ್ಯದ ರೈತ: ಕಾರಣವೇನು?
ಅಭೀಷೇಕ್ ಅಂಬರೀಶ್ ನಟನೆಯ ಚಿತ್ರ
ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಚಿತ್ರೀಕರಣವನ್ನು ಇದೀಗ ಮಂಡ್ಯದ ಮೈಷುಗರ್ ಕಾರ್ಖಾನೆ ಸುತ್ತಮುತ್ತ ನಡೆಸಲು ತೀರ್ಮಾನಿಸಲಾಗಿದೆ. ಆದರೆ ಇಲ್ಲಿ ಚಿತ್ರೀಕರಣ ಮಾಡಬಾರದು ಎಂಬುದು ಕೆಲವರ ಆಗ್ರಹವಾಗಿದೆ. ಈ ಕುರಿತಂತೆ ರೈತ ಹಿತರಕ್ಷಣಾ ಸಮಿತಿ ಆರೋಪ ಏನೆಂದರೆ ಸಂಸತ್ ಸದಸ್ಯರ ಅಧಿಕಾರವನ್ನು ಸುಮಲತಾ ದುರುಪಯೋಗ ಮಾಡಿಕೊಳ್ಳುತ್ತಿದ್ದು, ತಮ್ಮ ಪುತ್ರನ ಚಿತ್ರದ ಚಿತ್ರೀಕರಣಕ್ಕಾಗಿ ಸಕ್ಕರೆ ಕಾರ್ಖಾನೆಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ದೂರುತ್ತಿದ್ದಾರೆ. ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಾ. ಜಿ.ಮಾದೇಗೌಡ, ಪದಾಧಿಕಾರಿಗಳಾದ ಸುನಂದಾ ಜಯರಾಂ ಇನ್ನಿತರು ಈ ಸಂಬಂಧ ಸುಮಲತಾರವರ ವಿರುದ್ಧ ಹರಿಹಾಯ್ದಿದ್ದಾರೆ.
ಬೆಂದಮನೆಯಲ್ಲಿ ಗಳ ಹಿರಿಯಲು ಯತ್ನ
ತಮ್ಮ ಸ್ಥಾಪಿತ ಖಾಸಗಿ ಮನೋಭಾವವನ್ನು ಮಂಡ್ಯ ಜಿಲ್ಲೆಯ ಜನತೆಯ ಮೇಲೆ ಹೇರಿಕೊಂಡು ಬರುತ್ತಿದ್ದಾರೆ. ಮೈಸೂರು ಕಾರ್ಖಾನೆಯನ್ನು ಅದರ ಆಸ್ತಿಗಳನ್ನು ಕಬಳಿಸಲು ಖಾಸಗಿ ಲಾಭಿಗಳಿಗೆ ಅರ್ಪಿಸಲು ಸಂಸತ್ ಸದಸ್ಯತ್ವವನ್ನು ಉಪಯೋಗಿಸಿಕೊಂಡು ಬರುತ್ತಿದ್ದಾರೆ. ನಿಜವಾದ ರೈತರಿಗೆ ಒಳ್ಳೆಯದಾಗಲು ಕಾರ್ಖಾನೆಯನ್ನು ಖಾಸಗೀಕರಣಗೊಳಿಸಿ ಪ್ರಾರಂಭಿಸುತ್ತೇನೆ ಎಂದು ಹೇಳುತ್ತಲೇ 40 ವರ್ಷಗಳ ಕಾಲ ರೈತರಿಗೆ ಶಾಶ್ವತವಾಗಿ ಅನ್ಯಾಯ ಮಾಡುತ್ತಿದ್ದಾರೆ. ಜಿಲ್ಲೆಗೆ, ಜಿಲ್ಲೆಯ ಜನತೆಗೆ ದ್ರೋಹ ಮಾಡುತ್ತಿದ್ದಾರೆ. ಬೆಂದ ಮನೆಯಲ್ಲಿ ಗಳ ಹಿರಿಯುವ ಮನೋಭಾವವನ್ನು ಸಂಸತ್ ಸದಸ್ಯರು ಪ್ರದರ್ಶನ ಮಾಡುತ್ತಿದ್ದು, ಚಿತ್ರೀಕರಣ ಸಂಬಂಧ ಜಿಲ್ಲಾಡಳಿತ ತನಿಖೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
25ಕ್ಕೂ ಹೆಚ್ಚು ಸಿನಿಮಾಗಳ ಚಿತ್ರೀಕರಣ ನಡೆದಿದೆ
ಇನ್ನೊಂದೆಡೆ ಮೈಷುಗರ್ ನಲ್ಲಿ ‘ಬ್ಯಾಡ್ ಮ್ಯಾನರ್ಸ್' ಚಿತ್ರದ ಚಿತ್ರೀಕರಣವನ್ನು ಮಾಡುತ್ತಿರುವುದನ್ನು ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್ ಸಮರ್ಥಿಸಿಕೊಂಡಿದ್ದು, ಸಂಸದೆ ಸುಮಲತಾ ಅಂಬರೀಶ್ ಅವರ ರಾಜಕೀಯ ಬೆಳವಣಿಗೆಯನ್ನು ಸಹಿಸದ ಕೆಲವು ಪ್ರಗತಿಪರ ಮುಖಂಡರು, ಸ್ವಾರ್ಥ ಸಾಧನೆಗೆ ಹೋರಾಟ ನಡೆಸುತ್ತಿದ್ದಾರೆ ಎಂದು ದೂರಿದ್ದಾರೆ. ಮೈಷುಗರ್ ಕಾರ್ಖಾನೆಯಲ್ಲಿ ಇದುವರೆಗೂ 25ಕ್ಕೂ ಹೆಚ್ಚು ಸಿನಿಮಾಗಳ ಚಿತ್ರೀಕರಣ ನಡೆದಿದೆ. ಅದೇ ಮಾದರಿಯಲ್ಲಿ ಬ್ಯಾಡ್ ಮ್ಯಾನರ್ಸ್ ಚಿತ್ರದ ಚಿತ್ರೀಕರಣಕ್ಕೆ ನಿಯಮಾನುಸಾರ ಕಾರ್ಖಾನೆ ಆಡಳಿತ ಮಂಡಳಿಯಿಂದ ಅನುಮತಿಯನ್ನು ಪಡೆಯಲಾಗಿದೆ. ಸ್ಟುಡಿಯೋ-18 ಪ್ರೋಡಕ್ಷನ್ನಡಿ 15 ದಿನಗಳ ಶೂಟಿಂಗ್ಗೆ 2,65,500 ರೂ. ಹಣ ಪಾವತಿಸಿ ಚಿತ್ರೀಕರಣ ನಡೆಸಲಾಗುತ್ತಿರುವುದಾಗಿ ತಿಳಿಸಿದ್ದಾರೆ.
Recommended Video
ಜಿ.ಮಾದೇಗೌಡರ ಹಾದಿ ತಪ್ಪಿಸುತ್ತಿದ್ದಾರೆ
ಸಾಮಾನ್ಯ ಅರಿವಿಲ್ಲದೆ, ಕಾನೂನು ಜ್ಞಾನವೂ ಇಲ್ಲದವರಂತೆ ಪ್ರಗತಿಪರ ಮುಖಂಡರು ವಿನಾಕಾರಣ ಸಂಸದರ ವಿರುದ್ಧ ಟೀಕೆ ಮಾಡುವುದನ್ನೇ ರೂಢಿ ಮಾಡಿಕೊಂಡಿದ್ದಾರೆ. ಕಾರ್ಖಾನೆ ಅತಿಕ್ರಮಣ, ಅತಿಕ್ರಮ ಪ್ರವೇಶ ಮಾಡಿದ್ದಾರೆಂಬ ಆರೋಪಗಳಿಗೆ ಅರ್ಥವೇ ಇಲ್ಲ. ಒಂದು ಕಂಪನಿಯೊಳಗೆ ಚಿತ್ರೀಕರಣ ನಡೆಸಿದಾಕ್ಷಣ ಅದು ಅತಿಕ್ರಮವಾಗುವುದೇ..? ಇದರ ಸಾಮಾನ್ಯ ಜ್ಞಾನವೂ ಪ್ರಗತಿಪರ ಮುಖಂಡರಿಗಿಲ್ಲ. ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯನ್ನೇ ಕೆಲವು ಪ್ರಗತಿಪರ ಮುಖಂಡರು ದುರುಪಯೋಗಪಡಿಸಿಕೊಂಡಿದ್ದು, ಜಿ.ಮಾದೇಗೌಡರ ಹೆಸರಿನಲ್ಲಿ ತಮ್ಮ ಸ್ವಾರ್ಥ ಸಾಧನೆಗೆ ಸಮಿತಿಯ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಳಿ ವಯಸ್ಸಿನಲ್ಲಿ ಮಾದೇಗೌಡರನ್ನು ಹೋರಾಟಕ್ಕೆ ಕರೆತಂದು ಅವರ ಹಾದಿ ತಪ್ಪಿಸುತ್ತಿದ್ದಾರೆ. ಜತೆಗೆ ಸಿನಿಮಾರಂಗಕ್ಕೂ ರಾಜಕೀಯ ಥಳಕು ಅಂಟಿಸುವ ಮೂಲಕ ಸಣ್ಣತನ ಪ್ರದರ್ಶಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಒಟ್ಟಾರೆಯಾಗಿ ಈ ವಿಚಾರ ಎಲ್ಲಿಗೆ ಬಂದು ನಿಲ್ಲುತ್ತದೆ ಎಂಬುದನ್ನು ಕಾದು ನೋಡಬೇಕಿದೆ.