ಒಂದು ಮತದ ಸೋಲು: ಜೆಡಿಎಸ್ ಬೆಂಬಲಿಗರ ಆಕ್ರೋಶ
ಮಂಡ್ಯ, ಆಗಸ್ಟ್ 31: ಮಳವಳ್ಳಿ ತಾಲೂಕಿನ ಗ್ರಾಮ ಪಂಚಾಯಿತಿ ಚುನಾವಣೆ ಮತ ಎಣಿಕೆಯಲ್ಲಿ ಲೋಪವಾಗಿದೆ ಎಂದು ಆರೋಪಿಸಿ ತಾಲೂಕು ಪಂಚಾಯಿತಿ ಸದಸ್ಯ ಪುಟ್ಟಸ್ವಾಮಿ ಸೇರಿದಂತೆ ಹಲವು ಮುಖಂಡರು ತಹಸೀಲ್ದಾರ್ ಗೆ ಮುತ್ತಿಗೆ ಹಾಕಿ, ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಳವಳ್ಳಿಯ ಎರಡು ಗ್ರಾಮ ಪಂಚಾಯಿತಿಗಳಲ್ಲಿ ಗೆಲುವು ಸಾಧಿಸಿದ್ದ ಅಭ್ಯರ್ಥಿಗಳು ತಾಲೂಕು ಪಂಚಾಯಿತಿ ಕ್ಷೇತ್ರಕ್ಕೆ ಚುನಾಯಿತರಾದ ಹಿನ್ನೆಲೆಯಲ್ಲಿ ಕಗ್ಗಲೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳದಾಸನಹಳ್ಳಿ, ಹಿಟ್ಟನಹಳ್ಳಿ ಗ್ರಾಮ ಪಂಚಾಯಿತಿ ಮಾರ್ಕಾಲು, ಹಿಟ್ಟನಹಳ್ಳಿ ಗ್ರಾಮಗಳಿಗೆ ಎರಡು ದಿನಗಳ ಹಿಂದೆ ಚುನಾವಣೆ ನಡೆದಿತ್ತು.[ಗೊತ್ತಿಲ್ಲದ ವಿಷಯ ಮಾತಾಡುವ ರಮ್ಯಾಗೆ ಯಾಕ್ರೀ ಇಷ್ಟೊಂದು ಪ್ರಚಾರ?]
ಇದರ ಮತ ಎಣಿಕೆ ಪ್ರಕ್ರಿಯೆ ಬುಧವಾರ ತಾಲೂಕು ಕಚೇರಿಯಲ್ಲಿ ನಡೆದು, ಹಿಟ್ಟನಹಳ್ಳಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗೆ ಒಂದು ಮತದ ಅಂತರದಿಂದ ಸೋಲುಂಟಾಯಿತು. ಎಣಿಕೆ ವೇಳೆ ಒಂದು ಮತಪತ್ರವನ್ನು ಕಳ್ಳತನ ಮಾಡಲಾಗಿದ್ದು, ಫಲಿತಾಂಶದಲ್ಲಿ ನಮಗೆ ಅನ್ಯಾಯವಾಗಿದೆ ಎಂದು ಜೆಡಿಎಸ್ ಮುಖಂಡರು ಪ್ರತಿಭಟನೆ ನಡೆಸಿ, ತಹಸೀಲ್ದಾರ್ ದಿನೇಶ್ ಚಂದ್ರ ಅವರಿಗೆ ಮುತ್ತಿಗೆ ಹಾಕಿ, ಪ್ರತಿಭಟಿಸಿದರು.['ರಮ್ಯಾ ಅವರ ಹಿಂದಿನ ಜನ್ಮದ ಬಗ್ಗೆ ಗೊತ್ತಿಲ್ಲ']
ಈ ಸಂದರ್ಭದಲ್ಲಿ ತಹಸೀಲ್ದಾರ್ ಅವರು ಪ್ರತಿಭಟನಾಕಾರರೊಂದಿಗೆ ಮಾತನಾಡಿ, ಮತ ಎಣಿಕೆ ಸರಿಯಾಗಿ ನಡೆದಿದೆ. ಇದರಲ್ಲಿ ಅಧಿಕಾರಿಗಳ ಲೋಪವೇನಿಲ್ಲ, ನಿಮಗೆ ಸಂದೇಹವಿದ್ದರೆ ವರದಿ ಕೊಡುತ್ತೇನೆ. ಬೇಕಾದರೆ ನ್ಯಾಯಾಲಯಕ್ಕೆ ಹೋಗಿ ಎಂದು ಹೇಳಿದರು.
ನ್ಯಾಯಾಲಯದಲ್ಲೇ ಪ್ರಶ್ನಿಸೋಣ ಎಂದು ಜೆಡಿಎಸ್ ಮುಖಂಡರು ಪ್ರತಿಭಟನೆಯನ್ನು ವಾಪಸ್ ಪಡೆದರು.