ಭಾರೀ ಚರ್ಚೆಗೆ ಗ್ರಾಸವಾದ ಕೆಆರ್ ಎಸ್ನಲ್ಲಿ ಮೋಜು ಮಸ್ತಿ ವೀಡಿಯೋ ಈಗಿನದಲ್ಲ!
ಮಂಡ್ಯ, ಡಿಸೆಂಬರ್ 31: ಕೆ.ಆರ್.ಎಸ್. ಜಲಾಶಯಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಇದೆ. ಆದರೂ ಇಲ್ಲಿನ ಪೊಲೀಸರು ಹಾಗೂ ಅಧಿಕಾರಿಗಳ ಕಣ್ತಪ್ಪಿಸಿ ವ್ಯಕ್ತಿಯೊಬ್ಬ ವಾಹನವನ್ನು ಚಲಾಯಿಸಿ ಮೋಜು ಮಸ್ತಿ ನಡೆಸಿರುವುದು ಇತ್ತೀಚೆಗೆ ಬೆಳಕಿಗೆ ಬಂದಿದ್ದು ಅದರ ವೀಡಿಯೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ.
ಆದರೆ ಅದು ಈಗಿನದಲ್ಲ ಎಂಟು ವರ್ಷಗಳ ಹಿಂದಿನದು ಎಂದು ಕಾವೇರಿ ನೀರಾವರಿ ನಿಗಮದ ಮೂಲಗಳು ಹೇಳಿವೆ. ಕಾನೂನು ಉಲ್ಲಂಘನೆ ಮಾಡಿ ಕೆಆರ್ ಎಸ್ನ ಹಿನ್ನೀರಿನಲ್ಲಿ ಕಾರನ್ನು ಚಾಲನೆ ಮಾಡಿರುವ ವ್ಯಕ್ತಿ ಮೈಸೂರಿನವನಾಗಿದ್ದು ಉದ್ಯಮಿ ವಿಕ್ರಂ ಗುಪ್ತಾ ಎಂದು ಗುರುತಿಸಲಾಗಿದೆ. ಈ ವೀಡಿಯೋಗಳನ್ನು ಆತನೇ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾನೆ ಎನ್ನಲಾಗಿದೆ.
ವಿಡಿಯೋ: ಟ್ರಾಫಿಕ್ ಪೊಲೀಸನನ್ನೇ ಕಾರಿನ ಮೇಲೆ ಎಳೆದೊಯ್ದ ಭೂಪ!
ಈತ ಹೀಗೆ ಮೋಜು ಮಸ್ತಿ ಮಾಡಲು ಭದ್ರತಾ ಲೋಪವೇ ಕಾರಣ ಎಂಬ ಆರೋಪ ಕೇಳಿಬಂದಿತಲ್ಲದೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಹೀಗಾಗಿ ಭದ್ರತೆ ಲೆಕ್ಕಿಸದೆ ನಿಷೇಧಿತ ಪ್ರದೇಶಕ್ಕೆ ಅಕ್ರಮ ಪ್ರವೇಶ ಮಾಡಿ, ಅಣೆಕಟ್ಟೆ ನೀರಿನೊಳಗೆ ಬೇಕಾಬಿಟ್ಟಿಯಾಗಿ ಕಾರು ಚಾಲನೆ ಮಾಡಿದ್ದರೂ ಕೆಆರ್ ಎಸ್ನ ಭದ್ರತಾ ಸಿಬ್ಬಂದಿ ಮೌನ ವಹಿಸಿರುವುದು ಏಕೆ ಎಂಬ ಪ್ರಶ್ನೆಗಳನ್ನು ಸಾರ್ವಜನಿಕರು ಕೇಳಿದ್ದರಲ್ಲದೆ, ಸಾಮಾನ್ಯ ಜನರನ್ನು ಅಣೆಕಟ್ಟೆ ಬಳಿ ಬಿಡಲು ನಿರಾಕರಿಸುವ ಭದ್ರತಾ ಸಿಬ್ಬಂದಿ ವಿಕ್ರಂ ಗುಪ್ತನನ್ನು ಮೋಜು ಮಸ್ತಿ ಮಾಡಲು ಹೇಗೆ ಬಿಟ್ಟರು ಎಂದು ಹರಿಹಾಯ್ದಿದ್ದರು.
ಆದರೆ ಈ ವೀಡಿಯೋದ ಹಿಂದೆ ಬಿದ್ದವರಿಗೆ ಗೊತ್ತಾಗಿದ್ದು ಇದು ಸುಮಾರು ಎಂಟು ವರ್ಷಗಳ ಹಿಂದಿನ ವೀಡಿಯೋವಂತೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲ ವಿಷಯಗಳನ್ನು ಶೇರ್ ಮಾಡಿಕೊಳ್ಳುವ ಹುಚ್ಚುತನ ಹೆಚ್ಚಾದ ಹಿನ್ನಲೆಯಲ್ಲಿ ವಿಕ್ರಂ ಗುಪ್ತಾ ಕೂಡ ತನ್ನ ಬಳಿಯಿದ್ದ ಹತ್ತು ವರ್ಷಗಳ ಹಿಂದಿನ ವೀಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಹರಿಯಬಿಟ್ಟಿದ್ದು ಇದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.