ಮುಗಿಯದ ಕಾಮಗಾರಿ, ಆರಂಭವಾಗದ ಫುಡ್ ಪಾರ್ಕ್!
ಮಂಡ್ಯ, ಫೆಬ್ರವರಿ 2: ಎಲ್ಲವೂ ಸರಿ ಹೋಗಿದ್ದರೆ ಇಷ್ಟರಲ್ಲೇ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನಲ್ಲಿ ರಾಜ್ಯದ ಎರಡನೇ ಬೃಹತ್ ಆಹಾರ ಸಂಸ್ಕರಣಾ ಘಟಕದ ನಿರ್ಮಾಣ ಕಾಮಗಾರಿ ಮುಗಿದು ಕಾರ್ಯ ಆರಂಭಿಸಬೇಕಿತ್ತು. ಆದರೆ ಕಾಮಗಾರಿ ಕುಂಟುತ್ತಾ ಸಾಗುತ್ತಿರುವುದನ್ನು ನೋಡಿದರೆ ಸದ್ಯಕ್ಕೆ ಇದು ಕಾರ್ಯಾರಂಭ ಮಾಡುವ ಯಾವ ಲಕ್ಷಣಗಳು ಕಾಣುತ್ತಿಲ್ಲ.
ಸಾವಿರಾರು ನಿರುದ್ಯೋಗಿಗಳಿಗೆ ಮತ್ತು ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ಬಣ್ಣೇನಹಳ್ಳಿಯ ಬಳಿ ಮುನ್ನೂರು ಎಕರೆ ಭೂಮಿಯನ್ನು ಗುರುತಿಸಿ ಫೇವರಿಚ್ ಇನ್ಫ್ರಾ ಮೆಗಾ ಫುಡ್ ಪಾರ್ಕ್ ಲಿ. ಕಂಪನಿಗೆ ನೀಡಲಾಗಿತ್ತು. ನಂತರ ಇದಕ್ಕೆ ಭೂಮಿ ಪೂಜೆಯನ್ನು ನೆರವೇರಿಸಲಾಗಿತ್ತು. ಈ ವೇಳೆ ಬೃಹತ್ ಆಹಾರ ಸಂಸ್ಕರಣಾ ಘಟಕದ ನಿರ್ಮಾಣ ಕಾಮಗಾರಿ ಮುಗಿದು ಒಂದೆರಡು ವರ್ಷಗಳಲ್ಲಿಯೇ ಕೆಲಸವನ್ನು ಆರಂಭಿಸಿ ಸಾವಿರಾರು ಜನ ನಿರುದ್ಯೋಗಿಗಳಿಗೆ ಉದ್ಯೋಗ ದೊರಕುವುದಲ್ಲದೆ, ರೈತರ ಬಾಳು ಬಂಗಾರವಾಗಲಿದೆ ಎಂಬ ನಿರೀಕ್ಷೆ ಜನರಲ್ಲಿ ಮೂಡಿತ್ತು. ಆದರೆ ಅವತ್ತು ಆರಂಭಗೊಂಡ ಕಾಮಗಾರಿ ಇಂದಿಗೂ ಪೂರ್ಣಗೊಳ್ಳದೆ ಆಮೆಗತಿಯಲ್ಲಿಯೇ ನಡೆಯುತ್ತಿದ್ದು. ರೈತರು ಮತ್ತು ಉದ್ಯೋಗ ಆಕಾಂಕ್ಷಿಗಳಲ್ಲಿ ನಿರಾಸೆ ತಂದಿದೆ.
"ಧಾರವಾಡ ಪೇಡಾ, ಮೈಸೂರು ಪಾಕ್ನಂತೆ ಮಂಡ್ಯದ ಬೆಲ್ಲವೂ ಫೇಮಸ್ ಆಗಬೇಕು''
ದಶಕದಿಂದ ನಡೆಯುತ್ತಿರುವ ಕಾಮಗಾರಿ
ಹಾಗೆ ನೋಡಿದರೆ ಆಹಾರ ಸಂಸ್ಕರಣಾ ಘಟಕದ ಕನಸು ಇವತ್ತು, ನಿನ್ನೆಯದಲ್ಲ ದಶಕಗಳ ಹಿಂದಿನದು. ಯಡಿಯೂರಪ್ಪ ಅವರು ಈ ಹಿಂದೆ ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾಗ ರೈತರ ಪ್ರತಿ ಎಕರೆ ಕೃಷಿ ಭೂಮಿಗೆ ಕೆಎಐಡಿಬಿ ಮೂಲಕ ಐದು ಲಕ್ಷ ರೂ. ಪರಿಹಾರದ ಹಣವನ್ನು ನೀಡಿದ್ದರಲ್ಲದೆ, ಭೂಮಿಯನ್ನು ಕಳೆದುಕೊಂಡಿರುವ ರೈತರ ಮಕ್ಕಳಿಗೆ ಕಂಪನಿಯಲ್ಲಿ ಉದ್ಯೋಗವನ್ನು ದೊರಕಿಸಿಕೊಡುವ ಭರವಸೆ ನೀಡಿದ್ದರು. ಅದರಂತೆ ಸುಮಾರು ಮುನ್ನೂರು ಎಕರೆ ಭೂಮಿಯನ್ನು ವಶಪಡಿಸಿಕೊಂಡು ಉದ್ಯಮಿ ಜಯದೇವ ಅವರ ಮಾಲೀಕತ್ವದ ಫೇವರಿಚ್ ಇನ್ಪ್ರಾ ಮೆಗಾ ಫುಡ್ಪಾರ್ಕ್ ಲಿ. ಕಂಪನಿಗೆ ಹಸ್ತಾಂತರ ಮಾಡಿದ್ದರು.
ರೈತರ ಬಾಳು ಬಂಗಾರವಾಗುವ ಕನಸು
ಇದರ ಕಾಮಗಾರಿಯು ಕಳೆದ 10 ವರ್ಷಗಳಿಂದಲೂ ನಡೆಯುತ್ತಾ ಬರುತ್ತಿತ್ತಾದರೂ ವಿವಾದ ಏರ್ಪಟ್ಟು ಮಂದಗತಿಯಲ್ಲಿ ಸಾಗಿತ್ತು. ಆದರೆ ಕಳೆದ ಎರಡು ವರ್ಷಗಳಿಂದೀಚೆಗೆ ರೈತರ ಭೂಮಿಯ ವಿವಾದವನ್ನು ಇತ್ಯರ್ಥಪಡಿಸುವಲ್ಲಿ ಕ್ಷೇತ್ರದ ಶಾಸಕರಾದ ಕೆ.ಸಿ ನಾರಾಯಣಗೌಡರು ಯಶಸ್ವಿಯಾಗಿದ್ದು, ಇದೀಗ ಬಣ್ಣೆನಹಳ್ಳಿಯ ಬಳಿ ಆಹಾರ ಸಂಸ್ಕರಣಾ ಘಟಕದ ನಿರ್ಮಾಣಕ್ಕಾಗಿ ವಶಪಡಿಸಿಕೊಂಡಿರುವ ಭೂಮಿಯಲ್ಲಿ ನಾಲ್ಕರಿಂದ ಐದು ಬೃಹತ್ ಕೈಗಾರಿಕಾ ಶೆಡ್ಗಳು ನಿರ್ಮಾಣವಾಗುತ್ತಿವೆ.
ಸಣ್ಣ ಉದ್ದಿಮೆಗಳಿಗೆ ಭೂಮಿ ಮರು ಹಂಚಿಕೆ!
ಫೇವರಿಚ್ ಮೆಗಾ ಫುಡ್ ಪಾರ್ಕ್ ಆರಂಭಗೊಂಡಿದ್ದರೆ ರೈತರು ಬೆಳೆದಂತಹ ಹಣ್ಣು, ತರಕಾರಿಗಳು ಹಾಗೂ ಕೃಷಿ ಹುಟ್ಟುವಳಿಗಳನ್ನು ಸಂಸ್ಕರಣೆ ಮಾಡಿ ಕೆಡದಂತೆ ಸಂಸ್ಕರಣೆ ಮಾಡಿ ರಕ್ಷಣೆ ಮಾಡುವುದು ಹಾಗೂ ಇಲ್ಲಿಂದ ಸಂಸ್ಕರಣೆಗೊಂಡ ಆಹಾರ ಪದಾರ್ಥಗಳು ಮತ್ತು ಹಣ್ಣು ತರಕಾರಿಗಳನ್ನು ದೇಶದ ಮಹಾನಗರಗಳಿಗೆ ತಲುಪಿಸಿ ಮಾರಾಟ ಮಾಡುವುದು. ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಒಳ್ಳೆಯ ಬೆಲೆಯನ್ನು ದೊರಕಿಸಿಕೊಡುವ ಮೂಲಕ ರೈತರ ಬದುಕನ್ನು ಹಸನು ಮಾಡಬಹುದಿತ್ತು. ಆದರೆ ಮೆಗಾಫುಡ್ ಪಾರ್ಕ್ ಕಾಮಗಾರಿಯು ಕಳೆದೊಂದು ವರ್ಷದಿಂದ ಸ್ವಲ್ಪ ಮಟ್ಟಿಗೆ ವೇಗವನ್ನು ಪಡೆದುಕೊಳ್ಳುತ್ತಿರುವುದು ಕಂಡು ಬಂದಿದೆ. ಇನ್ನೊಂದೆಡೆ ರಾಜ್ಯ ಸರ್ಕಾರವು ಮೆಗಾ ಫುಡ್ ಪಾರ್ಕ್ ಯೋಜನೆಗೆ ನೀಡಿರುವ ಕೃಷಿಭೂಮಿಯನ್ನು ಎಷ್ಟು ಬೇಕೋ ಅಷ್ಟನ್ನು ಮಾತ್ರ ಬಳಕೆ ಮಾಡಿ ನಂತರ ಉಳಿಯುವ ಭೂಮಿಯನ್ನು ಸರ್ಕಾರವೇ ಮತ್ತೆ ಸಣ್ಣ-ಸಣ್ಣ ಉದ್ದಿಮೆಗಳನ್ನು ಆರಂಭಿಸಲು ಇಚ್ಛೆಪಡುವ ಉದ್ಯಮಶೀಲರು ಹಾಗೂ ಉದ್ದಿಮೆಯನ್ನು ಆರಂಭಿಸಲು ಸಿದ್ಧರಿರುವ ಉದ್ಯಮಿಗಳಿಗೆ ಮರು ಹಂಚಿಕೆ ಮಾಡುವ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ
Recommended Video
ಯೋಜನೆ ಕಾರ್ಯಗತವಾಗುವುದು ಯಾವಾಗ?
ಇದೆಲ್ಲದರ ನಡುವೆ ಫೇವರಿಚ್ ಮೆಗಾ ಫುಡ್ ಪಾರ್ಕ್ ನ ಸಂಸ್ಕರಣಾ ಘಟಕಗಳಿಗೆ ಅತ್ಯಾಧುನಿಕ ತಂತ್ರಜ್ಞಾನದ ಉಪಕರಣಗಳು ಇಸ್ರೇಲ್, ಜಪಾನ್, ಡೆನ್ಮಾರ್ಕ್, ಆಸ್ಟ್ರೇಲಿಯಾ, ನೆದರ್ಲ್ಯಾಂಡ್ ಸೇರಿದಂತೆ ಆಹಾರ ಪದಾರ್ಥಗಳ ಸಂಸ್ಕರಣೆಯಲ್ಲಿ ಹೆಸರು ವಾಸಿಯಾಗಿರುವ ರಾಷ್ಟ್ರಗಳಿಂದ ಬರಲಿವೆ ಎನ್ನಲಾಗುತ್ತಿದ್ದು, ಎಲ್ಲವೂ ಸರಿ ಹೋದರೆ ವರ್ಷಾಂತ್ಯದೊಳಗೆ ಕಾರ್ಯಾರಂಭ ಮಾಡುವ ವಿಶ್ವಾಸ ಜತೆಗೆ ಕನಿಷ್ಠ ಐದು ಸಾವಿರ ಜನರಿಗೆ ಉದ್ಯೋಗ ದೊರೆಯುವ ಭರವಸೆಯೂ ಕೇಳಿ ಬರುತ್ತಿದೆ. ಆದರೆ ಅದು ಯಾವಾಗ ಕಾರ್ಯಗತವಾಗುತ್ತದೆ ಎಂಬುದು ಮಾತ್ರ ಪ್ರಶ್ನೆಯಾಗಿಯೇ ಜನರ ಮುಂದೆ ನಿಂತಿದೆ.