ಕೆಆರ್ ಎಸ್ ಡಿಸ್ನಿಲ್ಯಾಂಡ್ ಮಾದರಿ ಉದ್ಯಾನ: ಆತಂಕ ಬೇಡ ಎಂದ ಎಚ್ಡಿಕೆ
ಮಂಡ್ಯ, ನವೆಂಬರ್ 23: ಕೃಷ್ಣ ರಾಜ ಸಾಗರ (ಕೆಆರ್ ಎಸ್) ಜಲಾಶಯದ ಬಳಿ 1,200 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಡಿಸ್ನಿ ಲ್ಯಾಂಡ್ ಮಾದರಿಯ ಪಾರ್ಕ್ ಯೋಜನೆಯಿಂದ ಜಲಾಶಯಕ್ಕೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ. ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ಈ ಯೋಜನೆಗೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅವರ ಸಮ್ಮುಖದಲ್ಲೇ ಸಭೆ ನಡೆಸುತ್ತೇನೆ. ನಿಮ್ಮ ಬಳಿ ಇರುವ ತಾಂತ್ರಿಕತೆಯ ಕುರಿತು ಅಲ್ಲಿ ಚರ್ಚಿಸೋಣ. ಅವರಿಂದ ಆಗುವ ತೊಂದರೆಗಳ ಬಗ್ಗೆ ಮುಕ್ತವಾಗಿ ಹೇಳಿ ಎಂದು ಕುಮಾರಸ್ವಾಮಿ ಯೋಜನೆ ವಿರೋಧಿಗಳಿಗೆ ತಿಳಿಸಿದರು.
ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಕೆಆರ್ ಎಸ್ ಜಲಾಶಯದ ಸುಮಾರು 400 ಎಕರೆ ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿ ಬೃಹತ್ ಮಟ್ಟದಲ್ಲಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
'ಕೆಆರ್ ಎಸ್ನಲ್ಲಿ ಕಾವೇರಿ ಪ್ರತಿಮೆ ನಿರ್ಮಾಣ ಮಾಡಿದರೆ ಜಲಾಶಯಕ್ಕೆ ಸಂಚಕಾರ'
ಅಮೆರಿಕದ ಡಿಸ್ನಿ ಲ್ಯಾಂಡ್ ಮಾದರಿಯಲ್ಲಿ ಉದ್ಯಾನ ನಿರ್ಮಿಸಲು ಮತ್ತು ಅಲ್ಲಿ ಕಾವೇರಿ ತಾಯಿಯ ಸುಮಾರು 125 ಎತ್ತರದ ಪ್ರತಿಮೆ ಸ್ಥಾಪಿಸಲು ಸರ್ಕಾರ ಉದ್ದೇಶಿಸಿದೆ. ಇದರಿಂದ ಪ್ರವಾಸೋದ್ಯಮ ದೊಡ್ಡ ಮಟ್ಟದಲ್ಲಿ ಬೆಳೆಯಲಿದೆ ಎನ್ನುವುದು ಸರ್ಕಾರದ ಹೇಳಿಕೆ.
ಆದರೆ ಈ ಯೋಜನೆಗೆ ಪರಿಸರವಾದಿಗಳು, ಎಂಜಿನಿಯರ್ಗಳು ಮತ್ತು ತಜ್ಞರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರದ ವಿವಿಧ ಶಾಸಕರು ಮತ್ತು ಸಚಿವರು ಕೂಡ ಈ ಯೋಜನೆ ವೈಜ್ಞಾನಿಕವಾಗಿ ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಮಂಡ್ಯ ಜಿಲ್ಲೆಯ ದುದ್ದ ಗ್ರಾಮದಲ್ಲಿ ಶುಕ್ರವಾರ ಕುಡಿಯುವ ನೀರಿನ ಯೋಜನೆಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಕುಮಾರಸ್ವಾಮಿ, ಕೆಆರ್ ಎಸ್ ನಲ್ಲಿ ಉದ್ಯಾನ ನಿರ್ಮಾಣ ಯೋಜನೆಯ ಬಗ್ಗೆ ಮಾತನಾಡಿದರು.
ಉದ್ಯೋಗ ಸೃಷ್ಟಿ
ಈ ಯೋಜನೆಯಿಂದ ಜಲಾಶಯಕ್ಕೆ ಯಾವುದೇ ಅಪಾಯವಾಗುವುದಿಲ್ಲ. ತಜ್ಞರ ಜತೆ ಅದರ ತೊಂದರೆಗಳ ಕುರಿತು ಚರ್ಚಿಸಿಯೇ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ಜಲಾಶಯಕ್ಕೆ ಹಾನಿಯಾಗುವಂತೆ ಯೋಜನೆ ಮಾಡಲು ನಮಗೆ ಬುದ್ಧಿ ಇಲ್ಲವೇ? ಇದು ಈ ಭಾಗದ ಜನರಿಗೆ ಉದ್ಯೋಗ ನೀಡುವ ಯೋಜನೆ. ಇದರಿಂದ ಸುಮಾರು 50 ಸಾವಿರ ಜನರಿಗೆ ಉದ್ಯೋಗ ಸಿಗಲಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಕೆಆರ್ ಎಸ್ ಡಿಸ್ನಿಲ್ಯಾಂಡ್ ಯೋಜನೆ ಮಾಡಿಯೇ ಸಿದ್ಧ: ಪುಟ್ಟರಾಜು
ಜನರನ್ನು ಮರೆತರೆ ಉದ್ಧಾರವಾಗೊಲ್ಲ
ದುದ್ದ ಹೋಳಿಯ ಜನರನ್ನು ಮರೆತರೆ ನಾವು ಉದ್ಧಾರವಾಗುವುದಿಲ್ಲ. ಕ್ಷೇತ್ರ ಮರುವಿಂಗಡಣೆಯಾದ ಬಳಿಕ ಇಲ್ಲಿನ ಜನ ಸಿಎಸ್ ಪುಟ್ಟರಾಜು ಅವರಿಗೆ ಹೆಚ್ಚಿನ ಶಕ್ತಿ ನೀಡಿದ್ದೀರಿ. 20-20 ಸರ್ಕಾರ ರಚಿಸಿದ್ದ ವೇಳೆ ಇಲ್ಲಿನ ಬೇವುಕಲ್ಲುಕೊಪ್ಪಲಿನಲ್ಲಿ 12 ವರ್ಷಗಳ ಹಿಂದೆ ಗ್ರಾಮವಾಸ್ತವ್ಯ ಮಾಡಿದ್ದೆ.ಆಗ ನೀವು ಕುಡಿಯುವ ನೀರಿಗಾಗಿ ಮನವಿ ಸಲ್ಲಿಸಿದ್ದಿರಿ. ಈಗ ಅದಕ್ಕೆ ಶಂಕು ಸ್ಥಾಪನೆ ನೆರವೇರಿಸಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.
ಕೆಆರ್ ಎಸ್ ಡಿಸ್ನಿಲ್ಯಾಂಡ್ ಯೋಜನೆಗೆ ಮೈತ್ರಿ ಸರ್ಕಾರದಲ್ಲೇ ಭುಗಿಲೆದ್ದ ಅಸಮಾಧಾನ
700 ಕೋಟಿ ವೆಚ್ಚದ ಕಾಮಗಾರಿ
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ದುದ್ದ ಗ್ರಾಮದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಸಣ್ಣ ನೀರಾವರಿ ಇಲಾಖೆಯ 54 ಕೆರೆಕಟ್ಟೆಗಳಿಗೆ ಕುಡಿಯುವ ನೀರು ತುಂಬಿಸುವ ಕಾಮಗಾರಿ ಸೇರಿದಂತೆ ಸುಮಾರು ರೂ 700 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
ಸಣ್ಣ ನೀರಾವರಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಸಂಸದ ಎಲ್.ಆರ್.ಶಿವರಾಮೇಗೌಡ, ವಿಧಾನ ಪರಿಷತ್ ಸದಸ್ಯರಾದ ಶ್ರೀಕಂಠೇಗೌಡ, ಅಪ್ಪಾಜಿ ಗೌಡ ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.
ಪ್ರತಿಮೆ ನಿರ್ಮಾಣಕ್ಕೆ ಸರ್ಕಾರದ ಹಣ ಬಳಕೆಯಿಲ್ಲ: ಡಿಕೆ ಶಿವಕುಮಾರ್ ಸ್ಪಷ್ಟನೆ
ಎಂಜಿನಿಯರ್ಗಳ ವಿರೋಧ
ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಗೆ ಎಂಜಿನಿಯರ್ಗಳು ಮತ್ತು ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಜಲಾಶಯವು ಭೂಕಂಪನ ವಲಯದಲ್ಲಿದೆ. ಜಲಾಶಯಕ್ಕೆ ಅಪಾಯ ಆಗುತ್ತದೆ ಎಂಬ ಉದ್ದೇಶದಿಂದಲೇ 20-25 ಕಿ.ಮೀ. ವ್ಯಾಪ್ತಿಯಲ್ಲಿನ ಎಲ್ಲ ಗಣಿಗಾರಿಕೆಗಳನ್ನು ನಿಲ್ಲಿಸಲಾಗಿದೆ. ಹೀಗಿರುವಾಗ ಜಲಾಶಯದ ಬುಡದಲ್ಲಿಯೇ ಕಾಮಗಾರಿ ನಡೆಸುವುದು ಬಲು ಅಪಾಯಕಾರಿ. ಅಲ್ಲದೆ, ಇದರಿಂದ ಕೃಷಿ ಭೂಮಿಗಳಿಗೂ ತೊಂದರೆ ಉಂಟಾಗಲಿದೆ ಎಂದು ಎಂಜಿನಿಯರ್ಗಳು ಯೋಜನೆಯನ್ನು ವಿರೋಧಿಸಿದ್ದಾರೆ.