ಮಂಡ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮುಸುಕಿನ ಗುದ್ದಾಟ ಬಯಲಿಗೆಳೆದ ಬಂದ್
ಮಂಡ್ಯ, ಸೆಪ್ಟೆಂಬರ್ 10: ರಾಜ್ಯದಲ್ಲಿ ದೋಸ್ತಿ ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಮಂಡ್ಯದಲ್ಲಿ ಮಾತ್ರ ನಾನೊಂದು ತೀರ-ನೀನೊಂದು ತೀರ ಎಂದು ಮುಸುಕಿನ ಗುದ್ದಾಟ ನಡೆಸುತ್ತಿವೆ. ಇದಕ್ಕೆ ಸಾಕ್ಷಿ ನೀಡುತ್ತಿದೆ ಇಂದು ನೀಡಿದ್ದ ಬಂದ್ ಕರೆಗೆ ಮಂಡ್ಯದಲ್ಲಿ ಎರಡೂ ಪಕ್ಷಗಳಿಂದ ಪ್ರತಿಕ್ರಿಯಿಸಿದ ರೀತಿ.
ಕಾಂಗ್ರೆಸ್ ಕರೆ ನೀಡಿದ್ದ ಬಂದ್ಗೆ ಸ್ವತಃ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ಬೆಂಬಲ ನೀಡಿದ್ದರೂ ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲಿ ಜೆಡಿಎಸ್ನ ಘಟಾನುಘಟಿ ನಾಯಕರೇ ಕಾಣಿಸಿಕೊಳ್ಳದಿರುವುದು ಅಚ್ಚರಿ.
ಚಾಮರಾಜನಗರ ಜಿಲ್ಲೆಯಲ್ಲಿ ಬಂದ್ ಗೆ ಸಂಪೂರ್ಣ ಬೆಂಬಲ
ತೈಲ ಹಾಗೂ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿರುವುದನ್ನು ವಿರೋಧಿಸಿ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಸೋಮವಾರ ಕರೆ ನೀಡಿದ್ದ ಭಾರತ್ ಬಂದ್ಗೆ ಮಂಡ್ಯ ಜಿಲ್ಲಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಇದರಲ್ಲಿ ಜೆಡಿಎಸ್ ಸಕ್ರಿಯವಾಗದ ಕಾರಣ ಯಶಸ್ವಿ ಆಗಬಹುದಾಗಿದ್ದ ಬಂದ್, ಮಿಶ್ರವಾಗಿ ಮಾತ್ರವೇ ಉಳಿಯುವಂತಾಯಿತು.
ಮಂಡ್ಯ ನಗರದ ಪೇಟಿ ಬೀದಿ, ಜೈನರ ಬೀದಿ, ವಿ.ವಿ.ರಸ್ತೆ, ಆರ್.ಪಿ. ರಸ್ತೆ, ಗುತ್ತಲು ರಸ್ತೆ, ನೂರಡಿ ರಸ್ತೆ ಸೇರಿದಂತೆ ಎಲ್ಲೆಡೆ ವ್ಯಾಪಾರಿಗಳು ತಮ್ಮ ಅಂಗಡಿ-ಮುಂಗಟ್ಟುಗಳನ್ನು ಎಂದಿನಂತೆ ತೆರೆದು ವ್ಯಾಪಾರ ನಡೆಸುತ್ತಿದ್ದರು. ಕಾಂಗ್ರೆಸ್ ಕಾರ್ಯಕರ್ತರ ಮೆರವಣಿಗೆ ಪೇಟೆ ಬೀದಿ, ಜೈನರ ಬೀದಿ ಸೇರಿದಂತೆ ವಿವಿಧ ರಸ್ತೆಗಳ ಮೂಲಕ ಮೆರವಣಿಗೆ ನಡೆಸಿದ ವೇಳೆ ಅಂಗಡಿ-ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಿದ್ದು ಕಂಡುಬಂತಾದರೂ ತಾವೇ ಸ್ವ ಇಚ್ಛೆಯಿಂದ ಬಂದ್ ಮಾಡಿದ್ದು ಕಂಡು ಬರಲಿಲ್ಲ.
ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ನವರು ಬಾಗಿಲು ಹಾಕಿಸಿದರು, ಬಿಜೆಪಿಯವರು ತೆಗೆಸಿದರು
ನಗರದಲ್ಲಿರುವ ಎಲ್ಲಾ ಸಣ್ಣ ಪುಟ್ಟ ಹೊಟೇಲ್ ಹಾಗೂ ಸಣ್ಣ ಪುಟ್ಟ ಟೀ ಅಂಗಡಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಗ್ರಾಮಾಂತರ ಪ್ರದೇಶದ ಜನತೆ ನಗರದತ್ತ ಬರಲು ಸಾಧ್ಯವಾಗದ ಕಾರಣ ವ್ಯಾಪಾರ ವಹಿವಾಟಿನಲ್ಲಿ ಅಡಚಣೆ ಉಂಟಾಗಿತ್ತು. ಇನ್ನು ನಗರ ನಿವಾಸಿಗಳು ಖಾಸಗಿ ವಾಹನಗಳ ಸಹಾಯದಿಂದ ಸಂಚಾರ ನಡೆಸುತ್ತಿದ್ದು ಕಂಡುಬಂದಿತಾದರೂ ಜೆಡಿಎಸ್ ನಾಯಕರು ಪ್ರತಿಭಟನೆಗೆ ಸಾಥ್ ನೀಡದ್ದು ಕಂಡು ಬಂತು.
ಬೆಂಗಳೂರು ಸೇರಿ ರಾಜ್ಯಾದ್ಯಂತ ಬಂದ್ ಬಹುತೇಕ ಯಶಸ್ವಿ
ಮೈತ್ರಿ ಸರ್ಕಾರವಿರುವ ಕಾರಣ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕಿಯರೊಂದಿಗೆ ಜೆಡಿಎಸ್ನ ನಾಯಕರು ಕಾಣಿಸಿಕೊಳ್ಳಬಹುದೆಂದು ಜನ ನಿರೀಕ್ಷೆ ಮಾಡಿದ್ದರು. ಆದರೆ ಯಾವುದೇ ನಾಯಕರ ಸುಳಿವಿರಲಿಲ್ಲ. ಮಂಡ್ಯ ಜಿಲ್ಲೆಯ ಸಚಿವದ್ವಯರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ ಹಾಗೂ ಶಾಸಕರು ಪ್ರತಿಭಟನೆಯಲ್ಲಿ ಭಾಗವಹಿಸಲಿಲ್ಲ. ಜತೆಗೆ ಕಾರ್ಯಕರ್ತರೂ ಸಹ ಕಾಣಿಸದೆ ಇದ್ದದ್ದು ಹಲವು ಸಂಶಯಗಳನ್ನು ಹುಟ್ಟು ಹಾಕಿತು.