ಸಿ.ಪಿ.ಯೋಗೇಶ್ವರ್ ಬಿಜೆಪಿ ಸೇರ್ಪಡೆಗೆ ನಾಯಕರಲ್ಲಿ ಇಲ್ಲ ಒಮ್ಮತ
ಮಂಡ್ಯ, ಡಿಸೆಂಬರ್ 15: ಶಾಸಕ ಸಿ.ಪಿ.ಯೋಗೇಶ್ವರ್ ಮತ್ತೆ ಬಿಜೆಪಿಗೆ ಆಗಮಿಸುತ್ತಿರುವುದು ಬಿಜೆಪಿಯ ಕೆಲವು ನಾಯಕರಿಗೆ ಇಷ್ಟವಿಲ್ಲ ಎಂಬ ಗುಸುಗುಸು ಸುದ್ದಿ ಹೊಸತೇನಲ್ಲ. ಚನ್ನಪಟ್ಟಣದಿಂದ ಮಂಡ್ಯದತ್ತ ವಾಲಿರುವ ಯೋಗೇಶ್ವರ್ ಇಲ್ಲಿ ಸಂಘಟನೆ ಮಾಡುವುದಾಗಿ ಫೋಸ್ ನೀಡುತ್ತಿರುವುದು ಅವರದ್ದೇ ಪಕ್ಷದ ನಾಯಕರಿಗೆ ಸುತರಾಂ ಇಷ್ಟವಿಲ್ಲ.
'ನಾನು ಬಿಜೆಪಿ ಸೇರಿದ ದಿನದಿಂದ ಕಾಂಗ್ರೆಸ್ಸಿನಿಂದ ಕಿರುಕುಳ ಹೆಚ್ಚಾಗಿದೆ'
ಈ ಸಂಬಂಧ ಬಿಜೆಪಿ ನಾಯಕಿ ತೇಜಸ್ವಿನಿ ರಮೇಶ್ ಪರೋಕ್ಷವಾಗಿ ತಮ್ಮ ಅಸಮಧಾನ ಹೊರ ಹಾಕಿದ್ದಾರೆ. ಭಾರತೀಯ ಜನತಾ ಪಕ್ಷದ ಕೆರಗೋಡು ಶಕ್ತಿ ಕೇಂದ್ರದ ವತಿಯಿಂದ ತಾಲೂಕಿನ ಉಪ್ಪರಕನಹಳ್ಳಿ ಗೇಟ್ ಬಳಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಬುಧವಾರ ಭಾಗವಹಿಸಿ ಮಾತನಾಡಿದ ಅವರು ತಮಗಿರುವ ಅಸಮಧಾನ ತೆರೆದಿಟ್ಟಿದ್ದಾರೆ.
"ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಸ್ಥಳೀಯ ನಾಯಕರೇ ಶಾಸಕರಾಗಿ ಆಯ್ಕೆಯಾಗಬೇಕು. ನಮ್ಮ ಹುಡುಗರೇ ವಿಧಾನಸೌಧಕ್ಕೆ ಹೋಗಬೇಕು. ದುಡ್ಡಿರುವವರಿಗೆ ಹಾಗೂ ಹೊರಗಿನವರಿಗೆ ಅವಕಾಶ ನೀಡಬಾರದು," ಎಂದು ಕಾರ್ಯಕರ್ತರಿಗೆ ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ಸಿ.ಪಿ ಯೋಗೀಶ್ವರ್ ಆಗಮನಕ್ಕೆ ತೇಜಸ್ವಿನಿ ವಿರೋಧ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಶಾಸಕ ಸ್ಥಾನಕ್ಕೆ ಆಯ್ಕೆಯಾಗಲು ಹಲವಾರು ಮಂದಿ ಸಮರ್ಥರಿದ್ದಾರೆ. ಜಿ. ಮಾದೇಗೌಡರಂತಹ ನಾಯಕರು ಸತತವಾಗಿ ವಿಧಾನಸಭೆ ಹಾಗೂ ಲೋಕಸಭೆಯನ್ನು ಪ್ರವೇಶ ಮಾಡಿದ್ದಾರೆ. ಜಿಲ್ಲೆಯಲ್ಲಿ ಗಟ್ಟಿಯಾದ ನಾಯಕತ್ವವಿರುವುದಕ್ಕೆ ಇವರು ಉದಾಹರಣೆಯಾಗಿದ್ದಾರೆ ಎಂದು ಹೇಳಿದ್ದಾರೆ.
ಹೀಗೆ ಮಾಜಿ ಸಂಸದೆ ತೇಜಸ್ವಿನಿ ರಮೇಶ್ ಅವರ ಮಾತುಗಳು ಸಿ.ಪಿ.ಯೋಗೇಶ್ವರ್ ಕುರಿತಾಗಿಯೇ ಇದ್ದು, ಅವರು ಮತ್ತೆ ಪಕ್ಷಕ್ಕೆ ಬರುತ್ತಿರುವುದು ಬಿಜೆಪಿಯ ಬಹಳಷ್ಟು ನಾಯಕರಿಗೆ ಇಷ್ಟವಿಲ್ಲ ಎನ್ನಲಾಗುತ್ತಿದೆ. ಕೇವಲ ಚುನಾವಣೆ ಸಂದರ್ಭ ಪಕ್ಷಕ್ಕೆ ಸೇರ್ಪಡೆಗೊಳ್ಳುವವರಿಗೆ ಟಿಕೆಟ್ ನೀಡುವುದರಿಂದ ಮೂಲ ಬಿಜೆಪಿ ನಾಯಕರಿಗೆ ಇದರಿಂದ ತೊಂದರೆಯಾಗುತ್ತಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ.