ಬಸವರಾಜ ಬೊಮ್ಮಾಯಿಗಿಲ್ಲ ಕಾವೇರಿಗೆ ಬಾಗಿನ ಅರ್ಪಿಸುವ ಭಾಗ್ಯ?
ಮಂಡ್ಯ, ಅಕ್ಟೋಬರ್ 20; ಈ ಬಾರಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣಲ್ಲಿರುವ ಕೆಆರ್ಎಸ್ ಜಲಾಶಯ ಭರ್ತಿಯಾಗುವುದು ಕಷ್ಟಸಾಧ್ಯವಾಗಿದೆ. ಇದರಿಂದಾಗಿ ನಾಡಿನ ಜೀವನದಿ 'ಕಾವೇರಿ'ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಾಗಿನ ಅರ್ಪಿಸುವ ಭಾಗ್ಯವನ್ನು ಕಳೆದುಕೊಳ್ಳುವಂತಾಗಿದೆ.
ಸಾಮಾನ್ಯವಾಗಿ ರಾಜ್ಯದ ಮುಖ್ಯಮಂತ್ರಿಯಾದವರು ಕೆಆರ್ಎಸ್ ಜಲಾಶಯ ಭರ್ತಿಯಾದಾಗ ಬಾಗಿನ ಅರ್ಪಿಸುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯವಾಗಿದೆ. ಜತೆಗೆ ಇದೊಂದು ಪವಿತ್ರ ಕಾರ್ಯವೆಂಬ ನಂಬಿಕೆಯು ಇದೆ. ಜಲಾಶಯ ಭರ್ತಿಯಾದರೆ ನಾಡು ಸುಭೀಕ್ಷೆಯಾಗಿರುತ್ತದೆ. ನೀರಿನ ಗಲಾಟೆ ಕಡಿಮೆಯಾಗುತ್ತದೆ. ರೈತಾಪಿ ವರ್ಗ ಸೇರಿದಂತೆ ಜನ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ.
ಈ ಬಾರಿ ಅಣೆಕಟ್ಟೆ ಭರ್ತಿಯಾಗುವುದೇ ಅನುಮಾನವಾಗಿರುವುದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಬಾಗಿನ ಅರ್ಪಿಸುವ ಭಾಗ್ಯ ಸಿಗುವುದು ಅನುಮಾನವಾಗಿದೆ. ಕಳೆದ ವರ್ಷ ಆಗಸ್ಟ್ 21ರಂದು ಅಂದಿನ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕೆಆರ್ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದರು.
ಆಗಸ್ಟ್ನಲ್ಲಿಯೇ ಭರ್ತಿಯಾಗುತ್ತಿದ್ದ ಜಲಾಶಯ ಈ ವರ್ಷ ಅಕ್ಟೋಬರ್ ಅಂತ್ಯ ಸಮೀಪಿಸಿದರೂ ಭರ್ತಿಯಾಗಿಲ್ಲ. ಕೊಡಗು, ಹಾಸನ ವ್ಯಾಪ್ತಿಯಲ್ಲಿ ಮಹಾಮಳೆ ಸುರಿಯದಿರುವುದು ಡ್ಯಾಂ ಭರ್ತಿಯಾಗದಿರುವುದಕ್ಕೆ ಕಾರಣವಾಗಿದೆ. ಇನ್ನು ಈ ಬಾರಿ ಬಾಗಿನ ಅರ್ಪಿಸುವ ಭಾಗ್ಯವಿಲ್ಲ ಎಂಬುದು ಗೊತ್ತಾದ ಹಿನ್ನಲೆಯಲ್ಲಿ ಮೈಸೂರು ದಸರಾ ಉದ್ಘಾಟನೆಗೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆಆರ್ಎಸ್ನಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮಳೆಗಾಗಿ ಪ್ರಾರ್ಥನೆ ಮಾಡಿದ್ದರು.
ಮಳೆ ಬಂದರೂ ಭರ್ತಿಯಾಗಲ್ಲ ಜಲಾಶಯ
ಮುಖ್ಯಮಂತ್ರಿಗಳ ಪ್ರಾರ್ಥನೆ ವರುಣನಿಗೆ ತಲುಪಿತ್ತೋ ಏನೋ ಆ ನಂತರ ಭಾರೀ ಮಳೆ ಸುರಿದಿದ್ದಂತು ಸತ್ಯ. ಆದರೆ ಇನ್ನು ಎಷ್ಟೇ ಮಳೆ ಬಂದರೂ ಜಲಾಶಯ ಭರ್ತಿಯಾಗುವಷ್ಟು ನೀರು ಹರಿದು ಬರುವುದು ಕಷ್ಟವೇ ಹಾಗಾಗಿ ಈ ಬಾರಿ ಜಲಾಶಯ ಭರ್ತಿಯಾಗುವುದು ಅನುಮಾನ ಎಂದರೆ ತಪ್ಪಾಗಲಾರದು. ಕೊಡಗಿನಲ್ಲಿ ತುಲಾ ಸಂಕ್ರಮಣದ ನಂತರ ಕೊಡಗಿನಲ್ಲಿ ಮಳೆ ಕಡಿಮೆಯಾಗುತ್ತದೆ. ವಾತಾವರಣದ ಏರುಪೇರಿನಿಂದ ಮಳೆ ಸುರಿದರೂ ಜಲಾಶಯ ಭರ್ತಿಯಾಗುವ ಮಟ್ಟಿಗೆ ನೀರು ಹರಿದು ಬರಲಾರದು. ಮುಂದುವರೆದು ಮಳೆ ಬಂದರೂ ಕೊಡಗಿನ ರೈತರಿಗೆ ಅದರಿಂದ ನಷ್ಟವೇ ಹೆಚ್ಚಾಗಲಿದೆ.
113 ಅಡಿಗೆ ಕುಸಿದಿದ್ದ ಜಲಾಶಯ
124.80 ಅಡಿ ಎತ್ತರದ ಕೆಆರ್ಎಸ್ ಜಲಾಶಯ ಈ ಹಿಂದೆಯೇ ಭರ್ತಿಯಾಗುವ ಅವಕಾಶ ಇದ್ದರೂ ತಮಿಳುನಾಡಿಗೆ ನಿತ್ಯ 10 ಸಾವಿರ ಕ್ಯೂಸೆಕ್ ನೀರು ಹರಿಸಿದ ಪರಿಣಾಮ 122 ಅಡಿಯವರೆಗೂ ಭರ್ತಿಯಾಗಿದ್ದ ಜಲಾಶಯದಲ್ಲಿ ಇನ್ನೂ ಎರಡು ಅಡಿ ನೀರು ಏರಿಕೆಯಾಗದೆ 113 ಅಡಿಗೆ ಕುಸಿದಿತ್ತು.
ಹಾಗೆ ನೋಡಿದರೆ ಜಲಾಶಯದಿಂದ ನೀರು ಹರಿಸದೆ ಹೋಗಿದ್ದಿದ್ದರೆ ಜಲಾಶಯ ಇಷ್ಟರಲ್ಲೇ ಭರ್ತಿಯಾಗಿ ಬಿಡುತ್ತಿತ್ತು. ಕಳೆದ ಒಂದೆರಡು ವಾರದ ಹಿಂದೆಯೇ ಗರಿಷ್ಠ ಮಟ್ಟ 124.80 ಹೊಂದಿರುವ ಜಲಾಶಯದಲ್ಲಿ ನೀರಿನ ಪ್ರಮಾಣ 122 ಅಡಿಯಷ್ಟು ತಲುಪಿತ್ತು. ಅಣೆಕಟ್ಟೆಗೆ 10 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದರೂ ಸಹ ತಮಿಳುನಾಡಿಗೆ ನೀರು ಹರಿಸಿದ್ದರಿಂದ ಅಣೆಕಟ್ಟೆ ಭರ್ತಿಯಾಗಲು ಸಾಧ್ಯವಾಗಿರಲಿಲ್ಲ.
ಮಂಡ್ಯ ಜನರಲ್ಲಿ ಹರ್ಷ
ಈ ನಡುವೆ ಕಳೆದ ಕೆಲ ವಾರದ ಹಿಂದೆ 113 ಅಡಿಗೆ ನೀರಿನ ಸಂಗ್ರಹ ಕುಸಿದಿದ್ದರಿಂದ ಜಿಲ್ಲೆಯ ರೈತರಲ್ಲಿ ಆತಂಕವನ್ನು ಸೃಷ್ಟಿಸಿತ್ತು. ಇತ್ತೀಚೆಗೆ ಕಾವೇರಿ ಕಣಿವೆಯಲ್ಲಿ ಸಾಧಾರಣವಾಗಿ ಮಳೆ ಬೀಳುತ್ತಿದ್ದು, ಪ್ರತಿನಿತ್ಯ ಎಂಟತ್ತು ಸಾವಿರ ಕ್ಯೂಸೆಕ್ಸ್ ನೀರು ಹರಿದುಬರುತ್ತಿದ್ದು, ಜಲಾಶಯದ ಮಟ್ಟ 120 ಅಡಿ ತಲುಪಿದ್ದು, ಸದ್ಯ ಈಗ ಜಿಲ್ಲೆಯ ಜನರಲ್ಲಿ ಹರ್ಷವನ್ನುಂಟು ಮಾಡಿದೆ.
ಮಂಡ್ಯ ಜಿಲ್ಲೆಯಲ್ಲಿ ಕೃಷಿಗೆ ಮತ್ತು ಮೈಸೂರು, ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡಲು ಕೆಆರ್ಎಸ್ ಜಲಾಶಯದ ನೀರು ಆಧಾರ. ಕಾವೇರಿ ನ್ಯಾಯಾಧೀಕರಣದ ಅಂತಿಮ ತೀರ್ಪಿನಂತೆ ಕರ್ನಾಟಕ ತಮಿಳುನಾಡಿಗೆ ಕೆಆರ್ಎಸ್ ಮೂಲಕೇ ನೀರನ್ನು ಹರಿಸಬೇಕಾಗಿದೆ.
ಸೆಪ್ಟೆಂಬರ್ನಲ್ಲಿ ತುಂಬುತ್ತಿತ್ತು
ಸಾಮಾನ್ಯವಾಗಿ ಕೆಆರ್ಎಸ್ ಜಲಾಶಯದ ನೀರಿನ ಮಟ್ಟವೂ ಜೂನ್ ಅಥವಾ ಜುಲೈನಲ್ಲಿ 100 ಅಡಿಗಳಿಗೆ ತಲುಪುತ್ತಿತ್ತು. ಕೆಲವೊಮ್ಮೆ ತಡವಾಗಿ ಆಗಸ್ಟ್, ಸೆಪ್ಟಂಬರ್, ಅಕ್ಟೋಬರ್ ತಿಂಗಳಲ್ಲಿ ನೂರಡಿ ತಲುಪಿದ ನಿದರ್ಶನಗಳಿವೆ.
ಕಳೆದ ಒಂದು ವಾರದಿಂದ ಮಳೆ ಬೀಳುತ್ತಿರುವುದರಿಂದ ನಾಲೆಗಳಿಗೆ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ. ಇದೆಲ್ಲವನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ನೀರಿನ ಪ್ರಮಾಣ ಹೆಚ್ಚಾಗಬಹುದೇನೋ ಕಾದು ನೋಡಬೇಕಾಗಿದೆ.