ಚಪ್ಪಲಿ ಹಾಕಿಯೇ ದೇಗುಲಕ್ಕೆ ಹೋದರೆ ನಿತ್ಯಾನಂದ ಬೆಂಬಲಿಗರು?
ಬಿಡದಿಯಲ್ಲಿ ಧ್ಯಾನಪೀಠ ಹೆಸರಿನ ಆಶ್ರಮ ಹೊಂದಿರುವ ನಿತ್ಯಾನಂದ ಮೇಲುಕೋಟೆಗೆ ಬುಧವಾರ ಭೇಟಿ ನೀಡಿದ್ದರು. ಗಡ್ಡಧಾರಿಯಾಗಿದ್ದ ಅವರನ್ನು ತಕ್ಷಣಕ್ಕೆ ಗುರುತಿಸುವುದು ಕಷ್ಟವಾಗಿತ್ತು.
ಮಂಡ್ಯ, ಡಿಸೆಂಬರ್ 1: ಬಿಡದಿಯ ನಿತ್ಯಾನಂದ ಸ್ವಾಮಿ ಮೇಲುಕೋಟೆಯ ದೇವಾಲಯಕ್ಕೆ ಭೇಟಿ ನೀಡಿದ್ದರು. ಆ ಬಳಿಕ ಸಂಸ್ಕೃತ ಸಂಶೋಧನಾ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದನ್ನು ಚಿತ್ರೀಕರಿಸಲು ಹೋದ ಮಾಧ್ಯಮದವರನ್ನು ಅವರ ಆಪ್ತರು ತಡೆದ ಘಟನೆ ಬುಧವಾರ ನಡೆಯಿತು.
ಬಿಡದಿಯಲ್ಲಿ ಧ್ಯಾನಪೀಠ ಹೆಸರಿನ ಆಶ್ರಮ ಹೊಂದಿರುವ ನಿತ್ಯಾನಂದ ಮೇಲುಕೋಟೆಗೆ ಬುಧವಾರ ಭೇಟಿ ನೀಡಿದ್ದರು. ಗಡ್ಡಧಾರಿಯಾಗಿದ್ದ ಅವರನ್ನು ತಕ್ಷಣಕ್ಕೆ ಗುರುತಿಸುವುದು ಕಷ್ಟವಾಗಿತ್ತು. ನಿತ್ಯಾನಂದ ಭೇಟಿ ಭಕ್ತರಿಗೆ ಆಕ್ರೋಶವನ್ನುಂಟು ಮಾಡಿತ್ತು. ಕೆಲವು ಭಕ್ತರು ಹೇಳುವ ಪ್ರಕಾರ, ನಿತ್ಯಾನಂದ ಬೆಂಬಲಿಗರು ಪಾದರಕ್ಷೆ ಧರಿಸಿ ದೇಗುಲ ಪ್ರವೇಶಕ್ಕೆ ಯತ್ನಿಸಿದ್ದರು.[ನಿತ್ಯಾನಂದ ರಾಸಲೀಲೆ ಪ್ರಕರಣ, ದಾಖಲೆ ನೀಡಲು ಆದೇಶ]
ಇದಕ್ಕೆ ತೀವ್ರ ಆಕ್ರೋಶ ಮತ್ತು ಆಕ್ಷೇಪ ವ್ಯಕ್ತಪಡಿಸಿದಾಗ ಪಾದರಕ್ಷೆಗಳನ್ನು ತೋಳ ಚೀಲದಲ್ಲಿರಿಸಿಕೊಂಡೇ ಒಳ ಪ್ರವೇಶಿಸಿದರು. ನಿಯಮಗಳ ಪ್ರಕಾರ ಮಧ್ಯಾಹ್ನ 1 ಗಂಟೆಗೆ ದೇಗುಲದ ಬಾಗಿಲು ಹಾಕಬೇಕು. ಆದರೆ ನಿತ್ಯಾನಂದ ಅವರಿಗೋಸ್ಕರ ಸಮಯ ನಿರ್ಬಂಧವನ್ನು ಸಡಿಲಿಸಿ, 1.45ರ ವರೆಗೂ ಪೂಜೆ ನಡೆಸಲಾಯಿತು ಎಂಬ ಆರೋಪವೂ ಕೇಳಿ ಬಂದಿದೆ.[ನಿತ್ಯಾನಂದ ಸ್ವಾಮಿಯ ವರದಿಯಲ್ಲೇನಿದೆ?]
ನಿತ್ಯಾನಂದ ದೇವಾಲಯಕ್ಕೆ ಆಗಮಿಸಿದ ವಿಷಯ ತಿಳಿಯುತ್ತಿದ್ದಂತೆಯೇ ಮಾಧ್ಯಮದವರು ಆಗಮಿಸಿದ್ದು, ಅವರ ಕಣ್ತಪ್ಪಿಸಿ ದೇವರ ದರ್ಶನ ಪಡೆಯಲು ನಿತ್ಯಾನಂದ ಪ್ರಯತ್ನಿಸಿದರಾದರೂ ಸಾಧ್ಯವಾಗಲಿಲ್ಲ. ಮಧ್ಯಾಹ್ನ 1 ಗಂಟೆಗೆ ನೇರವಾಗಿ ದೇವಾಲಯಕ್ಕೆ ಆಗಮಿಸಿ ಚೆಲುವನಾರಾಯಣಸ್ವಾಮಿ, ಯದುಗಿರಿನಾಯಕಿ ಹಾಗೂ ರಾಮಾನುಜರ ದರ್ಶನ ಪಡೆದರು.
ನಿತ್ಯಾನಂದ ಅವರಿಗೆ ಅತಿ ಗಣ್ಯ ವ್ಯಕ್ತಿಗಳಂತೆ ದೇವರದರ್ಶನ ದೊರೆಯುವ ಜೊತೆಗೆ ಭಾರಿ ಗಾತ್ರದ ಹೂವಿನ ಹಾರ ಹಾಕಿ ಗೌರವಿಸಲಾಯಿತು. ನಿತ್ಯಾನಂದನ ಭೇಟಿಯ ಹಿನ್ನೆಲೆಯಲ್ಲಿ ದೇವಾಲಯದ ಆವರಣವನ್ನು ತಳಿರು-ತೋರಣಗಳಿಂದ ಸಿಂಗಾರ ಮಾಡಲಾಗಿತ್ತು. ದೇವಾಲಯದ ಎಡಭಾಗದ ಕೈಸಾಲೆಯಲ್ಲಿ ದೊಡ್ಡ ಸಿಂಹಾಸನ ಮತ್ತು ಮೈಕ್ ಅಳವಡಿಸಿ ಪ್ರವಚನಕ್ಕೆ ಸಹ ಸಿದ್ಧತೆ ಮಾಡಲಾಗಿತ್ತು.[ಬೆಂಗಳೂರಲ್ಲಿ ದೇವಾಲಯ ಕಟ್ತಾರೆ ನಿತ್ಯಾನಂದ ಸ್ವಾಮಿ!]
ಆದರೆ, ಪ್ರವಚನ ನಡೆಯಲಿಲ್ಲ. ದೇವರ ದರ್ಶನ ಪಡೆದ ನಂತರ ನೇರವಾಗಿ ಸಂಸ್ಕೃತ ಸಂಶೋಧನಾ ಸಂಸ್ಥೆಗೆ ಹೋದ ನಿತ್ಯಾನಂದ, ಅಲ್ಲಿ ಭೋಜನ ಸ್ವೀಕರಿಸಿ ಆ ನಂತರ ಬಿಡದಿಯತ್ತ ಪ್ರಯಾಣ ಬೆಳೆಸಿದರು. ನಿತ್ಯಾನಂದ ಸ್ವಾಮಿ ಮೇಲುಕೋಟೆಗೆ ಆಗಮಿಸಿ ದೇವರ ದರ್ಶನ ಪಡೆದು, ಹಿಂತಿರುಗಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.