ಮಂಡ್ಯ ಲೋಕಸಭಾ ಕ್ಷೇತ್ರದತ್ತ ನಿಖಿಲ್ ಕುಮಾರಸ್ವಾಮಿ ಕಣ್ಣಿಟ್ಟಿದ್ದಾರಾ?
Recommended Video
ಮಂಡ್ಯ, ಅಕ್ಟೋಬರ್.07: ಮಂಡ್ಯ ಲೋಕಸಭೆ ಉಪಚುನಾವಣೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆಯೇ ರಾಜಕೀಯ ಚಟುವಟಿಕೆ ಗರಿಗೆದರಿದೆ. ಅದರಲ್ಲೂ ಜೆಡಿಎಸ್ ಪಕ್ಷದಿಂದ ಹಲವರು ಕಣಕ್ಕಿಳಿಯಲು ತುದಿಗಾಲಲ್ಲಿ ನಿಂತಿರುವುದು ಕಂಡು ಬರುತ್ತಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರ್ಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.
ಇದೀಗ ಜಿಲ್ಲೆಯ ಕೆಲವು ಮುಖಂಡರು ನಿಖಿಲ್ ಕುಮಾರಸ್ವಾಮಿ ಅವರೇ ಕಣಕ್ಕಿಳಿಯಲಿ ಎಂಬ ಹೇಳಿಕೆ ನೀಡುತ್ತಿರುವುದು ಕುತೂಹಲವನ್ನು ಹುಟ್ಟು ಹಾಕಿದೆ. ಕೇವಲ ನಾಲ್ಕೈದು ತಿಂಗಳಿಗೋಸ್ಕರ ಚುನಾವಣೆಯಲ್ಲಿ ಸ್ಪರ್ಧಿಸಬೇಕಾ ಎಂಬ ಮಾತುಗಳ ನಡುವೆಯೂ ಜೆಡಿಎಸ್ ನಿಂದ ಸ್ಪರ್ಧೆಗೆ ಹಲವು ಆಕಾಂಕ್ಷಿಗಳು ಒಲವು ತೋರುತ್ತಿದ್ದಾರೆ ಎನ್ನಲಾಗುತ್ತಿದೆ.
ಮಂಡ್ಯದಿಂದ ಸ್ಪರ್ಧಿಸುವ ಕುರಿತು ಮೌನ ಮುರಿದ ನಿಖಿಲ್ ಕುಮಾರಸ್ವಾಮಿ
ಇನ್ನು ಕಾಂಗ್ರೆಸ್ ಸಾಥ್ ನೀಡಲಿರುವುದರಿಂದ ಸದ್ಯ ಜೆಡಿಎಸ್ ಅಭ್ಯರ್ಥಿಗಳಷ್ಟೆ ಕಣಕ್ಕಿಳಿಯಲು ಸಾಧ್ಯ. ನಿಖಲ್ ಕುಮಾರಸ್ವಾಮಿ ಅವರು ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷೆಯನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ. ಆದರೆ ಕೆಲವೇ ತಿಂಗಳಿಗಾಗಿ ನಡೆಯುವ ಚುನಾವಣೆಗೆ ಸ್ಪರ್ಧಿಸಲು ದೇವೇಗೌಡರು ಒಪ್ಪುತ್ತಾರಾ? ಎಂಬುದು ಕುತೂಹಲಕಾರಿಯಾಗಿದೆ. ಮುಂದೆ ಓದಿ...
ರಾಜಕೀಯಕ್ಕೆ ಬರಬೇಕೆಂಬ ಆಸೆ
ನಿಖಿಲ್ ಕುಮಾರಸ್ವಾಮಿ ಅವರಿಗೆ ರಾಜಕೀಯಕ್ಕೆ ಬರಬೇಕೆಂಬ ಆಸೆ ಗರಿಗೆದರಿದೆ. ಹೀಗಾಗಿ ಅವರು ಬಹುಶಃ ತಮ್ಮ ಪಯಣವನ್ನು ಮಂಡ್ಯದಿಂದಲೇ ಆರಂಭಿಸಿದರೂ ಅದಕ್ಕೆ ಹಸಿರು ನಿಶಾನೆ ಸಿಗುತ್ತಾ ಎಂಬುದು ಗೊತ್ತಾಗಬೇಕಿದೆ.
ಈಗಾಗಲೇ ಮಂಡ್ಯದಲ್ಲಿ ಕಾಣಿಸಿಕೊಳ್ಳುತ್ತಿರುವ ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ಗೆಳೆಯರ ಮೂಲಕ ಅದನ್ನು ಹೇಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮಂಡ್ಯಕ್ಕೆ ಭೇಟಿ ನೀಡಿದ ವೇಳೆ ಅವರು ನೀಡಿರುವ ಹೇಳಿಕೆಗಳು ರಾಜಕೀಯಕ್ಕೆ ಸಕ್ರಿಯವಾಗಿ ಧುಮುಕುತ್ತಾರೆ ಎಂಬುದನ್ನು ಸ್ಪಷ್ಟಪಡಿಸಿದಂತಿದೆ.
ಕಾರ್ಯಕರ್ತರ ಒತ್ತಡ
ನಿಖಿಲ್ ಕುಮಾರಸ್ವಾಮಿ ಹೇಳಿದ ಮಾತುಗಳಲ್ಲೇ ಹೇಳುವುದಾದರೆ ಅದು ಹೀಗಿದೆ.. "ಈಗಾಗಲೇ ನಾನು ಕಳೆದ ಚುನಾವಣೆಯಿಂದಲೂ ಸಕ್ರಿಯವಾಗಿದ್ದೇನೆ. ಲೋಕಸಭಾ ಚುನಾವಣೆಗೆ ಮಂಡ್ಯದಿಂದ ಸ್ಪರ್ಧಿಸಲು ಕಾರ್ಯಕರ್ತರ ಒತ್ತಡವಿದೆ.
ನಮ್ಮ ಪಕ್ಷದ ವರಿಷ್ಠರು ಯಾವ ನಿರ್ಧಾರ ಕೈಗೊಳ್ಳುತ್ತಾರೋ ನಾನು ಅದಕ್ಕೆ ಬದ್ಧನಾಗಿರುತ್ತೇನೆ. ರಾಜಕೀಯಕ್ಕೆ ಬಂದನೆಂದು ಚಿತ್ರರಂಗದಿಂದ ದೂರ ಸರಿಯುವುದಿಲ್ಲ. ರಾಜಕೀಯ ಮತ್ತು ಚಿತ್ರರಂಗ ಎರಡರಲ್ಲೂ ನನ್ನನ್ನು ನಾನು ತೊಡಗಿಸಿಕೊಳ್ಳುತ್ತೇನೆ. ನನಗೆ ನನ್ನದೇ ಆದಂತಹ ಜವಾಬ್ದಾರಿಗಳಿವೆ. ಅದನ್ನು ನಿಭಾಯಿಸಿಕೊಂಡು ಹೋಗುತ್ತೇನೆ" ಎಂದು ತಿಳಿಸಿದ್ದಾರೆ.
ನಿಖಿಲ್ ಕುಮಾರಸ್ವಾಮಿ v/s ಪ್ರಜ್ವಲ್ ರೇವಣ್ಣ, ಸಹೋದರರ ರಾಜಕೀಯ ಫೈಟ್ ಶುರು
ಮಂಡ್ಯ ಜನರ ಬಗ್ಗೆ ಗೌರವವಿದೆ
"ಮಂಡ್ಯ ಜಿಲ್ಲೆಯ ಜನರ ಬಗ್ಗೆ ನನಗೆ ಗೌರವವಿದೆ. ಜಿಲ್ಲೆಯ ಜನರು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ7 ಕ್ಷೇತ್ರಗಳನ್ನು ಗೆಲ್ಲಿಸಿ ನಮ್ಮ ತಂದೆ ಮುಖ್ಯಮಂತ್ರಿಯಾಗಲು ಸಹಕಾರ ನೀಡಿದ್ದಾರೆ. ಇದನ್ನು ನಾನು ಕೊನೆಯ ಉಸಿರಿರುವವರೆಗೂ ಮರೆಯುವುದಿಲ್ಲ. ಜಿಲ್ಲೆಯ ಜನರ ಹಿತಕ್ಕಾಗಿ ಸದಾ ಶ್ರಮಿಸುತ್ತೇನೆ" ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ಇದೆಲ್ಲವನ್ನು ನೋಡಿದ ಮೇಲೆ ನಿಖಿಲ್ ಕುಮಾರಸ್ವಾಮಿ ಅವರು ಕೂಡ ಕಣ್ಣಿಟ್ಟಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಲೋಕಸಭೆ ಚುನಾವಣೆಗೆ ದೇವೇಗೌಡ ಕುಟುಂಬದಿಂದ ಮೂವರ ಸ್ಪರ್ಧೆ?
ಯಾರನ್ನು ಕಣಕ್ಕಿಳಿಸುತ್ತಾರೆ?
ಮಂಡ್ಯದಲ್ಲಿಯೂ ಇತರೆ ಹಲವರು ಸ್ಪರ್ಧಿಸಲು ತಯಾರಿದ್ದಾರೆ. ಅವರ ಪೈಕಿ ಐಆರ್ಎಸ್ ನಿವೃತ್ತ ಅಧಿಕಾರಿ ಲಕ್ಷ್ಮಿ ಅಶ್ವಿನ್ ಗೌಡ, ಮಾಜಿ ಸಚಿವ ಎಸ್.ಡಿ. ಜಯರಾಂ ಅವರ ಪುತ್ರ ಅಶೋಕ್ ಜಯರಾಂ ಅವರು ಆಕಾಂಕ್ಷಿಗಳಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಕೆಲವು ದಿನಗಳಲ್ಲೇ ಮಂಡ್ಯ ರಾಜಕಾರಣದ ಅದರಲ್ಲೂ ಜೆಡಿಎಸ್ ನಿಂದ ಯಾರು ಸ್ಪರ್ಧಿಸುತ್ತಾರೆ ಎಂಬುದರ ಬಗ್ಗೆ ಗೊತ್ತಾಗಲಿದೆ. ಕೊನೆಗಳಿಗೆಯಲ್ಲಿ ಯಾರನ್ನು ಜೆಡಿಎಸ್ ವರಿಷ್ಠರು ಕಣಕ್ಕಿಳಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.