ಮಂಡ್ಯದಲ್ಲಿ ಜೆಡಿಎಸ್ ಭದ್ರವಾಗಿಸಲು ನಿಖಿಲ್ ರೈತ ತಂತ್ರ!
ಮಂಡ್ಯ, ಜನವರಿ 21: 2019ರ ಲೋಕಸಭಾ ಚುನಾವಣೆ ಬಳಿಕ ಮಂಡ್ಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದ ಜಾತ್ಯತೀತ ಜನತಾದಳದ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಇದೀಗ ಮತ್ತೆ ಮಂಡ್ಯದಲ್ಲಿ ಪಕ್ಷ ಸಂಘಟನೆಗಿಳಿದಿದ್ದಾರೆ.
ರೈತರ ಮನಸೆಳೆದು ಮುಂದಿನ ಚುನಾವಣೆ ವೇಳೆಗೆ ತಮ್ಮ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಬೇಕಾದ ತಂತ್ರವನ್ನು ಹೆಣೆಯುತ್ತಿದ್ದಾರೆ. ಮಂಡ್ಯದಲ್ಲಿ ರಾಜಕೀಯ ನಾಯಕರ ಮತ್ತು ಪಕ್ಷಗಳ ಹಣೆ ಬರಹ ಬರೆಯುವವರು ರೈತರೇ ಎನ್ನುವುದರಲ್ಲಿ ಎರಡು ಮಾತಿಲ್ಲ.
ಮಂಡ್ಯದ ಜನತೆ ನಮ್ಮ ಕೈಬಿಟ್ಟಿಲ್ಲ: ನಿಖಿಲ್ ಕುಮಾರಸ್ವಾಮಿ
ಯಾವುದೇ ಪಕ್ಷವಾಗಲೀ ಮುಖಂಡರಾಗಲಿ ರೈತರನ್ನು ಮರೆತು ಮುನ್ನಡೆಯುವುದು ಕಷ್ಟಸಾಧ್ಯ. ಇತಿಹಾಸದಲ್ಲಿ ರಾಜಕಾರಣಿಗಳು ರೈತರನ್ನು ಬಳಸಿಕೊಂಡು ಬಳಿಕ ಮರೆತದ್ದೇ ಜಾಸ್ತಿ. ಚುನಾವಣೆ ಬಂದಾಗ ಮಾತ್ರ ರೈತರು ನೆನಪಾಗುತ್ತಾರೆ.
ರಾಜಕೀಯಕ್ಕೆ ಬರಲು ಯೋಚಿಸಬೇಕಾಗಿದೆ: ನಿಖಿಲ್ ಕುಮಾರಸ್ವಾಮಿ!
ಚುನಾವಣೆ ವೇಳೆಯಲ್ಲಿ ರೈತರ ಪರವಾಗಿ ನಾಯಕರು ಧ್ವನಿ ಎತ್ತುತ್ತಾರೆ. ಒಂದು ವೇಳೆ ಅಧಿಕಾರ ಹಿಡಿದರೆ ಅಷ್ಟೇ ಬೇಗ ಮರೆತು ಬಿಡುತ್ತಾರೆ. ಆಗ ರೈತರ ಕಲ್ಯಾಣಕ್ಕಾಗಿ ನೀಡಿದ ಯೋಜನೆಗಳು ಭರವಸೆಯಾಗಿಯೇ ಉಳಿದು ಬಿಡುತ್ತದೆ.
ಮಂಡ್ಯ; ಮಳವಳ್ಳಿ ರೈತನ ರೈಸ್ ಮ್ಯೂಸಿಯಂ ಬಗ್ಗೆ ತಿಳಿದಿದೆಯೇ?
ಜೆಡಿಎಸ್ ಎಂದರೆ ರೈತರ ಪಕ್ಷ
ಮೊದಲಿನಿಂದಲೇ ಜೆಡಿಎಸ್ ಎಂದರೆ ರೈತರ ಪಕ್ಷ ಎಂಬ ಸ್ಟಿಕ್ಕರ್ ಅಂಟಿಸಿಕೊಂಡೇ ಬಂದಿದೆ. ಜೆಡಿಎಸ್ನ ಕೈ ಹಿಡಿದು ನಡೆಸುವಲ್ಲಿ ರೈತರ ಪಾತ್ರವಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಜೆಡಿಎಸ್ ಪ್ರಾಬಲ್ಯ ಸಾಧಿಸಲು ರೈತರೇ ಕಾರಣ ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ. ಇದೀಗ ಬದಲಾದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಅಸ್ಥಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ನಾಯಕರು ಹಸಿರು ಶಾಲು ಕೊರಳಿಗೆ ಹಾಕಿಕೊಂಡು ರೈತರ ಪರ ಹೋರಾಟಕ್ಕಿಳಿದಿರುವುದು ಜೆಡಿಎಸ್ಗೆ ಆತಂಕ ತಂದಿದೆ. ಹೀಗಾಗಿ ಜೆಡಿಎಸ್ ರೈತರ ಪರವಾಗಿಯೇ ಇದೆ ಎಂಬುದನ್ನು ತೋರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಮಂಡ್ಯದ ಮೇಲೆ ಕಣ್ಣಿಟ್ಟ ಬಿಜೆಪಿ
ಮಂಡ್ಯದ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಇದುವರೆಗೆ ಇಲ್ಲಿ ಏನೇ ಮಾಡಿದರೂ ಬಿಜೆಪಿ ಆಟ ನಡೆಯಲ್ಲ ಎಂದು ಕುಳಿತಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಕೆ. ಆರ್. ಪೇಟೆಯಲ್ಲಿ ಉಪ ಚುನಾವಣೆಯಲ್ಲಿ ಖಾತೆ ತೆರೆಯುವ ಮೂಲಕ ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ನಾವು ಕೂಡ ಪ್ರಬಲ ಸ್ಪರ್ಧೆ ನೀಡುತ್ತೇವೆ ಎಂಬ ಸಂದೇಶವನ್ನು ಬಿಜೆಪಿ ನಾಯಕರು ನೀಡಿದ್ದಾರೆ. ಜೆಡಿಎಸ್ಗೆ ಮುಂದಿನ ವಿಧಾನಸಭಾ ಚುನಾವಣೆ ಅಷ್ಟೊಂದು ಸಲೀಸಲ್ಲ ಎಂಬುದು ಗೊತ್ತಾಗಿದೆ. ಹೀಗಾಗಿಯೇ ಎಚ್. ಡಿ. ಕುಮಾರಸ್ವಾಮಿ ಅವರಿಗೆ ಪುತ್ರ ನಿಖಿಲ್ ಕುಮಾರ ಸ್ವಾಮಿ ಅವರು ಪಕ್ಷ ಸಂಘಟನೆಯಲ್ಲಿ ಕೈಜೋಡಿಸುತ್ತಿದ್ದಾರೆ.
ನಿಖಿಲ್ ಹುಟ್ಟುಹಬ್ಬಕ್ಕೆ ರೈತರಿಗೆ ಸನ್ಮಾನ
ಜನವರಿ 22ರಂದು ನಿಖಿಲ್ ಕುಮಾರಸ್ವಾಮಿ 33ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಆಚರಣೆಯನ್ನು ಮಂಡ್ಯದಲ್ಲಿಯೇ ನಡೆಸಲು ತೀರ್ಮಾನಿಸಿದ್ದಾರೆ. ನಗರದ ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಮಧ್ಯಾಹ್ನ 2ಗಂಟೆಗೆ ನಡೆಯಲಿರುವ ಹುಟ್ಟು ಹಬ್ಬದ ಆಚರಣೆ ಕಾರ್ಯಕ್ರಮವನ್ನು ಭತ್ತದ ರಾಶಿಗೆ ಪೂಜೆ ಮಾಡುವ ಮೂಲಕ ಆರಂಭಿಸುತ್ತಿರುವುದು ವಿಶೇಷ. 33ನೇ ಹುಟ್ಟು ಹಬ್ಬದ ಹಿನ್ನಲೆಯಲ್ಲಿ 33 ಮಂದಿ ಪ್ರಗತಿಪರ ರೈತರನ್ನು ಸನ್ಮಾನಿಸಿ, ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಇದು ಕಳೆದ ಲೋಕಸಭಾ ಚುನಾವಣೆ ನಂತರ ನಿಖಿಲ್ ಕುಮಾರಸ್ವಾಮಿ ಅವರು ಪಕ್ಷ ಸಂಘಟನೆಯಿಂದ ಹಿಂದಿ ಬಿದ್ದಿದ್ದಾರೆ ಎಂಬ ಆರೋಪಗಳಿಗೆ ಕೊಡುವ ಉತ್ತರವಾಗಿದೆ ಎಂದರೆ ತಪ್ಪಾಗಲಾರದು.
Recommended Video
ಸಂಘಟನೆಗಿಳಿದ ನಿಖಿಲ್ ಕುಮಾರಸ್ವಾಮಿ
ಈಗಾಗಲೇ ಮಂಡ್ಯ ಮತ್ತು ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುವ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸುವ ಉದ್ದೇಶದಿಂದಲೇ ಈಗಾಗಲೇ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಮಂಡ್ಯದಲ್ಲಿ ಜೆಡಿಎಸ್ನ್ನು ಉಳಿಸಿಕೊಳ್ಳಲೇ ಬೇಕಾಗಿರುವುದರಿಂದ ಇಲ್ಲಿಗೆ ಹೆಚ್ಚಿನ ಒತ್ತು ನೀಡಲು ಮುಂದಾಗಿದ್ದಾರೆ ಎನ್ನುವುದು ಗೊತ್ತಿರುವ ವಿಚಾರವೇ.
ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಪಕ್ಷವನ್ನು ಗಟ್ಟಿ ಮಾಡಿಕೊಳ್ಳಬೇಕಾದರೆ ಈಗಿನಿಂದಲೇ ಪ್ರಚಾರ ಆರಂಭಿಸಬೇಕಾಗಿದೆ. ಮೊದಲಿನಿಂದಲೂ ಜೆಡಿಎಸ್ ರೈತಪರ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿದೆ. ಹೀಗಿರುವಾಗ ಬದಲಾದ ಪರಿಸ್ಥಿತಿಯಲ್ಲಿ ಪಕ್ಷದ ಸಂಘಟನೆ ಸುಲಭವಾಗಿ ಉಳಿದಿಲ್ಲ. ಇದನ್ನು ನಿಭಾಯಿಸಿ ನಿಖಿಲ್ ಕುಮಾರಸ್ವಾಮಿ ಅವರು ಪಕ್ಷವನ್ನು ಹೇಗೆ ಕಟ್ಟುತ್ತಾರೆ? ಎಂಬುದು ಕುತೂಹಲ ಕೆರಳಿಸಿದೆ.