ನಿಖಿಲ್ ಬೆಂಬಲಕ್ಕೆ ಜೆಡಿಎಸ್ ಭದ್ರಕೋಟೆ ಮಂಡ್ಯದ ತುಂಬ ಬಲಿಷ್ಠ 'ಸೈನಿಕರು'!
Recommended Video
ಇವತ್ತಿಗೂ ಮಂಡ್ಯದ ಜನಕ್ಕೆ ಅದರಲ್ಲೂ ರೈತಾಪಿ ವರ್ಗಕ್ಕೆ ದೇವೇಗೌಡರ ಕುಟುಂಬದ ಬಗ್ಗೆ ಎಲ್ಲಿಲ್ಲದ ನಂಬಿಕೆ, ವಿಶ್ವಾಸ, ಗೌರವ ಮತ್ತು ನಿಷ್ಠೆ. ಹೀಗಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರನ್ನು ಗೆಲ್ಲಿಸಿ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬೆನ್ನಿಗೆ ನಿಂತರು.
ಬಹುಶಃ ಇದೇ ಧೈರ್ಯದಿಂದಲೇ ದೇವೇಗೌಡರ ಕುಟುಂಬವನ್ನು ಲೋಕಸಭೆಗೆ ಚುನಾವಣೆ ಅಖಾಡಕ್ಕೆ ಧುಮುಕುವಂತೆ ಮಾಡಿದೆ. ಸದ್ಯದ ಬೆಳವಣಿಗೆಯಲ್ಲಿ ಬೇರೆಲ್ಲ ಪಕ್ಷಗಳು ಒಂದಾಗಿ ಸ್ವತಂತ್ರ ಅಭ್ಯರ್ಥಿ ಸುಮಲತಾ ಅವರಿಗೆ ಪರೋಕ್ಷ ಮತ್ತು ಪ್ರತ್ಯಕ್ಷವಾಗಿ ಬೆಂಬಲ ನೀಡುತ್ತಿದ್ದರೆ, ಇತ್ತ ಲೋಕಸಭಾ ಅಭ್ಯರ್ಥಿ ನಿಖಿಲ್ ಕುಮಾರ ಸ್ವಾಮಿ ಬೆಂಬಲಕ್ಕೆ ಇರುವವರು ತಾತ, ಅಪ್ಪ, ದೊಡ್ಡಪ್ಪ ಮತ್ತು ಒಂದಷ್ಟು ಸಚಿವರು, ಶಾಸಕರು ಮಾತ್ರ.
ಸುಮಲತಾ ವರ್ಸಸ್ ನಿಖಿಲ್ ಕುಮಾರಸ್ವಾಮಿ; ಯಾರಿಗುಂಟು ಗ್ರಹ ಬಲ?
ಆದರೆ, ಜೆಡಿಎಸ್ ಕಾರ್ಯಕರ್ತರ ಪಡೆ ನನ್ನೊಂದಿಗೆ ಇದೆ. ಅವರೇ ಪಕ್ಷದ ಸೈನಿಕರಾಗಿ ಕೆಲಸ ಮಾಡಿ ಗೆಲುವು ತಂದು ಕೊಡುತ್ತಾರೆ ಎಂಬ ಧೈರ್ಯವೂ ನಿಖಿಲ್ ಕುಮಾರಸ್ವಾಮಿ ಅವರಲ್ಲಿದೆ. ಸದ್ಯ ದೇವರ ಪ್ರಾರ್ಥನೆ, ಪೂಜೆ- ಪುನಸ್ಕಾರ, ಯಜ್ಞ, ಹೋಮಾದಿಗಳನ್ನು ಮಾಡುತ್ತಾ ಜನರ ಬಳಿಗೆ ತೆರಳುತ್ತಿರುವ ಅವರು ಚುನಾವಣೆಯನ್ನು ಪ್ರತಿಷ್ಠೆಯಾಗಿಯೇ ತೆಗೆದುಕೊಂಡಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ತಳ ಮಟ್ಟದಿಂದ ಜೆಡಿಎಸ್ ಸಂಘಟನೆ ಮಾಡುತ್ತಾ ಬಂದಿದ್ದಾರೆ
ಒಂದು ವೇಳೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಖಂಡಿತಾ ಅದರ ಲಾಭ ಜೆಡಿಎಸ್ ಗೆ ಆಗುತ್ತದೆ. ಆದರೆ ಬಿಜೆಪಿಯು ತಟಸ್ಥ ಧೋರಣೆ ತಳೆದರೆ ಈಗಿನ ಮಟ್ಟಿಗೆ ಸುಮಲತಾ ಅವರಿಗೆ ಲಾಭ ಎಂದು ಹೇಳಲಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಜೆಡಿಎಸ್ ಪಕ್ಷದ ವರಿಷ್ಠರು ಮತ್ತು ಕಾರ್ಯಕರ್ತರು ಮಂಡ್ಯದಲ್ಲಿ ಜೆಡಿಎಸ್ ಅನ್ನು ತಳಮಟ್ಟದಿಂದ ಸಂಘಟನೆ ಮಾಡಿದ್ದಾರೆ. ಅವತ್ತು ಕಾಂಗ್ರೆಸ್ ಅನ್ನು ಟಾರ್ಗೆಟ್ ಮಾಡಿ, ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲೇ ಬೇಕೆಂದು ಹಠಕ್ಕೆ ಬಿದ್ದು, ಕಾಂಗ್ರೆಸ್ನ ಪ್ರಾಬಲ್ಯವನ್ನು ತಗ್ಗಿಸುವಲ್ಲಿ ಯಶಸ್ವಿಯಾಗಿದ್ದರು. ಅದು ಅವರಿಗೆ ಕಳೆದ ವಿಧಾನಸಭೆಯಲ್ಲಿ ಅಭೂತಪೂರ್ವ ಫಲಿತಾಂಶವನ್ನು ತಂದುಕೊಟ್ಟಿತು. ಆದರೆ ಆ ದ್ವೇಷ ಮಾತ್ರ ಇನ್ನೂ ಹೋಗಿಲ್ಲ. ಹಾಗಾಗಿಯೇ ಕಾಂಗ್ರೆಸ್ ನಾಯಕರು ಮಂಡ್ಯದಲ್ಲಿ ಜೆಡಿಎಸ್ ಬೆಂಬಲಿಸಲು ಮುಂದೆ ಬರುತ್ತಿಲ್ಲ.
ಮಂಡ್ಯದಲ್ಲಿ ಮಾಡಿದ ಅಭಿವೃದ್ಧಿ ಕೆಲಸ ನೆರವಿಗೆ ಬರುತ್ತದೆ
ದೇವೇಗೌಡರ ಕುಟುಂಬ ಎಂದರೆ ಅದು ರೈತರಿಗಾಗಿ ತುಡಿಯುವ ಕುಟುಂಬ ಎಂಬ ವಿಚಾರ ರೈತರಲ್ಲಿ ಆಳವಾಗಿ ನೆಲೆಯೂರುವಂತೆ ಜೆಡಿಎಸ್ ಕಾರ್ಯಕರ್ತರು ಮಾಡಿದ್ದಾರೆ. ಈ ಮಧ್ಯೆ ಮಂಡ್ಯದ ಅಭಿವೃದ್ಧಿಗೆ ಕುಮಾರಸ್ವಾಮಿ ಅವರು ಘೋಷಣೆ ಮಾಡಿದ್ದಾರೆ. ಇದು ಸ್ವಲ್ಪ ಮಟ್ಟಿಗೆ ಫ್ಲಸ್ ಪಾಯಿಂಟ್ ಆದರೂ ಅಚ್ಚರಿ ಪಡಬೇಕಾಗಿಲ್ಲ. ಇವತ್ತು ಕಾರ್ಯಕರ್ತರೆಂಬ ಸೈನಿಕರು ಬೆನ್ನಿಗಿರುವುದರಿಂದಲೇ ಮಂಡ್ಯ ಕ್ಷೇತ್ರಕ್ಕೆ ಯಾರೇ ಬಂದರೂ ನನಗೆ ಭಯವಿಲ್ಲ ಎಂಬ ಮಾತನ್ನು ನಿಖಿಲ್ ಕುಮಾರಸ್ವಾಮಿ ಹೇಳುವಂತಾಗಿದೆ. ಕ್ಷೇತ್ರದಲ್ಲಿ ನಾನಾ ಮನಸ್ಥಿತಿಯ ಮತದಾರರು ಇರುತ್ತಾರೆ. ಕೆಲವರು ಒಮ್ಮೆ ಯಾರಿಗೆ ಮತ ಹಾಕಬೇಕೆಂದು ತೀರ್ಮಾನ ಮಾಡಿದರೆ ಮುಗೀತು. ಮತ್ತೆ ಯಾವುದೇ ಕಾರಣಕ್ಕೂ ಅವರು ಅದನ್ನು ಬದಲಿಸಲಾರರು. ಕೆಲವರದು ಪಕ್ಷ ನಿಷ್ಠೆ. ಮತ್ತೆ ಕೆಲವರದು ಜಾತಿ ನಿಷ್ಠೆ. ಆದರೆ ತಳಮಟ್ಟದಲ್ಲಿ ಕೆಲಸ ಮಾಡುವುದು ಪಕ್ಷ ಮತ್ತು ಜಾತಿ ಎಂದರೆ ತಪ್ಪಾಗಲಾರದು. ಅವನು ನಮ್ಮವನು, ನಮ್ಮ ಹುಡುಗ ಗೆಲ್ಲಲಿ ಎಂದು ತೀರ್ಮಾನಿಸಿ ಬಿಟ್ಟರೆ ಮುಗಿಯಿತು ನಿಖಿಲ್ ಕುಮಾರಸ್ವಾಮಿ ಗೆದ್ದಂತೆಯೇ!
ಮತದಾರರಿಂದ ಬೇಕು- ಬೇಡಗಳ ನಿರ್ಧಾರ
ನಾವು ಪ್ರತಿ ಚುನಾವಣೆ ಸಂದರ್ಭವೂ ಹಿಂದಿನ ಮತದಾರರು ಯಾವ ಪಕ್ಷಕ್ಕೆ, ಎಷ್ಟು ಪ್ರಮಾಣದಲ್ಲಿ ಮತ ಹಾಕಿದ್ದಾರೆ? ಅವರ ಜಾತಿ ಏನು? ಅವರ ಜಾತಿ ಅನುಸಾರ ಅವರೆಲ್ಲ ಇಂತಹದ್ದೇ ಪಕ್ಷಕ್ಕೆ ಮತ ಹಾಕಿರಬಹುದು ಎಂಬ ತೀರ್ಮಾನಕ್ಕೆ ಬಂದು ಬಿಡುತ್ತೇವೆ.
ನಾವು ಒಂದು ಕ್ಷಣ ಯೋಚನೆ ಮಾಡಿದರೆ ಪ್ರತಿ ಚುನಾವಣೆಗೂ ಹೊಸ ಮತದಾರರು ಸೇರ್ಪಡೆಯಾಗುತ್ತಲೇ ಇರುತ್ತಾರೆ. ಜತೆಗೆ ಅವರಿಗೆಲ್ಲರಿಗೂ ದೇಶದ ಆಗುಹೋಗುಗಳ ಬಗೆಗೆ, ವರ್ತಮಾನದ ಕಾಲದಲ್ಲಿದ್ದುಕೊಂಡು ಎಲ್ಲವನ್ನು ಅರ್ಥೈಸುವ ಮತ್ತು ಬದಲಾವಣೆಗೆ ತುಡಿಯುವ ಮನಸ್ಸಿದೆ. ಏನು ಮಾಡಿದರೆ ಬದಲಾವಣೆ ತರಬಹುದು ಎಂಬುವುದಾಗಿ ಆಲೋಚಿಸುವ ಶಕ್ತಿಯೂ ಇದೆ. ಹೀಗಿರುವಾಗ ಅಪ್ಪ ನೆಟ್ಟ ಆಲದ ಮರಕ್ಕೆ ನೇಣು ಹಾಕಿಕೊಂಡರೆಂಬಂತೆ ಮತದಾನದ ಅಂಕಿ- ಅಂಶವನ್ನಿಟ್ಟುಕೊಂಡು ಅವರು ಗೆಲ್ಲಬಹುದು, ಇವರು ಗೆಲ್ಲಬಹುದು ಎಂಬ ತೀರ್ಮಾನಕ್ಕೆ ಬಂದು ಬಿಡುತ್ತೇವೆ. ಅದೇ ಕಾರಣಕ್ಕೆ ಮತದಾರ ಪ್ರಬುದ್ಧನಾಗಿದ್ದಾನೆ. ಆತನಿಗೂ ಬೇಕು ಬೇಡಗಳ ಬಗ್ಗೆ ತೀರ್ಮಾನಿಸುವ ಶಕ್ತಿಯಿದೆ ಎಂಬುವುದನ್ನು ಮರೆಯುತ್ತೇವೆ.
ನಟರ ಕಾಲೆಳೆಯುತ್ತಿರುವ ಮಂಡ್ಯ ಮತದಾರರು
ಇವತ್ತು ಇಡೀ ರಾಜ್ಯ ಮಾತ್ರವಲ್ಲ, ದೇಶವನ್ನು ಮಂಡ್ಯ ಲೋಕಸಭಾ ಕ್ಷೇತ್ರ ತನ್ನತ್ತ ಸೆಳೆಯುತ್ತಿದೆ. ಇಲ್ಲಿ ಏನಾಗಬಹುದು ಎಂಬ ಕುತೂಹಲದಿಂದ ಎಲ್ಲರೂ ಕಾಯುತ್ತಿದ್ದಾರೆ. ಇದೀಗ ಸುಮಲತಾ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಘೋಷಣೆ ಮಾಡಿದ ಬಳಿಕ ಜೆಡಿಎಸ್ ಕಾರ್ಯಕರ್ತರು ರೊಚ್ಚಿಗೆದ್ದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸುಮಲತಾ ಅವರ ಬೆನ್ನಿಗೆ ನಿಂತ ನಟರ ವಿರುದ್ಧ ಯುದ್ಧ ಸಾರುವುದಕ್ಕೂ ಶುರು ಮಾಡಿದ್ದಾರೆ. ಯಾರೇ ಬಂದರೂ ನಾವು ಮರುಳಾಗುವುದಿಲ್ಲ. ಪೂರ್ತಿ ಕನ್ನಡ ಇಂಡಸ್ಟ್ರಿ ಬಂದರೂ ಗೆಲ್ಲುವುದೇ ನಿಖಿಲ್. ಕಾವೇರಿ ಗಲಾಟೆ ಹೋರಾಟದ ಸಮಯದಲ್ಲಿ ಮನೆಯಲ್ಲಿ ಮಲಗಿದ್ದ ನಟರನ್ನು ಮಂಡ್ಯ ರಾಜಕೀಯಕ್ಕೆ ಎದ್ದು ಬರುವಂತೆ ಮಾಡಿದ ಎಲ್ಲರಿಗೂ ಧನ್ಯವಾದ ಹೀಗೆ ಸ್ಟೇಟಸ್ ಹಾಕಿ ಕಾಲೆಳೆಯುವುದಲ್ಲದೆ, ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜೆಡಿಎಸ್ ಕಾರ್ಯಕರ್ತರು ಕೂಡ ಅಷ್ಟೇ ಎದುರಾಳಿ ಸುಮಲತಾ ಅವರನ್ನು ಟೀಕಿಸುವ ಭರದಲ್ಲಿ ಹಳಿ ತಪ್ಪಿದರೆ ಅದರ ನೇರ ಪರಿಣಾಮ ಆಗುವುದು ತಮ್ಮ ಪಕ್ಷದ ಅಭ್ಯರ್ಥಿಯ ಮೇಲೆಯೇ ಎಂಬುದನ್ನು ಮರೆಯಬಾರದು. ಮಂಡ್ಯದಲ್ಲಿ ಮಾರ್ಚ್ ಇಪ್ಪತ್ತರಂದು ಸುಮಲತಾ ಅವರು ನಾಮಪತ್ರ ಸಲ್ಲಿಸುತ್ತಾರೆ. ಆ ನಂತರ ಚುನಾವಣಾ ಕಣಕ್ಕೆ ಇನ್ನಷ್ಟು ರಂಗು ಬರಲಿದೆ ಎನ್ನುದಂತೂ ಸತ್ಯ.