ಜೈಲಿಗೆ ಹೋದವರ ಜತೆ ವೇದಿಕೆ ಹಂಚಿಕೊಳ್ಳಲ್ಲ ಎಂದ ನಾರಾಯಣ ಗೌಡ
ಮಂಡ್ಯ, ಮಾರ್ಚ್ 10: ಕೆ.ಆರ್.ಪೇಟೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಹಾರಾಷ್ಟ್ರಕ್ಕೆ ಜೈಕಾರ ಹಾಕಿ ವಿವಾದಕ್ಕೀಡಾಗಿದ್ದ ತೋಟಗಾರಿಕೆ ಮತ್ತು ರೇಷ್ಮೆ ಸಚಿವ ನಾರಾಯಣ ಗೌಡ ಇದೀಗ ಮತ್ತೊಂದು ಅಂಥದ್ದೇ ಹೇಳಿಕೆ ನೀಡಿದ್ದಾರೆ.
"ನಾನು ಜೈಲಿಗೆ ಹೋದವರ ಜೊತೆ ವೇದಿಕೆ ಹಂಚಿಕೊಳ್ಳಲ್ಲ" ಎನ್ನುವ ಮೂಲಕ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ನಾರಾಯಣ ಗೌಡರನ್ನು ಅಭಿನಂದಿಸಲೆಂದು ಕೆ.ಆರ್ ಪೇಟೆ ಮಡಿವಾಳ ಜನಾಂಗದ ತಾಲೂಕು ಅಧ್ಯಕ್ಷ ಸಿದ್ದೇಶ್ ಆಹ್ವಾನಿಸಿದ ಸಂದರ್ಭ ಹೀಗೆ ಹೇಳಿದ್ದಾರೆ ನಾರಾಯಣ ಗೌಡರು.
ಮಹಾರಾಷ್ಟ್ರಕ್ಕೆ ಜೈ ಅಂದ ಕರ್ನಾಟಕದ ಮಂತ್ರಿ: ಭಾರೀ ವಿರೋಧ
ಸಿದ್ದೇಶ್ ಅವರು ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿದ್ದಂತೆ, "ಈ ರೀತಿ ಆಹ್ವಾನ ನೀಡಿ ಸಮುದಾಯದ ಗೌರವ ಕಳೆಯುವ ಹಾಗೆ ಮಾಡಬೇಡಿ. ನನ್ನ ಚೀಫ್ ಗೆಸ್ಟ್ ಆಗಿ ಹಾಕೊಂಡು ಎಲ್ಲರನ್ನೂ ವೇದಿಕೆಗೆ ಹತ್ತಿಸಿದರೆ ಗೌರವ ಇರುತ್ತದಾ? ಕಳ್ಳರು, ಕಾಕರು, ಜೈಲಿಗೆ ಹೋದವರನ್ನು ಕರೆದ್ರೆ ಏನರ್ಥ?" ಎಂದಿದ್ದಾರೆ.
"ನೀನು ಕಾರ್ಯಕ್ರಮ ಮಾಡೋದಾದ್ರೆ ಮಾಡಿಕೋ. ನನ್ನದೇನೂ ಅಭ್ಯಂತರವಿಲ್ಲ. ಸಮುದಾಯ ನನ್ನ ಜೊತೆ ಇದೆ. ಸಮುದಾಯದ ಬಗೆಗೆ ನನಗೆ ಗೌರವ ಇದೆ. ನೀನು ಅಧ್ಯಕ್ಷನಾಗಿದ್ದೀಯಾ, ರಾಜಕೀಯ ಮಾಡುವುದಾದರೆ ಬೇರೆ ವೇದಿಕೆಯಲ್ಲಿ ಮಾಡಿಕೋ. ಬೇರೆ ರೀತಿಯಲ್ಲಿ ಮಾಡು. ಕಳ್ಳರು, ಕಾಕರು ಜೈಲಿಗೆ ಹೋಗಿರುವವರು ನಾನಿರುವ ವೇದಿಕೆಗೆ ಬಂದರೆ ತಪ್ಪಾಗಲ್ವಾ" ಎಂದು ರೇಗಿದ್ದಾರೆ.
ಫೆ.20ರಂದು ಕೆ.ಆರ್.ಪೇಟೆಯಲ್ಲಿ ನಡೆದ ರಾಷ್ಟ್ರೀಯ ಭಾವೈಕ್ಯತಾ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ನಾರಾಯಣ ಗೌಡರು ಮಹಾರಾಷ್ಟ್ರಕ್ಕೆ ಜೈಕಾರ ಹಾಕಿ ಹಲವರ ಟೀಕೆಗೆ ಗುರಿಯಾಗಿದ್ದರು. ನಂತರ ನನ್ನ ರಕ್ತದ ಕಣ ಕಣದಲ್ಲೂ ಕನ್ನಡ ಇದೆ ಎಂದು ಹೇಳಿ ಸಮರ್ಥನೆ ಮಾಡಿಕೊಂಡಿದ್ದರು. ಇದೀಗ ಮತ್ತೊಮ್ಮೆ ಈ ರೀತಿ ಹೇಳಿಕೆ ನೀಡಿದ್ದಾರೆ.