ಡಿಕೆ ಶಿವಕುಮಾರ್ ಬಗ್ಗೆ ಕುಮಾರಸ್ವಾಮಿ ಹೀಗೆ ಹೇಳಿದ್ದು ಸತ್ಯವೇ?
Recommended Video
ಮಂಡ್ಯ, ಸೆಪ್ಟೆಂಬರ್ 16: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ದರೋಡೆ ಮಾಡುವುದಕ್ಕೆ ನಾವು ಹೇಳಿದ್ವಾ ಎಂದು ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ ಎಂದು ಮಾಜಿ ಸಚಿವ ಎನ್ ಚಲುವರಾಯಸ್ವಾಮಿ ಬಾಂಬ್ ಸಿಡಿಸಿದ್ದಾರೆ.
ಮಂಡ್ಯದಲ್ಲಿ ಸೋಮವಾರ ಮಾತನಾಡಿದ ಅವರು, ಪುನಃ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಮತ್ತೆ ಕುಮಾರಸ್ವಾಮಿಯನ್ನು ಮಾತಿನಲ್ಲೇ 'ತಿವಿದ' ಚೆಲುವರಾಯಸ್ವಾಮಿ
'ಮೈಸೂರಿನಲ್ಲಿ ನಡೆದ ಸಭೆಯಲ್ಲಿ ಕುಮಾರಸ್ವಾಮಿ ಅವರು, ಡಿಕೆ ಶಿವಕುಮಾರ್ ಅವರ ಬಂಧನ ವಿರೋಧಿಸಿ ನಡೆದ ಒಕ್ಕಲಿಗರ ಪ್ರತಿಭಟನೆಯಲ್ಲಿ ಭಾಗವಹಿಸಲಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಅವರಿಗೆ ಹೀಗೆ ದರೋಡೆ ಮಾಡಲು ನಾವು ಹೇಳಿದ್ವಾ. ದರೋಡೆ ಮಾಡಿ ಅದನ್ನು ಸಾರ್ವಜನಿಕರಿಗೆ ಹಂಚುತ್ತಾರೆಯೇ? ಇದಕ್ಕೆ ತಾವು ಹೊಣೆಯಾಗಲು ಸಾಧ್ಯವೇ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ. ಇದು ಎಷ್ಟು ನಿಜ ಮತ್ತು ಎಷ್ಟು ಸುಳ್ಳು ಎನ್ನುವುದು ನನಗೆ ಗೊತ್ತಿಲ್ಲ. ಹೀಗೆ ಸತ್ಯ ಗೊತ್ತಿಲ್ಲದೇ ನಾನು ಮಾತನಾಡುವುದು ತಪ್ಪು' ಎಂದು ಚಲುವರಾಯಸ್ವಾಮಿ ಹೇಳಿದರು.
ಡಿಕಶಿಗೆ ಬೆಂಬಲ ನೀಡದ ಎಚ್ಡಿಕೆ
'ಕುಮಾರಸ್ವಾಮಿ ಅವರ ಮುಖ್ಯಮಂತ್ರಿ ಪಟ್ಟವನ್ನು ಉಳಿಸುವ ಸಲುವಾಗಿ ಡಿಕೆ ಶಿವಕುಮಾರ್ ಅವರು ಎಲ್ಲರನ್ನೂ ಎದುರು ಹಾಕಿಕೊಂಡರು. ಆದರೆ ಇಂದು ಡಿಕೆಶಿ ಅವರ ಪರವಾಗಿ ಕುಮಾರಸ್ವಾಮಿ ನಿಂತಿಲ್ಲ. ಕುಮಾರಸ್ವಾಮಿ ಅವರಿಗೆ ಹೀಗೆ ಕಷ್ಟ ಬಂದಿದ್ದರೆ ಡಿಕೆ ಶಿವಕುಮಾರ್ ಅವರು ಸ್ಟೇಷನ್ ಬಳಿ ಹೋಗಿ ಕೂರುತ್ತಿದ್ದರು. ಡಿಕೆ ಶಿವಕುಮಾರ್ ಅವರಿಗೆ ಕುಮಾರಸ್ವಾಮಿ ಮಾನಸಿಕವಾಗಿ ಧೈರ್ಯ ತುಂಬಬಹುದಾಗಿತ್ತು. ಆದರೆ ಅವರ ಪರವಾಗಿ ನಡೆದ ಒಕ್ಕಲಿಗ ಸಂಘಟನೆಗಳ ಹೋರಾಟಕ್ಕೂ ಬೆಂಬಲ ನೀಡಲಿಲ್ಲ. ಅದೇ ದಿನ ಚನ್ನಪಟ್ಟಣದಲ್ಲಿ ಕಾರ್ಯಕ್ರಮ ಹಾಕಿಕೊಂಡರು. ಉದ್ದೇಶಪೂರ್ವಕವಾಗಿ ಚನ್ನಪಟ್ಟಣಕ್ಕೆ ಹೋಗಿದ್ರಾ ಅಥವಾ ಹೋರಾಟದಲ್ಲಿ ಜನರು ಭಾಗವಹಿಸಬಾರದು ಎಂದು ಅವರನ್ನು ತಡೆಯಲು ಅಲ್ಲಿ ಕಾರ್ಯಕ್ರಮ ಮಾಡಿದರಾ ಗೊತ್ತಿಲ್ಲ' ಎಂದರು.
'ದೇವೇಗೌಡರು ಹೇಳೋದೆಲ್ಲ ಸುಳ್ಳು'
ಡಿಕೆಶಿ ಮಾಡಬಾರದು ಅಪರಾಧ ಮಾಡಿಲ್ಲ. ಬಿಜೆಪಿ ಜತೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳಲು ಅವರು ಬಿಡಲಿಲ್ಲ. ಕಾಂಗ್ರೆಸ್ ರಕ್ಷಣೆಗೆ ನಿಂತಿದ್ದರು. ಈ ಸಿಟ್ಟು ಬಿಜೆಪಿ ನಾಯಕರಿಗೆ ಇತ್ತು. ಈ ಹಿಂದೆ ದೇವೇಗೌಡರ ಕುಟುಂಬಕ್ಕೆ ಡಿಕೆಶಿ ಅವರಿಗೂ ವೈಮನಸ್ಸಿತ್ತು. ಹೀಗೆಲ್ಲ ಚರ್ಚೆಗಳು ನಡೆಯುತ್ತಿವೆ. ಒಂದಿಲ್ಲೊಂದು ದಿನ ಸತ್ಯ ಹೊರಗೆ ಬರಲಿದೆ. ದೇವೇಗೌಡರು ಹೇಳೋದೆಲ್ಲ ಸುಳ್ಳು. ಅವರಿಂದ ಅನೇಕರಿಗೆ ನೋವಾಗಿದೆ. ಜನರಿಗೆ ಅದು ಮನವರಿಕೆಯಾಗುವವರೆಗೂ ನಡೆಯುತ್ತಲೇ ಇರುತ್ತದೆ. ಜನರಿಗೆ ಅರ್ಥ ಆದಾಗ ಎಲ್ಲವೂ ಸರಿಹೋಗುತ್ತದೆ. ಆ ದಿನ ಕೂಡ ಬೇಗ ಬರಲಿದೆ ಎಂದು ಹೇಳಿದರು.
ಮಂಡ್ಯದಲ್ಲಿ ಗೌಡ್ರ ಗದ್ದಲ ಜೋರು: ಅವನೊಬ್ಬ ರಾಜಕೀಯ ವ್ಯಭಿಚಾರಿ!
ಕಿಂಗ್ ಮೇಕರ್ ಆಗುವುದಷ್ಟೇ ಹೆಬ್ಬಯಕೆ
ಜಿ.ಟಿ. ದೇವೇಗೌಡರ ಜೆಡಿಎಸ್ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಎಸ್ಆರ್ ಶ್ರೀನಿವಾಸ್ ಅವರೂ ಪಕ್ಷದ ವಿರುದ್ಧ ಸಿಡಿದೆದ್ದು ಹಲವು ವಿಚಾರ ಹೇಳಿಕೊಂಡಿದ್ದಾರೆ. ಪಕ್ಷಕ್ಕೆ ಯಾರೇ ಬಂದರೂ, ಹೋದರೂ ಜೆಡಿಎಸ್ ವರಿಷ್ಠರು ತಲೆಕೆಡಿಸಿಕೊಳ್ಳುವುದಿಲ್ಲ. ಈ ಭಾಗದ ಜನರು ತಮ್ಮನ್ನು ನಂಬುತ್ತಾರೆ. ಯಾವುದೇ ಸರ್ಕಾರ ಬಂದರೂ ದೇವೇಗೌಡರಿಗೆ ಕಿಂಗ್ ಮೇಕರ್ ಆಗುವ ಹೆಬ್ಬಯಕೆ. ಅಂತಿಮವಾಗಿ ಕಿಂಗ್ ಮೇಕರ್ ಯಾರು ಎಂಬುದನ್ನು ಮತದಾರರು ನಿರ್ಧರಿಸುತ್ತಾರೆ ಎಂದು ಟೀಕಿಸಿದರು.
ಪಕ್ಷ ಕುಟುಂಬಕ್ಕೆ ಸೀಮಿತವಾಗಿದೆ
ಒಕ್ಕಲಿಗರು ಬೆಳೆಯಲು ದೇವೇಗೌಡರು ಬಿಡುವುದಿಲ್ಲ ಎಂಬ ಕೆಆರ್ ಪೇಟೆ ಅನರ್ಹ ಶಾಸಕ ನಾರಾಯಣಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಚಲುವನಾರಾಯಣಸ್ವಾಮಿ, ಇದು ಬಹಳ ವರ್ಷದಿಂದ ನಡೆದುಕೊಂಡು ಬಂದಿದೆ. ಪಕ್ಷದಲ್ಲಿದ್ದ ಬಹಳಷ್ಟು ಒಕ್ಕಲಿಗರು ಈ ಪರಿಸ್ಥಿತಿ ಎದುರಿಸಿದ್ದಾರೆ. ಸಚಿವರಾಗಿ ಗುರುತಿಸಿಕೊಂಡವರು ಯಾರೂ ಜೆಡಿಎಸ್ನಲ್ಲಿ ಉಳಿದಿಲ್ಲ. ಅವರು ಜೆಡಿಎಸ್ಅನ್ನು ಸಾರ್ವತ್ರಿಕ ಪಕ್ಷವಾಗಿ, ರಾಜಕೀಯ ಪಕ್ಷವಾಗಿ ಬೆಳೆಸಲಿಲ್ಲ. ಅವರು ಜೆಡಿಎಸ್ ಪಕ್ಷವನ್ನು ತಮ್ಮ ಕುಟುಂಬದ ಹಿಡಿತಕ್ಕೆ ಸೀಮಿತಗೊಳಿಸಿದರು. ಆದ್ದರಿಂದ ಯಾರೂ ಬೆಳೆಯಲು ಸಾಧ್ಯವಾಗಲಿಲ್ಲ ಎಂದು ವಾಗ್ದಾಳಿ ನಡೆಸಿದರು.