ಆ.15ಕ್ಕೆ ಮತ್ತೆ ಬಾಗಿಲು ತೆರೆಯಲಿದೆ ಮೈಷುಗರ್ ಸಕ್ಕರೆ ಕಾರ್ಖನೆ
ಮಂಡ್ಯ, ಜುಲೈ 25 : ಮಂಡ್ಯ ಜಿಲ್ಲೆಯ ರೈತರ ಜೀವನಾಡಿಯಾದ ಮೈಷುಗರ್ ಸಕ್ಕರೆ ಕಾರ್ಖಾನೆ ಮತ್ತೆ ಬಾಗಿಲು ತೆರಯಲಿದೆ. ಕರ್ನಾಟಕ ಸರ್ಕಾರ ಕಾರ್ಖಾನೆಯನ್ನು ಆರಂಭಿಸಲು 20 ಕೋಟಿ ಅನುದಾನವನ್ನು ನೀಡಿದೆ.
ಬೃಹತ್ ಕೈಗಾರಿಕೆ, ಸಕ್ಕರೆ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಕೆ.ಜೆ.ಜಾರ್ಜ್ ಮೈಸೂರು ಸಕ್ಕರೆ ಕಾರ್ಖಾನೆಗೆ (ಮೈಷುಗರ್) ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲಾಧಿಕಾರಿಗಳು ಮತ್ತು ಕಾರ್ಖಾನೆಯ ಸಿಬ್ಬಂದಿಯ ಜೊತೆ ಸಮಾಲೋಚನೆ ನಡೆಸಿದರು.
ಚಾಮರಾಜನಗರದ ಆಲೆಮನೆಯಲ್ಲಿ ತಯಾರಾಗುತ್ತೆ ಸಕ್ಕರೆ!
ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, 'ಕಾರ್ಮಿಕರಿಗೆ ಬಾಕಿ ವೇತನವನ್ನು ಶೀಘ್ರವೇ ಪಾವತಿ ಮಾಡಲಾಗುತ್ತದೆ. ಆಗಸ್ಟ್ 15ರಂದು ಕಾರ್ಖಾನೆಯನ್ನು ಪುನಃ ಆರಂಭಿಸಲಾಗುತ್ತದೆ' ಎಂದು ಘೋಷಣೆ ಮಾಡಿದರು.
GST: ಸಕ್ಕರೆ, ಟೀ, ಕಾಫಿ ಬೆಲೆ ಜುಲೈ 1ರಿಂದ ಇಳಿಕೆ
'ಕಾಂಗ್ರೆಸ್-ಜೆಡಿಎಸ್ ಸರ್ಕಾರ ಕಾರ್ಖಾನೆಯನ್ನು ಪುನಃ ಆರಂಭಿಸಲು ಬದ್ಧವಾಗಿದೆ. ಕಾರ್ಖಾನೆ ಆರಂಭಿಸಲು ಸರ್ಕಾರದಿಂದ 20 ಕೋಟಿ ರೂ. ಮಂಜೂರಾಗಿದೆ. 10 ಕೋಟಿ ಈಗಾಗಲೇ ಬಿಡುಗಡೆಯಾಗಿದ್ದು, 2.5 ಕೋಟಿ ರೂ.ಗಳನ್ನು ರೈತರ ಕಬ್ಬಿನ ಬಾಕಿ, ಕಾರ್ಮಿಕರ ಸಂಬಂಳದ ಬಾಕಿ ಪಾವತಿಗೆ ಬಳಕೆ ಮಾಡಲಾಗಿದೆ' ಎಂದು ಕೆ.ಜೆ.ಜಾರ್ಜ್ ಹೇಳಿದರು.
ಕಾರ್ಖಾನೆ ಜೊತೆ ವಿದ್ಯುತ್ ಘಟಕವೂ ಆರಂಭ
'ಆಗಸ್ಟ್ 15ರಂದು ಮೈಷುಗರ್ ಸಕ್ಕೆರೆ ಕಾರ್ಖಾನೆ ಆರಂಭವಾಗಲಿದೆ. ಅಂದು ಕಾರ್ಖಾನೆ ಆವರಣದಲ್ಲಿರುವ ಸಹ ವಿದ್ಯುತ್ ಘಟಕವನ್ನು ಸಹ ಆರಂಭಿಸಲಾಗುತ್ತದೆ. ಕಾರ್ಖಾನೆಗೆ ಅಗತ್ಯವಿರುವ ವಿದ್ಯುತ್ ಅನ್ನು ಘಟಕದಲ್ಲಿ ಉತ್ಪಾದನೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ' ಎಂದು ಕೆ.ಜೆ.ಜಾರ್ಜ್ ಹೇಳಿದರು.
ಕಾರ್ಖಾನೆ ಕಾರ್ಯಾರಂಭ ಮಾಡಿದ ಬಳಿಕ ಪ್ರಸ್ತುತ ಹಂಗಾಮಿನಲ್ಲಿ 5 ರಿಂದ 6 ಲಕ್ಷ ಟನ್ ಕಬ್ಬು ಅರೆಯುವ ಚಿಂತನೆ ನಡೆಸಲಾಗಿದೆ. ಈ ಕುರಿತು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ಎನ್. ಅಜಯ್ ನಾಗಭೂಷಣ್ ಅವರು ಕ್ರಿಯಾ ಯೋಜನೆ ರೂಪಿಸಿದ್ದಾರೆ.
2.8 ಲಕ್ಷ ಟನ್ ಕಬ್ಬು ಖರೀದಿ
ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ಎನ್. ಅಜಯ್ ನಾಗಭೂಷಣ್ ಮಾತನಾಡಿ, 'ಈಗಾಗಲೇ ರೈತರಿಂದ 2.8 ಲಕ್ಷ ಟನ್ ಕಬ್ಬು ಪಡೆಯಲು ಒಪ್ಪಿಗೆ ಸಿಕ್ಕಿದೆ. ಕಬ್ಬು ಕಟಾವಿಗೆ ಬಳ್ಳಾರಿಯಿಂದ ಕಾರ್ಮಿಕರನ್ನು ಕರೆತರಲು ತಂಡವನ್ನು ಕಳುಹಿಸಲಾಗಿದೆ. ಒಂದು ವಾರದಲ್ಲಿ ಕಟಾವು ಮಾಡಲು ರೈತರಿಗೆ ಸೂಚನೆ ನೀಡಲಾಗುತ್ತದೆ' ಎಂದರು.
'ಆಗಸ್ಟ್ 15ರೊಳಗೆ ಹಿಂದಿನ ವರ್ಷದ ಕಬ್ಬು ಸರಬರಾಜು ಮಾಡಿದ ರೈತರಿಗೆ 2 ಕಂತಿನಲ್ಲಿ ಹಣ ಪಾವತಿ ಮಾಡಲಾಗುತ್ತದೆ. ಹಣ ಬಿಡುಗಡೆ ಬಗ್ಗೆ ರೈತರು ಆತಂಕ ಪಡಬೇಕಾದ ಅಗತ್ಯವಿಲ್ಲ' ಎಂದು ಹೇಳಿದರು.
ಬಾಯ್ಲರ್ ರಿಪೇರಿ
'ಮೈಷುಗರ್ ಸಕ್ಕೆರೆ ಕಾರ್ಖಾನೆಯಲ್ಲಿ ಪ್ರಸ್ತುತ ಎರಡು ಬಾಯ್ಲರ್ ಗಳಿವೆ. ಒಂದು ಬಾಯ್ಲರ್ ಪ್ರಾಯೋಗಿಕವಾಗಿ ಆರಂಭಗೊಳ್ಳಲಿದೆ. ಹತ್ತು ದಿನದಲ್ಲಿ ಮೊದಲ ಬಾಯ್ಲರ್ ದುರಸ್ತಿ ಕಾರ್ಯ ಮುಗಿಯಲಿದೆ. ಮತ್ತೊಂದರ ದುರಸ್ಥಿ ಕಾರ್ಯ ನಂತರ ನಡೆಯಲಿದೆ. ಡಿಸೆಂಬರ್ನಲ್ಲಿ ಎರಡೂ ಬಾಯ್ಲರ್ ಕಾರ್ಯ ನಿರ್ವಹಿಸಲಿವೆ' ಎಂದು ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಸಮನ್ವಯ ಸಮಿತಿ ರಚನೆ ಮಾಡಿ
ಸಭೆಯಲ್ಲಿ ಮಾತನಾಡಿದ ಕಬ್ಬು ಒಪ್ಪಿಗೆದಾರರ ಸಂಘದ ಅಧ್ಯಕ್ಷ ಶಂಭೂನಹಳ್ಳಿ ಕೃಷ್ಣ ಅವರು, 'ಕಾರ್ಖಾನೆ ಯಾವ ಕಾರ್ಯಗಳೂ ರೈತರಿಗೆ ತಿಳಿಯುವುದಿಲ್ಲ. ರೈತರು ಕಬ್ಬು ಕಟಾವು ಮಾಡಿ ಕಾರ್ಖನೆಗೆ ಸರಬರಾಜು ಮಾಡಿದ ನಂತರ ಹಣಕ್ಕಾಗಿ ಪರದಾಡಬೇಕಿದೆ. ನಮ್ಮ ಕಬ್ಬು ಕೊಟ್ಟು ಹಣಕ್ಕಾಗಿ ಅಲೆದಾಡಬೇಕಿದೆ. ಹೀಗಾಗಿ ಕಬ್ಬು ಒಪ್ಪಿಗೆದಾರರನ್ನು ಒಪ್ಪಿಸಿ ಸಮನ್ವಯ ಸಮಿತಿಯನ್ನು ರಚನೆ ಮಾಡಬೇಕು' ಎಂದು ಒತ್ತಾಯಿಸಿದರು.