ಮಂಡ್ಯ ಮೈಷುಗರ್ ಕಾರ್ಖಾನೆಗೆ ಮರು ಜೀವ: ಆಗಸ್ಟ್ನಿಂದ ಮತ್ತೆ ಆರಂಭಕ್ಕೆ ಸಿದ್ಧತೆ
ಮಂಡ್ಯ, ಜೂ.25: ಕಳೆದ ನಾಲ್ಕು ವರ್ಷಗಳಿಂದ ಕಾರ್ಯಾಚರಣೆ ಸ್ಥಗಿತಗೊಂಡಿದ್ದ ಮೈಸೂರು ಸಕ್ಕರೆ ಕಾರ್ಖಾನೆ ಆಗಸ್ಟ್ ತಿಂಗಳ ಮೊದಲ ವಾರ ಕಬ್ಬು ಅರೆಯುವಿಕೆ ಕಾರ್ಯ ಆರಂಭಿಸಲಿದೆ. ಜುಲೈ ಅಂತ್ಯದ ವೇಳೆಗೆ ಕಾರ್ಖಾನೆ ಪ್ರಾರಂಭಕ್ಕೆ ಸಜ್ಜಾಗುತ್ತಿದೆ. ಪುಣೆಯ ಆರ್.ಬಿ.ಟೆಕ್ನೋಕ್ರೇಟ್ಸ್ ಅಂಡ್ ರೀಕ್ಲೈಮರ್ಸ್ ಪ್ರೈವೇಟ್ ಲಿಮಿಟೆಡ್ ಹಾಗೂ ಹೈದರಾಬಾದ್ನ ಎಸ್ಸೆನ್ನಾರ್ ಪವರ್ ಟೆಕ್ ಸರ್ವೀಸ್ ಕಂಪನಿಯವರು ಕಾರ್ಖಾನೆ ಯಂತ್ರೋಪಕರಣ ದುರಸ್ತಿ ಕಾರ್ಯ ನಡೆಸುತ್ತಿದ್ದಾರೆ. ಮೇ 20 ರಿಂದ ದುರಸ್ತಿ ಕಾರ್ಯ ಆರಂಭಿಸಿದ್ದು, ಜುಲೈ 30ರೊಳಗೆ ಕಾರ್ಖಾನೆ ಪ್ರಾಯೋಗಿಕವಾಗಿ ಚಾಲನೆಗೊಳ್ಳಲಿದೆ.
ಮೈಷುಗರ್ ಚಕ್ರಗಳು ಮೌನಕ್ಕೆ ಶರಣಾದ ನಂತರ ಇದೇ ಮೊದಲ ಬಾರಿಗೆ ಕಾರ್ಖಾನೆ ಆವರಣದಲ್ಲಿ ಭರವಸೆ ಮೂಡಿದೆ. ಕಾರ್ಖಾನೆ ಆರಂಭಕ್ಕೆ 70 ದಿನಗಳ ಕಾರ್ಯಾಚರಣೆ ನಡೆಸಲು ಸರ್ಕಾರ ಮುಂದಾಗಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಜುಲೈ ಅಂತಿಮ ವಾರದಲ್ಲಿ ಮೈಷುಗರ್ ಚಿಮಣಿಯಲ್ಲಿ ಹೊಗೆಯಾಡುವ ಸಾಧ್ಯತೆ ಇದೆ.
ಮಂಡ್ಯದ 5 ರೂ. ಡಾಕ್ಟರ್ ಶಂಕರೇಗೌಡ ಗುಣಮುಖ: ಶೀಘ್ರದಲ್ಲಿಯೇ ಮತ್ತೆ ರೋಗಿಗಳ ಸೇವೆಗೆ
ಕಾರ್ಖಾನೆ ಪುನಶ್ವೇತನಕ್ಕೆ ಸರ್ಕಾರ ಬಜೆಟ್ ನಲ್ಲಿ 50 ಕೋಟಿ ರೂ ಅನುದಾನ ಘೋಷಣೆಯಾದ ನಂತರೂ ಯಾವುದೇ ಚಟುವಟಿಕೆ ಆರಂಭಿಸಿಲ್ಲ. ಈ ವರ್ಷ ಕಾರ್ಖಾನೆ ಆರಂಭವಾಗುವುದು ಅನುಮಾನ ಎಂಬ ಆತಂಕ ರೈತರಲ್ಲಿತ್ತು. ಆದರೆ ಕಳೆದೊಂದು ವಾರದಿಂದ ಕಾರ್ಖಾನೆ ಆವರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ಆಶಾವಾದ ಮೂಡಿದೆ. ಕಾರ್ಖಾನೆಯ ಇತಿಹಾಸದಲ್ಲಿ ಎಐಎಸ್ ಅಧಿಕಾರಿ ಹೊರತುಪಡಿಸಿ ಬೇರೆ ಯಾರೂ ವ್ಯವಸ್ಥಾಪಕ ನಿರ್ದೇಶಕನ ಹುದ್ದೆಯನ್ನ ನಿರ್ವಹಣೆ ಮಾಡಿರಲಿಲ್ಲ. ಐಎಎಸ್ ಅಧಿಕಾರಿಗಳಿಗೆ ಸಕ್ಕರೆ ಕಾರ್ಖಾನೆ ತಂತ್ರಜ್ಞಾನ ಗೊತ್ತಿಲ್ಲ. ಇದೇ ಕಾರಣಕ್ಕೆ ಕಾರ್ಖಾನೆ ಅವನತಿ ಹೊಂದಿದೆ ಎಂದೇ ಹೇಳಲಾಗುತ್ತಿತ್ತು.
ಎಲ್ಲಾ ಹುದ್ದೆಗಳು ಖಾಲಿ: ಗುತ್ತಿಗೆ ಆಧಾರದ ಮೇಲೆ ನೇಮಕ
ಪುಣೆಯ ಆರ್.ಬಿ.ಟೆಕ್ನೋಕ್ರೇಟ್ಸ್ ಅಂಡ್ ರೀಕ್ಲೈಮರ್ಸ್ ಪ್ರೈವೇಟ್ ಲಿಮಿಟೆಡ್ನವರಿಗೆ ಸಕ್ಕರೆ ಘಟಕ, ಸಹ ವಿದ್ಯುತ್ ಘಟಕದ ಬಾಯ್ಲರ್ ವಿಭಾಗದ ದುರಸ್ತಿಗೆ 13.92 ಕೋಟಿ ರು.ಗಳಿಗೆ ಟೆಂಡರ್ ನೀಡಿದ್ದರೆ, ಮೈಷುಗರ್ ಸಹ ವಿದ್ಯುತ್ ಘಟಕ, ಟರ್ಬೈನ್ ಒಟ್ಟು (ಮೆಕ್ಯಾನಿಕಲ್, ಉಪಕರಣ, ವಿದ್ಯುತ್) ವಿದ್ಯುತ್ ಉತ್ಪಾದನೆ, ವಿತರಣೆ ಮತ್ತು ಪ್ರಸರಣ ಸೇವೆಯನ್ನು 2.80 ಕೋಟಿ ರು.ಗಳಿಗೆ ಟೆಂಡರ್ ನೀಡಲಾಗಿದೆ.
ಕಾರ್ಖಾನೆ ಯಂತ್ರೋಪಕರಣಗಳ ದುರಸ್ತಿಗೆ 50 ಕೋಟಿ ರು.ಗಳನ್ನು ಘೋಷಿಸಿದ್ದು, ಯಂತ್ರೋಪಕರಣಗಳ ದುರಸ್ತಿ ಮತ್ತು ಓವರ್ಆಯಿಲಿಂಗ್ ಕೆಲಸಕ್ಕೆ ಹಂಚಿಕೆಯಾಗಿರುವ 15 ಕೋಟಿ ರೂ.ಗಳಲ್ಲಿ ಮೊದಲ ತ್ರೈಮಾಸಿಕ ಕಂತಿನಲ್ಲಿ 3.75 ಕೋಟಿ ರು ಬಿಡುಗಡೆಯಾಗಿದೆ. ಬಾಕಿ 11.25 ಕೋಟಿ ರು. ಹಣವನ್ನು ಎರಡನೇ ಹಂತದಲ್ಲಿ ಬಿಡುಗಡೆಗೊಳಿಸುವುದು ಹಾಗೂ ಕಾರ್ಖಾನೆಗೆ ದುಡಿಯುವ ಬಂಡವಾಳ 105 ಕೋಟಿ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಕಾರ್ಖಾನೆಯಲ್ಲಿ ಎಲ್ಲಾ ಹುದ್ದೆಗಳು ಖಾಲಿ ಇರುವುದರಿಂದ ನೇರ ಸಂದರ್ಶನದ ಮೂಲಕ ಎರಡು ವರ್ಷಗಳ ಅವಧಿಗೆ ಉಪ ಮುಖ್ಯ ಅಭಿಯಂತರ, ಮುಖ್ಯ ಭದ್ರತಾಧಿಕಾರಿ, ಸಹಾಯಕ ಮುಖ್ಯ ಭದ್ರತಾಧಿಕಾರಿ, ಕಾರ್ಮಿಕ ಕಲ್ಯಾಣಾಧಿಕಾರಿ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ.
ಮಂಡ್ಯ; ತೆಂಗು ಬಿಟ್ಟು ಅಡಿಕೆ ಬೆಳೆಯತ್ತ ರೈತರ ಚಿತ್ತ
1.50 ಲಕ್ಷ ಟನ್ ಕಬ್ಬು ಒಪ್ಪಿಗೆ
ಪ್ರಸಕ್ತ ವರ್ಷ ಐದು ಲಕ್ಷ ಟನ್ ಕಬ್ಬು ಅರೆಯುವ ಗುರಿಯನ್ನು ಹೊಂದಲಾಗಿದೆ. ಕಾರ್ಖಾನೆಯಲ್ಲಿರುವ ಒಂದು ಮಿಲ್ನಲ್ಲಿ ನಿತ್ಯ 4000 ಟನ್ ಕಬ್ಬು ಅರೆಯುವಂತೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಪ್ರತಿ ತಿಂಗಳು 1 ಲಕ್ಷ ಟನ್ನಂತೆ 5 ರಿಂದ 6 ಲಕ್ಷ ಟನ್ ಕಬ್ಬು ಅರೆಯಬಹುದು. ಈಗಾಗಲೇ ಕಬ್ಬು ಕಟಾವಿಗೆ ಕೂಲಿಯಾಳುಗಳನ್ನು ಕರೆತರಲು ಬಳ್ಳಾರಿಗೆ ವಾಹನಗಳೊಂದಿಗೆ ಕಳುಹಿಸಲಾಗಿದೆ. ಮಹಾರಾಷ್ಟ್ರದಿಂದಲೂ ಕೂಲಿಯಾಳುಗಳನ್ನು ಕರೆತರುವುದಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಒಮ್ಮೆ ಇಲ್ಲಿಗೆ ಬಂದ ಕೂಲಿಯಾಳುಗಳು ಜನವರಿ, ಫೆಬ್ರವರಿವರೆಗೆ ಕಡ್ಡಾಯವಾಗಿ ಇರುವಂತೆ ನೋಡಿಕೊಳ್ಳಲು ನಿರ್ಧರಿಸಲಾಗಿದೆ.
ಪ್ರಸ್ತುತ ಕಾರ್ಖಾನೆ ವ್ಯಾಪ್ತಿಯಲ್ಲಿ 8 ಲಕ್ಷ ಟನ್ ಕಬ್ಬು ಇದೆ. ಕಳೆದ ಹದಿನೈದು ದಿನಗಳಲ್ಲಿ 1.50 ಲಕ್ಷ ಟನ್ ಕಕಬ್ಬನ್ನು ಒಪ್ಪಿಗೆ ಮಾಡಿಕೊಳ್ಳಲಾಗಿದೆ. ಪ್ರಸ್ತುತ 16 ರಿಂದ 18 ಜನ ಫೀಲ್ಡ್ಮನ್ಗಳಿದ್ದಾರೆ. ಇನ್ನೂ 15 ರಿಂದ 20 ಜನರು ಫೀಲ್ಡ್ಮನ್ಗಳು ಬೇಕಿದ್ದು, ಅವರನ್ನು ಕಿಯಾನಿಕ್ಸ್ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಕಡಿಮೆ ವೇತನ ಎಂಬ ಕಾರಣಕ್ಕೆ ಯಾರೂ ಮುಂದೆ ಬರುತ್ತಿಲ್ಲಘಿ. ಮುಂದಿನ ದಿನಗಳಲ್ಲಿ ಕೆಲಸಕ್ಕೆ ಬರಬಹುದೆಂಬ ನಿರೀಕ್ಷೆ ಆಡಳಿತ ಮಂಡಳಿಯದ್ದಾಗಿದೆ.
ನಂದಿ ಸಹಕಾರ ಸಕ್ಕರೆ ಕಾರ್ಖಾನೆ ಮುನ್ನಡೆಸಿದ ಕೀರ್ತಿ
ಇದನ್ನು ಮನಗಂಡ ಸರ್ಕಾರ ಇದೇ ಮೊದಲ ವಾರಿಗೆ ಐಎಎಸ್ ಅಧಿಕಾರಿಯನ್ನು ಹೊರತುಪಡಿಸಿ ಸಕ್ಕರೆ ತಂತ್ರಜ್ಞಾನದಲ್ಲಿ ಅಪಾರ ಅನುಭವ ಹೊಂದಿರುವ ಅಪ್ಪಾಸಾಹೇಬ ಪಾಟೀಲ ಅವರನ್ನು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. ವಿಜಯಪುರ ಮೂಲಕ ಅವರು ನಂದಿ ಸಹಕಾರ ಸಕ್ಕರೆ ಕಾರ್ಖಾನೆ ಮುನ್ನಡೆಸಿದ ಅನುಭವ ಹೊಂದಿದ್ದಾರೆ.
ಮೈಷುಗರ್ ವ್ಯಾಪ್ತಿಯ ಕಬ್ಬನ್ನು ಕಾರ್ಖಾನೆಗೆ ನೀಡುವಂತೆ ಹಳ್ಳಿ ಹಳ್ಳಿಗಳಲ್ಲಿ ಕರಪತ್ರಗಳನ್ನು ಹಂಚಲಾಗಿದೆ. ರೈತರೂ ಸಹ ಒಪ್ಪಿಗೆ ಮಾಡಿಕೊಳ್ಳುವುದಕ್ಕೆ ಉತ್ಸಾಹ ತೋರುತ್ತಿದ್ದಾರೆ. ಆದರೆ, ಎಲ್ಲಾ ಕಬ್ಬನ್ನು ನಮಗೇ ನೀಡಬೇಕೆಂದು ಬಲವಂತ ಹೇರದೆ, ಕಬ್ಬು ಸರಬರಾಜು ಮಾಡುವಂತೆ ರೈತರ ಮನವೊಲಿಸುವ ಕಾರ್ಯವೂ ಸದ್ದಿಲ್ಲದೆ ನಡೆಯುತ್ತಿದೆ. ಜುಲೈ ಅಂತ್ಯದೊಳಗೆ ಮೈಷುಗರ್ ಕಾರ್ಖಾನೆ ದುರಸ್ತಿಪಡಿಸಿ ಆಗಸ್ಟ್ ಮೊದಲ ವಾರದಲ್ಲಿ ಕಬ್ಬು ಅರೆಯುವ ಕಾರ್ಯವನ್ನು ಪ್ರಾರಂಭಿಸಲಾಗುತ್ತದೆ. ಅದಕ್ಕೆ ಸಂಬಂಧಿಸಿದಂತೆ ಎಲ್ಲ ಸಿದ್ಧತಾ ಕಾರ್ಯಗಳನ್ನೂ ಸಹ ಭರದಿಂದ ಕೈಗೊಂಡಿದ್ದೇವೆ ಎಂದು ವ್ಯವಸ್ಥಾಪಕ ನಿರ್ದೇಶಕ ಪಾಟೀಲ್ ಅಪ್ಪಾ ಸಾಹೇಬ್ ತಿಳಿಸಿದ್ದಾರೆ.
ಮೇ1ರಿಂದಲೇ ಆರಂಭಗೊಂಡ ಸ್ವಚ್ಛತೆ ಕಾರ್ಯ
ಜೊತೆಗೆ ಬಣ್ಣಾರಿ ಅಮ್ಮನ್ ಕಾರ್ಖಾನೆಯಲ್ಲಿ ಅಪಾರ ಅನುಭವ ಹೊಂದಿರುವ ಚಂದ್ರಶೇಖರ್ ಅವರನ್ನು ಮುಖ್ಯ ಕಬ್ಬು ಅಭಿವೃದ್ಧಿ ಅಧಿಕಾರಿ ಸಿಸಿಡಿಒ ಆಗಿ ನೇಮಕ ಮಾಡಿಕೊಳ್ಳಲಾಗೊದೆ. ಈ ಇಬ್ಬರೂ ಮುಖ್ಯಸ್ಥರು ಮಂಡ್ಯದಲ್ಲೇ ವಾಸ್ತವ್ಯ ಹೂಡಲಿದ್ದು, ಕಾರ್ಖಾನೆ ಆರಂಭಿಕ ಚಟುವಟಿಕೆಗಳ ಸಂಪೂರ್ಣ ಜವಾಬ್ದಾರಿ ನೋಡಿಕೊಳ್ಳಲಿದ್ದಾರೆ. ಮೇ1ರಿಂದಲೇ ಕಾರ್ಖಾನೆ ಸ್ವಚ್ಛತೆ ಆರಂಭಗೊಂಡಿತು.