ಮಂಡ್ಯದಲ್ಲಿ ಪೆಲಿಕಾನ್ ಹಕ್ಕಿಗಳ ನಿಗೂಢ ಸಾವು: ತಜ್ಞರಿಂದ ಪರಿಶೀಲನೆ
ಮಂಡ್ಯ, ಫೆಬ್ರವರಿ 09: ಭಾರತೀನಗರಕ್ಕೆ ಸಮೀಪ ಇರುವ ಕೊಕ್ಕರೆ ಬೆಳ್ಳೂರಿನಲ್ಲಿ ಪೆಲಿಕಾನ್ ಹಕ್ಕಿಗಳ ಸಾವು ಮೇಲಿಂದ ಮೇಲೆ ನಡೆಯುತ್ತಲೇ ಇದ್ದು, ಜನ ಹಕ್ಕಿ ಜ್ವರದ ಆತಂಕ ಎದುರಿಸುವಂತಾಗಿತ್ತು.
ಈ ಕುರಿತಂತೆ ಸ್ಥಳೀಯರು ಪೆಲಿಕಾನ್ ಹಕ್ಕಿಗಳ ಸಾವಿಗೆ ಕಾರಣವೇನು ಎನ್ನುವುದರ ಬಗ್ಗೆ ನಿಖರ ಮಾಹಿತಿ ನೀಡುವಂತೆ ಪ್ರತಿಭಟನೆಯನ್ನು ಕೂಡ ನಡೆಸಿದ್ದರು. ಪ್ರತಿ ಬಾರಿ ಹಕ್ಕಿಗಳು ಸಾವನ್ನಪ್ಪಿದ್ದಾಗ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ವರದಿ ಬರಬೇಕು ಎಂಬ ಮಾಹಿತಿಯನ್ನು ಅರಣ್ಯಾಧಿಕಾರಿಗಳು ನೀಡುತ್ತಾ ಬಂದಿದ್ದರು.
ಕೊಕ್ಕರೆ ಬೆಳ್ಳೂರಿನಲ್ಲಿ ನಿಲ್ಲದ ಪೆಲಿಕಾನ್ ಸಾವು, ಹಕ್ಕಿ ಜ್ವರದ ಆತಂಕ
ಇದೀಗ ಬೆಂಗಳೂರಿನ ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಭೇಟಿ ನೀಡಿ ಹಕ್ಕಿಗಳ ಚಲನವಲನಗಳನ್ನು ಪರಿಶೀಲಿಸಿದ್ದರಿಂದ ಸ್ಥಳೀಯರು ನೆಮ್ಮದಿಯುಸಿರು ಬಿಡುವಂತಾಗಿದೆ. ಮೃತಪಟ್ಟ ಪೆಲಿಕಾನ್ ಕಳೆಬರವನ್ನು ವಿಜ್ಞಾನಿಗಳಾದ ಡಾ.ಮುನಿಯಲ್ಲಪ್ಪ, ಡಾ.ಚಂದ್ರನಾಯಕ್, ಡಾ.ಶಿವರಾಜು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು, ಸಾವಿಗೆ ಅದರ ದೇಹದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಜಂತುಹುಳುಗಳೇ ಕಾರಣ ಎಂದು ಶವಪರೀಕ್ಷೆಯ ನಂತರ ವರದಿ ನೀಡಿದ್ದಾರೆ. ಅಲ್ಲದೆ ಮತ್ತಷ್ಟು ಮಾಹಿತಿಗಾಗಿ ಹಕ್ಕಿಗಳ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗೆ ಲ್ಯಾಬ್ ಕಳುಹಿಸಲಾಗುತ್ತಿದ್ದು ಹೆಚ್ಚಿನ ಪರೀಕ್ಷೆಯ ಮೂಲಕ ಮಾಹಿತಿ ದೊರೆಯಬೇಕಾಗಿದೆ ಎಂದು ತಿಳಿಸಿದ್ದಾರೆ.
ಕೊಕ್ಕರೆ ಬೆಳ್ಳೂರಿನಲ್ಲಿ ಇದುವರೆಗೆ 24 ಪೆಲಿಕಾನ್ ಹಕ್ಕಿಗಳು, 26 ಕೊಕ್ಕರೆಗಳು ಸಾವನ್ನಪ್ಪಿವೆ. ಸುಮಾರು 3 ಪೆಲಿಕಾನ್ ಪಕ್ಷಿಗಳು ಅಸ್ವಸ್ಥಗೊಂಡಿವೆ ಎನ್ನಲಾಗುತ್ತಿದೆ. ವಿಜ್ಞಾನಿಗಳು ಕೊಕ್ಕರೆ ಬೆಳ್ಳೂರಿಗೆ ಆಗಮಿಸಿದ ವೇಳೆ ಅರಣ್ಯಾಧಿಕಾರಿ ಸಿಸಿಎಫ್ ಮನೋಜ್ ಕುಮಾರ್, ಡಿಸಿಎಫ್ ಏಡುಕುಂಡಲ ಹಾಜರಿದ್ದು ಮಾಹಿತಿ ನೀಡಿದ್ದಾರೆ.