ಡಿಕೆಶಿ ಭದ್ರಕೋಟೆಯನ್ನು ಛಿದ್ರ ಮಾಡ್ತಾರಾ ತೇಜಸ್ವಿನಿ ಗೌಡ?
ಮಂಡ್ಯ, ಆಗಸ್ಟ್ 3: ಪತ್ರಿಕೋದ್ಯಮ ಬಿಟ್ಟು ರಾಜಕಾರಣದತ್ತ ಮುಖ ಮಾಡಿ ಸಂಸದೆಯೂ ಆದ ತೇಜಸ್ವಿನಿಗೌಡ ಆರಂಭದಲ್ಲಿ ಪ್ರಭಾವಿ ರಾಜಕಾರಣಿ ಡಿ.ಕೆ.ಶಿವಕುಮಾರ್ ಗರಡಿಯಲ್ಲಿ ಬೆಳೆದು ಬಂದವರು ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರ ಕೃಪಾಕಟಾಕ್ಷದಿಂದಲೇ ಮಾಜಿ ಪ್ರಧಾನಿ ದೇವೇಗೌಡರ ಎದುರು ಗೆಲುವು ಕಂಡಿದ್ದರು ಎನ್ನುವುದು ಕೂಡ ಇತಿಹಾಸ.
ಡಿಕೆಶಿ ಕಾಂಗ್ರೆಸ್ಸಿಗೆ ಅಂಟಿದ ಕ್ಯಾನ್ಸರ್ : ತೇಜಸ್ವಿನಿ ರಮೇಶ್
ಇಂತಹ ತೇಜಸ್ವಿನಿ ಗೌಡ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿ, ಡಿಕೆಶಿ ವಿರುದ್ಧವೇ ಸಮರ ಸಾರಿರುವುದು ಮತ್ತು ಸಾರುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಡಿಕೆಶಿ ಭದ್ರಕೋಟೆಯನ್ನು ಛಿದ್ರ ಮಾಡಬೇಕೆನ್ನುವ ತೇಜಸ್ವಿನಿ ಗೌಡ ಕನಸು ಈಗಿನ ಬೆಳವಣಿಗೆಯನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಎಲ್ಲ ರೀತಿಯಲ್ಲೂ ನನಸಾಗುವ ಲಕ್ಷಣಗಳು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಮೋದಿ ನೀಡಿದ ಏಟಿಗೆ ಅಲುಗಾಡುತ್ತಿದೆಯೇ ಡಿಕೆಶಿ ಬಹುಕೋಟಿ ಸಾಮ್ರಾಜ್ಯ?
ಬಿಜೆಪಿ ಪಕ್ಷದ ಮಹಿಳಾ ನಾಯಕಿಯರ ಪೈಕಿ ಆಕ್ಟೀವ್ ಆಗಿರುವ ನಾಯಕಿ ಎಂದರೆ ತೇಜಸ್ವಿನಿ ಗೌಡ ಎಂದರೆ ಅತಿಶಯೋಕ್ತಿಯಾಗಲಾರದು. ಮಂಡ್ಯ ವ್ಯಾಪ್ತಿಯಲ್ಲಿ ಕಾಲಿಗೆ ಚಕ್ರಕಟ್ಟಿಕೊಂಡಂತೆ ಓಡಾಡುತ್ತಿರುವ ಇವರು ಈಗಾಗಲೇ ಬೇರೆ ಬೇರೆ ಪಕ್ಷದಿಂದ ಒಂದಷ್ಟು ಮುಖಂಡರನ್ನು ತಮ್ಮ ಪಕ್ಷದತ್ತ ಎಳೆದುಕೊಳ್ಳುವಲ್ಲಿಯೂ ಸಫಲರಾಗಿದ್ದಾರೆ. ಸದ್ಯ ಮಂಡ್ಯದಲ್ಲಿ ಕಾಂಗ್ರೆಸ್ ನಿದ್ರಾವಸ್ಥೆಯಲ್ಲಿದೆ. ಈಗಾಗಲೇ ಕಾವೇರಿ ನೀರು ಹರಿಯುತ್ತಿರುವುದರಿಂದ ರೈತರು ಆಕ್ರೋಶಿತರಾಗಿದ್ದಾರೆ. ಪರಿಣಾಮ ಕಾಂಗ್ರೆಸ್ ನಾಯಕರು ಮೌನವಾಗಿರುವುದು ಅನಿವಾರ್ಯವಾಗಿದೆ.
ಡಿಕೆಶಿಯದೇ ಪಾರುಪತ್ಯವಾಗಿತ್ತು!
ಮಂಡ್ಯ ಭಾಗದಲ್ಲಿ ಅಂಬರೀಶ್ ಇದ್ದರೂ ಡಿ.ಕೆ.ಶಿವಕುಮಾರ್ ಅವರದ್ದೇ ಪಾರುಪತ್ಯ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಇದೀಗ ಡಿಕೆಶಿ ಅವರ ಮೇಲೆ ನಡೆದ ಐಟಿ ದಾಳಿಯಿಂದ ಚೇತರಿಸಿಕೊಳ್ಳಲು ಇನ್ನಷ್ಟು ದಿನಗಳು ಬೇಕಾಗಬಹುದು. ಅದರೊಳಗೆ ಪಕ್ಷವನ್ನು ಒಂದಷ್ಟು ಗಟ್ಟಿ ಮಾಡಿಕೊಳ್ಳುವ ಇರಾದೆಯೂ ತೇಜಸ್ವಿನಿ ಗೌಡ ಅವರಿಗೆ ಇಲ್ಲದಿಲ್ಲ.
ಕಾರ್ಯಕರ್ತರನ್ನೂ ಬಿಜೆಪಿಗೆ ಸೆಳೆಯುವ ಯತ್ನ
ಈ ನಡುವೆ ಮಂಡ್ಯದ ಬಿಜೆಪಿ ಘಟಕದ ವತಿಯಿಂದ ಹೊಸಹಳ್ಳಿಯ ಬಿಸಿಲುಮಾರಮ್ಮ ದೇವಸ್ಥಾನದ ಆವರಣದಲ್ಲಿ ಬಿಸಿಲು ಮಾರಮ್ಮ ಶಕ್ತಿ ಕೇಂದ್ರದ ಕಾರ್ಯಕರ್ತರ ಸಮಾವೇಶ ನಡೆಸಲಾಗಿದ್ದು ಅದರಲ್ಲಿ ವಿವಿಧ ಪಕ್ಷದ 50ಕ್ಕೂ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ.
ತೇಜಸ್ವಿನಿ ಗೌಡ ಸಾರಥ್ಯ?
ಮುಂದಿನ ದಿನಗಳಲ್ಲಿ ಮಂಡ್ಯ, ರಾಮನಗರ ವ್ಯಾಪ್ತಿಯಲ್ಲಿ ಪಕ್ಷದ ಸಂಘಟನೆಗೆ ಒತ್ತು ನೀಡುವ ಕೆಲಸವನ್ನು ಅವರು ಮಾಡಲಿದ್ದಾರೆ. ಮಂಡ್ಯದಲ್ಲಿ ಬಿಜೆಪಿ ಲೆಕ್ಕಕ್ಕಿಲ್ಲದಂತಾಗಿದೆ. ಅಲ್ಲಿ ಪಕ್ಷ ಸಂಘಟನೆ ಮಾಡುವುದು ಅನಿವಾರ್ಯವಾಗಿದೆ. ಹೀಗಾಗಿ ಅದರ ಸಾರಥ್ಯವನ್ನು ಬಹುಶಃ ತೇಜಸ್ವಿನಿ ಗೌಡ ವಹಿಸಿಕೊಳ್ಳುವ ಸಾಧ್ಯತೆಯಿದೆ.
ಮುಂದೇನಾಗುತ್ತದೋ ಕಾದುನೋಡಬೇಕು!
ಬಡವರು ಮತ್ತು ಮಧ್ಯಮ ವರ್ಗದ ಜನರಿಗಾಗಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ದೇಶದ ಹಿತದೃಷ್ಟಿಯಿಂದಾಗಿ ಕೆಲವು ಕಠಿಣ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಇಂತಹ ದಿಟ್ಟ ನಿರ್ಧಾರದಿಂದ ಮನಸೂರೆಗೊಂಡ ಅಸಂಖ್ಯಾತ ಜನತೆ ಬಿಜೆಪಿ ಪಕ್ಷದತ್ತ ಒಲವು ತೋರಿ ಬರುತ್ತಿದ್ದಾರೆ ಎಂದು ಹೇಳುತ್ತಿದ್ದರೂ ಬೇರೆ ಪಕ್ಷದ ಕಾರ್ಯಕರ್ತರನ್ನು ತಮ್ಮತ್ತ ಒಲಿಸಿಕೊಳ್ಳುವ ಯತ್ನದಲ್ಲಿದ್ದಾರೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಮುಂದೆ ಏನಾಗುತ್ತೋ ಕಾದು ನೋಡಬೇಕಿದೆ.