ನಿಮ್ಮ ಮಾತು ನಿಮ್ಮ ಸಂಸ್ಕಾರ ತೋರಿಸುತ್ತದೆ: ಎಚ್ಡಿಕೆಗೆ ಸುಮಲತಾ ಟಾಂಗ್
ಮಂಡ್ಯ, ಜುಲೈ 7: "ತಪ್ಪಿನ ಅರಿವಾಗಿದ್ದರೂ ಅದೇ ತಪ್ಪನ್ನು ಮುಂದುವರೆಸಿದರೆ ಜನ ಮತ್ತೊಮ್ಮೆ ಬುದ್ಧಿ ಕಲಿಸುತ್ತಾರೆ. ನಾನು ಹೆದರಿಸಿ ಹೋರಾಡಿದವಳು, ಸಿಎಂ ಮಗ, 8 ಜನ ಎಂಎಲ್ಎಗಳ ವಿರುದ್ಧ ಹೋರಾಡಿ ಗೆದ್ದವಳು. ನಮ್ಮ ಬಳಿ ಮಿಸೈಲ್ಸ್ ಇವೆ, ಬಾಂಬ್ ಇವೆ ಅಂತೀರಾ? ಇದು ಜನಪ್ರತಿನಿಧಿಗಳು ಆಡುವ ಮಾತಾ? ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ನಿಮ್ಮ ಮಾತುಗಳಿಂದ ಜನ ಮೋಸ ಹೋಗುತ್ತಾರೆ ಅಂದುಕೊಂಡಿದ್ದರೆ ಚಾನ್ಸೆ ಇಲ್ಲಾ, ನನಗೆ ದೇವೇಗೌಡರ ಕುಟುಂಬ ಹೊಡೆದು ಯಾವ ಲಾಭವೂ ಇಲ್ಲ. ಮಾಜಿ ಸಿಎಂ ಆಗಿ ಸಂಸದೆ ಬಗ್ಗೆ ಆಡುವ ಮಾತು ನಿಮ್ಮ ಸಂಸ್ಕಾರ ತೋರುತ್ತದೆ, ಸಿನೆಮಾದವರ ಬಗ್ಗೆ ತಪ್ಪಾಗಿ ಮಾತನಾಡಿದರೆ ನಾನು ಸುಮ್ಮನಿರಲ್ಲ. ಸಿನೆಮಾದಲ್ಲಿ ಒಳ್ಳೆಯ ಸಂಸ್ಕಾರ ಇದೆ,'' ಎಂದು ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಹೇಳಿದರು. "ಎಚ್ಡಿಕೆ ಎಲ್ಲಿ ಬೇಕಾದರೂ ರಾಜಕಾರಣ ಮಾಡಲಿ, ಇವತ್ತಿಗೆ ಅವರು ಚನ್ನಪಟ್ಟಣ ಶಾಸಕ, ನಾನು ಮಂಡ್ಯ ಸಂಸದೆ. ನನ್ನ ಕೆಲಸ ನಾನು ಮಾಡಲು ಬಿಡಿ, ನನ್ನ ಕೆಲಸ ತಡೆಯಲು ಬರಬೇಡಿ,'' ಎಂದು ಎಚ್ಚರಿಕೆ ನೀಡಿದರು.
ಕುಮಾರಸ್ವಾಮಿಗೆ ನೇರ ಎಚ್ಚರಿಕೆ ಕೊಟ್ಟ ಸುಮಲತಾ
ಅಂಬರೀಷ್ ಮೃತದೇಹದ ವಿಚಾರವಾಗಿ ಕುಮಾರಸ್ವಾಮಿ ಹೇಳಿಕೆ ಹಿನ್ನೆಲೆ, ಮಾಜಿ ಸಿಎಂ ಕುಮಾರಸ್ವಾಮಿಗೆ ನೇರ ಎಚ್ಚರಿಕೆ ಕೊಟ್ಟ ಸಂಸದೆ ಸುಮಲತಾ, "ಈ ರೀತಿ ರಾಜಕಾರಣದಿಂದಲೇ ಕಳೆದ ಚುನಾವಣೆಯಲ್ಲಿ ಜನ ಸೋಲಿಸಿದ್ದಾರೆ. ಇದು ಮುಂದುವರೆದರೆ ಅವರ ರಾಜಕಾರಣ ಇಲ್ಲಿಗೆ ಅಂತ್ಯವಾಗುತ್ತದೆ,'' ಎಂದು ಮಾಜಿ ಸಿಎಂ ಎಚ್ಡಿಕೆಗೆ ತಿರುಗೇಟು ನೀಡಿದರು.
ಮಂಡ್ಯದಲ್ಲಿ ಸೋಲಿಸಿದ್ದೀರಿ, ಮುಂದೆ ಅಲ್ಲಿಂದಲೇ ರಾಜಕೀಯ ಆರಂಭ ಎಂಬ ಎಚ್ಡಿಕೆ ಹೇಳಿಕೆ ವಿಚಾರವಾಗಿ, "ಜೆಡಿಎಸ್ ಮಂಡ್ಯದಲ್ಲಿ ಮಾತ್ರ ಸೋತಿಲ್ಲ, ಹಾಸನ ಬಿಟ್ಟು ಎಲ್ಲಿಯೂ ಗೆದ್ದಿಲ್ಲ,'' ಎಂದು ಟಾಂಗ್ ನೀಡಿದರು.
ಕೆಆರ್ಎಸ್ ಜಲಾಶಯಕ್ಕೆ ಡ್ಯಾಮೇಜ್
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಚೆನ್ನನಕೆರೆ ಪ್ರದೇಶಕ್ಕೆ ಭೇಟಿ, ಪರಿಶೀಲನೆ ನಡೆಸಿದ ಸಂಸದೆ ಸುಮಲತಾ ಅಂಬರೀಶ್, "ಗಣಿಗಾರಿಕೆಯಿಂದಲೇ ಕೆಆರ್ಎಸ್ ಜಲಾಶಯಕ್ಕೆ ಡ್ಯಾಮೇಜ್ ಆಗುತ್ತಿದೆ,'' ಎಂದರು. ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಿರುವ ಸಂಸದೆ ಸುಮಲತಾ ನಡೆಗೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸಂಸದೆ ಮುಂದೆ ಜನರು ತಮ್ಮ ಸಮಸ್ಯೆ, ಅಳಲು ತೋಡಿಕೊಂಡಿದ್ದು, ಸಂಸದೆಗೆ ಜಿಲ್ಲಾಧಿಕಾರಿ, ಗಣಿ ಅಧಿಕಾರಿಗಳು, ಸ್ಥಳೀಯ ಅಧಿಕಾರಿಗಳ ಸಾಥ್ ನೀಡಿದರು.
ಸಂಸದೆಗೆ ಹೆಚ್ಚುವರಿ ಭದ್ರತೆ
ಗಣಿ ಪ್ರದೇಶಗಳಿಗೆ ಸಂಸದೆ ಸುಮಲತಾ ಭೇಟಿ ಹಿನ್ನೆಲೆಯಲ್ಲಿ ಸಂಸದರಿಗೆ ಪೊಲೀಸ್ ಇಲಾಖೆ ವಿಶೇಷ ಭದ್ರತೆ ಒದಗಿಸಿತ್ತು. ಹೆಚ್ಚುವರಿಯಾಗಿ ಮಹಿಳಾ ಪೊಲೀಸರು, ಡಿಎಆರ್ ತುಕಡಿ ನಿಯೋಜನೆ ಮಾಡಲಾಗಿತ್ತು.
ಸುಮಲತಾ ವಿರುದ್ಧ ಎಚ್ಡಿಕೆ ಹೇಳಿಕೆ ಕುರಿತು ಚೆನ್ನನಕೆರೆ ಜನರು ಬೇಸರ ವ್ಯಕ್ತಪಡಿಸಿದ್ದಾರೆ. ಮಾಜಿ ಸಿಎಂ ಎಚ್ಡಿಕೆ, ರವೀಂದ್ರ ಶ್ರೀಕಂಠಯ್ಯ ಹೇಳಿಕೆಗೆ ಗ್ರಾಮಸ್ಥರು ಖಂಡಿಸಿದ್ದಾರೆ. ಕುಮಾರಸ್ವಾಮಿ ವಿರುದ್ಧ ಹೋರಾಟ ಮಾಡಬೇಕು. ಮಹಿಳೆಗೆ ಗೌರವ ಕೊಡದೆ ಮಾತನಾಡಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.
Recommended Video
ಅಕ್ರಮ ಗಣಿಗಾರಿಕೆ ನಡೆಯುತ್ತಿದೆ
ಮಂಡ್ಯದ ಇಂಡುವಾಳು ಗ್ರಾಮದಲ್ಲಿ ಸುಮಲತಾ ಮಾತನಾಡಿ, "ಅಕ್ರಮ ಗಣಿ ಸ್ಥಳ ಭೇಟಿ ಹಠಾತ್ ನಿಗದಿಯಾಗಿದ್ದಲ್ಲ, ಯಾರಿಗೂ ಸಾಬೀತು ಮಾಡುವ ಉದ್ದೇಶ ಈ ಭೇಟಿಯದ್ದಲ್ಲ. ದಿಶಾ ಸಭೆಯಲ್ಲೇ ಈ ಭೇಟಿ ತೀರ್ಮಾನವಾಗಿತ್ತು. ಯಾರನ್ನೂ ನಾನು ಮೆಚ್ಚಿಸುವ ಕೆಲಸ ಮಾಡಲ್ಲ. ಯಾರು ಏನೇ ಹೇಳಿಕೆ ಕೊಟ್ಟರೂ ನಾನು ಕೇರ್ ಮಾಡಲ್ಲ. ಕದ್ದು ಮುಚ್ಚಿ ರಾತ್ರಿ ವೇಳೆ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಹಲವು ಬಾರಿ ಜೋರಾದ ಶಬ್ದ ಅಲ್ಲಿಂದ ಕೇಳಿಬಂದಿದೆ. ಜನ ನನ್ನನ್ನು ಕೇಳಿದಾಗ ನಾನು ಕ್ರಮ ತೆಗೆದುಕೊಳ್ಳಬಾರದೆ?,'' ಎಂದು ಪ್ರಶ್ನಿಸಿದರು.