ಮಂಡ್ಯದಲ್ಲಿ ಪತ್ರಕರ್ತರ ಮೇಲೆ ಹಲ್ಲೆ ಖಂಡಿಸಿದ ಸಂಸದೆ ಸುಮಲತಾ
ಮಂಡ್ಯ, ಏಪ್ರಿಲ್ 25: ಮಂಡ್ಯದಲ್ಲಿ ಕೊರೊನಾ ಪರೀಕ್ಷೆ ವೇಳೆ ಪತ್ರಕರ್ತರ ಮೇಲೆ ಹಲ್ಲೆ ಕುರಿತು ಸಂಸದೆ ಸುಮಲತಾ ಪ್ರತಿಕ್ರಿಯಿಸಿದ್ದಾರೆ. ಕೊರೊನಾ ಪರೀಕ್ಷೆ ನಡೆಸುತ್ತಿದ್ದ ವೇಳೆ ಅಡ್ಡಿಪಡಿಸಿ, ಗಲಾಟೆ ಮಾಡಿದ ಎಂಎಲ್ ಸಿ ಕೆ.ಟಿ ಶ್ರೀಕಂಠೇಗೌಡ ಹಾಗೂ ಅವರ ಪುತ್ರನ ವಿರುದ್ಧ ಕಿಡಿಕಾರಿದ್ದಾರೆ. ಈ ರೀತಿ ಗೂಂಡಾಗಿರಿ ಮಾಡಿ ಗಲಾಟೆ ಮಾಡುವವರಿಗೆ ಎಂಎಲ್ ಸಿ ಆಗಿ ಮುಂದುವರೆಯಲು ಯಾವ ಅರ್ಹತೆ ಇದೆ ಎಂದಿದ್ದಾರೆ.
ಇಂದು ಬೆಳಿಗ್ಗೆ ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಕೊರೊನಾ ವೈರಸ್ ಪತ್ತೆ ಪರೀಕ್ಷೆಯನ್ನು ಆಯೋಜಿಸಲಾಗಿತ್ತು. ಪತ್ರಕರ್ತರು ಇಲ್ಲಿ ಪರೀಕ್ಷೆ ಮಾಡಿಸಿಕೊಳ್ಳಲು ಬಂದಿದ್ದರು.
ಪತ್ರಕರ್ತರ ಮೇಲೆ ಹಲ್ಲೆ ಮಾಡಿದ ಶಾಸಕನ ಮಗ
ಈ ಸಂದರ್ಭ ಜೆಡಿಎಸ್ ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಅವರ ಮಗ ಆ ಜಾಗದಲ್ಲಿ ಪರೀಕ್ಷೆ ನಡೆಸದಂತೆ ದಾಂಧಲೆ ನಡೆಸಿದ್ದಾರೆ. ಶ್ರೀಕಂಠೇಗೌಡ ಮಗ ಕೃಷಿ ಗೌಡ ಪತ್ರಕರ್ತರೊಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ.
ದಾಂಧಲೆ ನಡೆಸಿರುವ ಜೆಡಿಎಸ್ ಎಂಎಲ್ ಸಿ ಶ್ರೀಕಂಠೇಗೌಡ ಅವರ ಪುತ್ರ ಮತ್ತು ಇತರ ಮೂವರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ಮಂಡ್ಯದ ಪಶ್ಚಿಮ ಠಾಣೆಯಲ್ಲಿ ಐಪಿಸಿ ಸೆಕ್ಷನ್ 143, 147, 341,323,501,114,269, 270 ಅಡಿಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.