ಮೈಶುಗರ್ ಖಾಸಗೀಕರಣ ವಿರೋಧಿಗಳಿಗೆ ಸಂಸದೆ ಸುಮಲತಾ ತಿರುಗೇಟು!
ಮಂಡ್ಯ, ಜೂನ್ 18: ಮೈಶುಗರ್ ಒ ಅಂಡ್ ಎಂ ನ್ನು ಖಾಸಗಿಯರಿಗೆ ವಹಿಸುವ ವಿಚಾರ ಮಂಡ್ಯದಲ್ಲಿ ರಾಜಕೀಯ ಸ್ವರೂಪ ಕಂಡುಕೊಂಡಿದ್ದು, ಪರ ವಿರೋಧಗಳು ಚರ್ಚೆಗಳು ಆರಂಭಗೊಂಡಿವೆ.
Recommended Video
ಸರ್ಕಾರವು ಮೈಶುಗರ್ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸುವ ನಿರ್ಧಾರಕ್ಕೆ ಜಿಲ್ಲೆಯಲ್ಲಿ ಸಂಸದೆ ಸುಮಲತಾ ಸೇರಿದಂತೆ ಹಲವು ನಾಯಕರು, ಕಬ್ಬು ಬೆಳೆಗಾರರು ಬೆಂಬಲ ವ್ಯಕ್ತಪಡಿಸಿದ್ದರೆ, ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ವಿರೋಧ ವ್ಯಕ್ತಪಡಿಸಿತ್ತು. ಆದರೆ ಇದೀಗ ಹೊಸ ಬೆಳವಣಿಗೆಯಲ್ಲಿ ರೈತ ಹಿತರಕ್ಷಣಾ ಸಮಿತಿ ಹಿರಿಯ ನಾಯಕರಾದ ಎಚ್.ಡಿ.ಚೌಡಯ್ಯ ಹಾಗೂ ಆತ್ಮಾನಂದ ಅವರು ಸುಮಲತಾ ಅವರಿಗೆ ಸಾಥ್ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.
ಮೈ ಶುಗರ್ ಕಾರ್ಖಾನೆ ಖಾಸಗೀಕರಣಕ್ಕೆ ಯದುವೀರ್ ಒಡೆಯರ್ ಬೆಂಬಲ
ಈ ನಡುವೆ ಒ ಅಂಡ್ ಎಂ ಮುಖಾಂತರ ಮೈಶುಗರ್ ಆರಂಭಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದು, ಅಂತಹವರಿಗೆ ಒ ಅಂಡ್ ಎಂ ಮುಖಾಂತರ ಮೈಶುಗರ್ ಆರಂಭಕ್ಕೆ ಒತ್ತಾಯಿಸಿ ವಿವಿಧ ಸಂಘಟನೆಗಳು ನಡೆಸಿದ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದೆ ಸುಮಲತಾ ಅವರು ವಿರೋಧಿಗಳಿಗೆ ಖಡಕ್ ಉತ್ತರ ನೀಡಿದ್ದಾರೆ.
ಕಾರ್ಖಾನೆ ಆರಂಭವಾಗುವುದನ್ನು ತಡೆಯುವುದು ಅವರ ಉದ್ದೇಶ
ಕಾರ್ಖಾನೆ ಬಂದ್ ಆಗಿದ್ದಾಗ, ಪಾಳು ಬಿದ್ದ ಸಮಯದಲ್ಲಿ ಬಾಯಿ ಮುಚ್ಚಿಕೊಂಡಿದ್ದವರು ಕಾರ್ಖಾನೆ ಆರಂಭವಾಗುತ್ತಿರುವ ಹೊತ್ತಿನಲ್ಲಿ ಕೋಪ, ರೋಷ, ಆವೇಶದೊಂದಿಗೆ ಹೋರಾಟಕ್ಕಿಳಿದಿದ್ದಾರೆ. ಇದು ಅವರ ಸ್ವಾರ್ಥ ರಾಜಕಾರಣಕ್ಕೆ ಸಾಕ್ಷಿಯಾಗಿದೆ. ಹೋರಾಟದ ನೆಪದಲ್ಲಿ ಕಾರ್ಖಾನೆ ಆರಂಭವಾಗುವುದನ್ನು ತಡೆಯುವುದು ಅವರ ಮೂಲ ಉದ್ದೇಶವೆಂದು ಕಿಡಿಕಾರಿದರು.
ಸ್ವಾರ್ಥ ರಾಜಕಾರಣದಿಂದ ಏನನ್ನೂ ಸಾಧಿಸಿದಂತಾಗುವುದಿಲ್ಲ, ಸರ್ಕಾರಿ ಸ್ವಾಮ್ಯದಲ್ಲಿ ಕಾರ್ಖಾನೆ ಆರಂಭವಾಗದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಹೇಳುತ್ತಿದ್ದಾರೆ. ಉಗ್ರ ಹೋರಾಟ ಎಂಬ ಮಾತನ್ನು ಹೇಳುವ ನೈತಿಕತೆ ನಿಮಗಿಲ್ಲ. ಗಡಿಯಲ್ಲಿ ಶತ್ರು ಸೈನ್ಯದೊಂದಿಗೆ ನಮ್ಮ ಸೈನಿಕರು ನಡೆಸುತ್ತಿರುವುದು ನಿಜವಾದ ಹೋರಾಟ. ಆ ಮಾತನ್ನು ನೀವು ಹೇಳಿದರೆ ಸೈನಿಕರಿಗೆ ಮಾಡುವ ಅವಮಾನ ಹಾಗೂ ರೈತರಿಗೆ ಮಾಡುವ ದ್ರೋಹ ಎಂದು ಹೇಳಿದರು.
ಕಾರ್ಖಾನೆಯಲ್ಲಿ ಭ್ರಷ್ಟಾಚಾರ, ಅವ್ಯವಹಾರ ನಡೆದಿದೆ
ಸರ್ಕಾರಿ ಸ್ವಾಮ್ಯದಲ್ಲೇ ಕಾರ್ಖಾನೆ ಇಷ್ಟು ವರ್ಷ ನಡೆದರೂ ಪುನಶ್ಚೇತನ ಕಾಣಲಿಲ್ಲ. ಸರ್ಕಾರಗಳು ಬಿಡುಗಡೆ ಮಾಡಿದ ೪೫೦ ಕೋಟಿಗೂ ಹೆಚ್ಚು ಹಣ ಎಲ್ಲಿ ಹೋಯಿತು ಎನ್ನುವುದು ಯಾರಿಗೂ ಗೊತ್ತಿಲ್ಲ. ಯಾರೂ ಊಹೆ ಮಾಡದ ರೀತಿಯಲ್ಲಿ ಭ್ರಷ್ಟಾಚಾರ, ಅವ್ಯವಹಾರ ನಡೆದಿದೆ. ಮತ್ತೆ ಸರ್ಕಾರವೇ ಕಾರ್ಖಾನೆಯನ್ನು ನಡೆಸಬೇಕು ಎನ್ನುವುದರಲ್ಲಿ ಯಾವ ಅರ್ಥವಿದೆ. ಇದರ ಹಿಂದಿನ ಲಾಭ, ಪದವಿ, ಪಕ್ಷಗಳ ಒತ್ತಡವಿದೆಯೇ ಎಂಬ ಬಗ್ಗೆ ಹೋರಾಟಗಾರರು ಉತ್ತರಿಸಬೇಕು ಎಂದರು.
ಮೈಷುಗರ್ ನಲ್ಲಿ ಹಣ ದುರುಪಯೋಗ ಬಹಿರಂಗಪಡಿಸುವ ಸವಾಲು!
ಇಂದು ಹೋರಾಟ ನಡೆಸುತ್ತಿರುವವರೆಲ್ಲರ ಸಹಮತ ಅಂದು ಇತ್ತು
ಮೈಶುಗರ್ ಕಾರ್ಖಾನೆ ಹೋರಾಟವನ್ನು ಕಾವೇರಿ ಚಳವಳಿಯ ಹಾದಿ ಹಿಡಿಸುತ್ತಿದ್ದಾರೆ. ನೂರಾರು ವರ್ಷಗಳಾದರೂ ಬಗೆಹರಿಸಲಾಗದ ಜಟಿಲ ಸಮಸ್ಯೆ ಮಾಡುವ ಪ್ರಯತ್ನವಿದು. ಹಿಂದಿನ ಸರ್ಕಾರದ ಅವಧಿಯಲ್ಲೇ ಮೈಶುಗರ್ ಒ ಅಂಡ್ ಎಂ ಮೂಲಕ ನಡೆಸುವುದಕ್ಕೆ ಅಂದಿನ ಸಿಎಂ ನಿರ್ಧರಿಸಿದ್ದರು. ಅದಕ್ಕೆ ಇಂದು ಹೋರಾಟ ನಡೆಸುತ್ತಿರುವವರೆಲ್ಲರ ಸಹಮತವಿತ್ತು. ಒಂದು ಸರ್ಕಾರವಿದ್ದಾಗ ಒಂದು ನಿಲುವನ್ನು ಪ್ರದರ್ಶಿಸಿದವರು, ಈಗ ಇನ್ನೊಂದು ಸರ್ಕಾರವಿರುವಾಗ ಮತ್ತೊಂದು ನಿಲುವು ಪ್ರದರ್ಶಿಸುತ್ತಿರುವ ಉದ್ದೇಶವೇನು? ಎಂದು ಪ್ರಶ್ನಿಸಿದರು.
ರೈತರು ಆತ್ಮಹತ್ಯೆಗೆ ಶರಣಾದರೆ ಅದಕ್ಕೆ ನೀವೇ ಹೊಣೆಯಾಗುತ್ತೀರಿ
ಇಂತಹ ದ್ವಂದ್ವ ನಿಲುವಿನ ಹೋರಾಟದಿಂದ ಯಾರನ್ನೂ ಮೋಸಗೊಳಿಸುವುದಕ್ಕೆ ಸಾಧ್ಯವಿಲ್ಲ. ಇದನ್ನು ಹೋರಾಟಗಾರರು ಅರ್ಥ ಮಾಡಿಕೊಳ್ಳಬೇಕು. ಮೈಶುಗರ್ ಕಾರ್ಖಾನೆ ಆರಂಭವಾಗದೆ ಹಲವು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೀವು ಮಾಡುವ ಅಡಚಣೆಯಿಂದ ಕಾರ್ಖಾನೆ ಈಗಲೂ ಆರಂಭಗೊಳ್ಳದೆ ಇನ್ನಷ್ಟು ರೈತರು ಆತ್ಮಹತ್ಯೆಗೆ ಶರಣಾದರೆ ಅದಕ್ಕೆ ನೀವೇ ಹೊಣೆಯಾಗುತ್ತೀರಿ ಎಂದು ಎಚ್ಚರಿಸಿದರು. ನನ್ನ ಹೋರಾಟ ರೈತರ ಪರವಾಗಿದೆ. ಕಾರ್ಖಾನೆಯನ್ನು ಆರಂಭಿಸುತ್ತಿರುವ ಉದ್ದೇಶವೂ ಒಳ್ಳೆಯದೇ ಆಗಿದೆ. ಹಾಗಾಗಿ ನಾವು ಯಾರಿಗೂ ಹೆದರುವುದಿಲ್ಲ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಖಡಕ್ ತಿರುಗೇಟು ನೀಡಿದ್ದಾರೆ.