ರಾಜಕಾರಣದ ಡೆಡ್ ಲೈನ್ ಅರಿತ ಸುಮಲತಾ!
ಮೈಸೂರು, ಮೇ 31: ಭಾರೀ ಪೈಪೋಟಿ ನಡುವೆಯೂ ಚುನಾವಣೆಯಲ್ಲಿ ಗೆದ್ದು ಸಂಸದೆಯಾಗಿರುವ ಸುಮಲತಾ ಅಂಬರೀಶ್ ಒಂದು ವರ್ಷವನ್ನು ಪೂರೈಸಿದ್ದಾರೆ. ಅಂಬರೀಶ್ ನಿಧನದ ನಂತರ ನೇರವಾಗಿ ರಾಜಕೀಯ ರಂಗಕ್ಕೆ ಧುಮುಕಿದ ಅವರು ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಪಡೆದದ್ದು ಇತಿಹಾಸವೇ ಸರಿ.
Recommended Video
ರಾಜಕಾರಣದಲ್ಲಿ ಯಾವುದೇ ಅನುಭವವಿಲ್ಲದೆ ಇದ್ದರೂ ಪತಿ ಅಂಬರೀಶ್ ಅವರು ರಾಜಕಾರಣದಲ್ಲಿ ಸಕ್ರಿಯರಾಗಿದ್ದುದರಿಂದ ಹತ್ತಿರದಿಂದ ನೋಡಿ ತಿಳಿದುಕೊಂಡಿದ್ದರು. ಅಂಬರೀಶ್ ನಿಧನದ ನಂತರ ಸುಮಲತಾ ರಾಜಕೀಯಕ್ಕೆ ಬರುತ್ತಾರೆಂದು ಯಾರೂ ನಂಬಿರಲಿಲ್ಲ. ಆದರೆ ಮಂಡ್ಯದ ರಾಜಕೀಯ ಪರಿಸ್ಥಿತಿ ಸುಮಲತಾರನ್ನು ರಾಜಕೀಯ ಅಖಾಡಕ್ಕಿಯುವಂತೆ ಮಾಡಿತು. ಅವತ್ತಿನ ರಾಜಕೀಯ ಪರಿಸ್ಥಿತಿ ರಾಜ್ಯದಲ್ಲಿ ಒಂದಷ್ಟು ಗಂಭೀರವಾಗಿತ್ತು. ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಯಾಗಿ ಸರ್ಕಾರ ರಚನೆ ಮಾಡಿದ್ದವು. ಎಚ್.ಡಿ.ಕುಮಾರಸ್ವಾಮಿ ಅವರು ತನ್ನ ಪುತ್ರನನ್ನು ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಇರಾದೆ ವ್ಯಕ್ತಪಡಿಸಿದ್ದರು. ಇದಕ್ಕೆ ರಾಜ್ಯಮಟ್ಟದ ಕೈ ನಾಯಕರು ಹಸಿರು ನಿಶಾನೆ ತೋರಿದ್ದರು. ಹೀಗಾಗಿ ಸಂದಿಗ್ಧ ಪರಿಸ್ಥಿತಿಯಲ್ಲಿದ್ದ ಕಾಂಗ್ರೆಸ್ ಸುಮಲತಾರಿಗೆ ಟಿಕೆಟ್ ನೀಡುವಲ್ಲಿ ಹಿಂದೇಟು ಹಾಕಿತ್ತು. ಇದು ಅಂಬರೀಶ್ ಅವರನ್ನು ಇಷ್ಟಪಡುವ ಅಭಿಮಾನಿಗಳು, ಮಂಡ್ಯದ ಸ್ಥಳೀಯ ಕೈ ನಾಯಕರ ಆಕ್ರೋಶಕ್ಕೂ ಕಾರಣವಾಗಿತ್ತು.
ಉಪ ಚುನಾವಣೆ ಹೊಸ್ತಿಲಲ್ಲಿ ಸಂಸದೆ ಸುಮಲತಾ ಅಚ್ಚರಿಯ ನಡೆ!
ಜಾಣತನ ಮೆರೆದ ಬಿಜೆಪಿ ನಾಯಕರು
ಈ ನಡುವೆ ಯಾವಾಗ ಸುಮಲತಾ ಅವರು ಪಕ್ಷೇತರರಾಗಿ ಅಖಾಡಕ್ಕಿಳಿಯುತ್ತಾರೆ ಎಂಬುದು ಗೊತ್ತಾಗುತ್ತಿದ್ದಂತೆಯೇ ತಮ್ಮ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಸುಮಲತಾರಿಗೆ ಬೆಂಬಲ ಘೋಷಿಸಿ ಬಿಜೆಪಿ ಜಾಣತನ ಮೆರೆದಿತ್ತು. ಜೆಡಿಎಸ್ ನ ವಿರೋಧಿಸುತ್ತಾ ಬಂದಿದ್ದ ಬಹಳಷ್ಟು ಕಾಂಗ್ರೆಸ್ ನಾಯಕರು ಪರೋಕ್ಷ ಹಾಗೂ ಪ್ರತ್ಯಕ್ಷವಾಗಿಯೇ ಸುಮಲತಾ ಅವರನ್ನು ಬೆಂಬಲಿಸಿದ್ದರಿಂದ ಗೆಲುವು ಪಡೆದು ಸಂಸದರಾದರು. ಇದೊಂದು ಮಂಡ್ಯ ರಾಜಕಾರಣದಲ್ಲಿ ಯಾರೂ ಮರೆಯಲಾರದ ಘಟನೆ ಎಂದರೆ ತಪ್ಪಾಗಲಾರದು. ಪಕ್ಷೇತರ ಅಭ್ಯರ್ಥಿಯಾಗಿರುವ ಸುಮಲತಾ ಅವರು ಕಳೆದ ಒಂದು ವರ್ಷದ ಅವಧಿಯಲ್ಲಿ ರಾಜಕಾರಣದಲ್ಲಿ ಸಾಕಷ್ಟು ಅನುಭವ ಪಡೆದಿದ್ದಾರೆ. ಜತೆಗೆ ಯಾವುದೇ ಪಕ್ಷದ ನಾಯಕರೊಂದಿಗೆ ಭಿನ್ನಾಭಿಪ್ರಾಯಕ್ಕೆ ಅವಕಾಶ ಮಾಡಿಕೊಡದೆ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಿಕೊಂಡು ಬಂದಿದ್ದಾರೆ. ಬಿಜೆಪಿಯ ರಾಷ್ಟ್ರೀಯ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಅವರು ಮಂಡ್ಯಕ್ಕೆ ಅಭಿವೃದ್ಧಿಗೆ ಏನು ಬೇಕೋ ಅದನ್ನು ಮಾಡಿಸಿಕೊಳ್ಳುವ ತಯಾರಿಯಲ್ಲಿದ್ದಾರೆ.
ಮಿನಿ ಸಮರದಲ್ಲಿ ಯಾರ ಋಣ ತೀರಿಸುತ್ತಾರೋ ಮಂಡ್ಯ ಗೌಡ್ತಿ?
ರಾಜಕಾರಣದ ಒಳಪಟ್ಟು ಅರಿತ ಸುಮಲತಾ
ರಾಜಕೀಯ ಕ್ಷೇತ್ರ, ಕಲಿಕೆಯ ಕ್ಷೇತ್ರ ಎಂದು ಮಾತಿಗೆ ಹೇಳುತ್ತಾರೆಯಾದರೂ ಅದರ ಒಳಪಟ್ಟುಗಳನ್ನೆಲ್ಲ ಸುಮಲತಾ ಚೆನ್ನಾಗಿಯೇ ಅರಿತುಕೊಂಡಿದ್ದಾರೆ ಎನ್ನುವುದು ಅವರ ಒಂದು ವರ್ಷದ ಅವಧಿಯಲ್ಲಿ ಮಾಡಿದ ಕೆಲಸ ಮತ್ತು ನಡಾವಳಿಗಳು ಹೇಳುತ್ತಿವೆ. ಇದೆಲ್ಲದರ ನಡುವೆ ಮಂಡ್ಯದಲ್ಲಿ ಮಾತನಾಡಿದ ಅವರು ರಾಜಕಾರಣದಲ್ಲಿ ಯಾವುದೇ ಡೆಡ್ ಲೈನ್ ಹಾಕಿಕೊಂಡು ಕೆಲಸ ಮಾಡಲು ಸಾಧ್ಯವಿಲ್ಲ. ಇದು ನಿರಂತರ ಕಲಿಕಾ ಕ್ಷೇತ್ರವಾಗಿರುವುದರಿಂದ ನಾನೂ ಅದೇ ಹಾದಿಯಲ್ಲಿ ಸಾಗುತ್ತಿದ್ದೇನೆ ಎಂದು ಹೇಳಿದ್ದಾರೆ. ಸಂಸದೆಯಾದ ಒಂದೇ ವರ್ಷಕ್ಕೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದಿಲ್ಲ ಎಂಬುದನ್ನು ಒಪ್ಪಿಕೊಂಡಿರುವ ಅವರು ಕ್ಷೇತ್ರದಲ್ಲಿ ಪ್ರವಾಸ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಂಡ್ಯ ಜಿಲ್ಲಾಡಳಿತದ ಕಾರ್ಯಕ್ಕೆ ಶ್ಲಾಘನೆ
ಇನ್ನು ಸಂಸದರ ನಿಧಿ ಬಳಕೆಗೆ ಸಂಬಂಧಿಸಿದಂತೆ ಮಾತನಾಡಿರುವ ಅವರು, ಸಂಸದರ ನಿಧಿ ಬಳಕೆಯಲ್ಲಿ ಮಂಡ್ಯ ಜಿಲ್ಲೆ ಪ್ರಥಮ ಸ್ಥಾನದಲ್ಲಿರುವುದರ ಬಗ್ಗೆ ಮಾಹಿತಿ ನೀಡಿ, ಇದು ನಮ್ಮ ಕಾರ್ಯವೈಖರಿಯನ್ನು ಸಾಬೀತುಪಡಿಸುತ್ತದೆ ಎನ್ನುವ ಮೂಲಕ ಅಧಿಕಾರವನ್ನು ಸದ್ಬಳಕೆ ಮಾಡಿಕೊಂಡಿರುವ ಕುರಿತಂತೆ ಸಮರ್ಥಿಸಿಕೊಂಡಿದ್ದಾರೆ.
ಇನ್ನೊಂದೆಡೆ ಮಂಡ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳ ಕುರಿತಂತೆ ಜೆಡಿಎಸ್ ನಾಯಕರು ಜಿಲ್ಲಾಡಳಿತದ ವಿರುದ್ಧ ಹರಿಹಾಯುತ್ತಿದ್ದರೆ, ಇತ್ತ ಸುಮಲತಾ ಕೋವಿಡ್-19 ನಿಯಂತ್ರಣ ಕುರಿತಂತೆ ಜಿಲ್ಲಾಧಿಕಾರಿ ಹಾಗೂ ಅಧಿಕಾರಿ ವರ್ಗ ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡಿದೆ. ಆಸಕ್ತಿಯಿಂದ ಕೆಲಸ ಮಾಡದೆ ಇದ್ದಿದ್ದರೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಸೋಂಕು ಹರಡುವ ಸಾಧ್ಯತೆಗಳಿತ್ತು. ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಹರಡಿಲ್ಲ. ಮುಂಬೈನಿಂದ ಬಂದವರಲ್ಲಿ ಮಾತ್ರ ಸೋಂಕು ಕಾಣಿಸಿಕೊಂಡಿದೆ. ಅದು ಜಿಲ್ಲಾದ್ಯಂತ ಹರಡದಂತೆ ಮುನ್ನೆಚ್ಚರಿಕೆ ವಹಿಸಿದ್ದ ಕಾರಣ ಹೆಚ್ಚಿನ ಅನಾಹುತಗಳು ಸಂಭವಿಸಿಲ್ಲ ಎಂದು ಅಧಿಕಾರಿಗಳನ್ನು ಸಮರ್ಥಿಸಿಕೊಳ್ಳುವ ಮೂಲಕ ಜಿಲ್ಲಾಡಳಿತಕ್ಕೆ ಇನ್ನಷ್ಟು ಬಲ ತುಂಬಿದ್ದಾರೆ.ಕುತೂಹಲಕಾರಿ ರಾಜಕೀಯ ನಡೆ
ಬೇರೆ ರಾಜಕೀಯ ನಾಯಕರಂತೆ ಮಾತುಗಳನ್ನು ಹರಿಯಬಿಡದೆ ಸಮಯ, ಸಂದರ್ಭಕ್ಕೆ ತಕ್ಕಂತೆ ತಿರುಗೇಟು ನೀಡುವುದನ್ನು ಅಭ್ಯಸಿಸಿಕೊಂಡಿರುವ ಸುಮಲತಾರವರು ಇಲ್ಲಿವರೆಗೆ ಸಾಗಿ ಬಂದ ಹಾದಿಯಲ್ಲಿ ಹೆಚ್ಚಿನ ವಿಶೇಷತೆ ಏನೂ ಕಾಣಿಸದಿದ್ದರೂ ಮುಂದಿನ ದಿನಗಳಲ್ಲಿ ಅವರು ಎಚ್ಚರಿಕೆಯ ಹೆಜ್ಜೆಯನ್ನಿಡಬೇಕಾಗುತ್ತದೆ. ಜನ ಕೂಡ ಅವರಿಂದ ಬಹಳಷ್ಟು ನಿರೀಕ್ಷೆ ಮಾಡಿರುವುದರಿಂದ ಅದೆಲ್ಲವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.