"ಧಾರವಾಡ ಪೇಡಾ, ಮೈಸೂರು ಪಾಕ್ನಂತೆ ಮಂಡ್ಯದ ಬೆಲ್ಲವೂ ಫೇಮಸ್ ಆಗಬೇಕು''
ಮಂಡ್ಯ, ಜನವರಿ 29: ಮಂಡ್ಯ ಜಿಲ್ಲೆಯ ಬೆಲ್ಲಕ್ಕೆ ಬ್ರ್ಯಾಂಡ್ ರೂಪ ನೀಡುವಲ್ಲಿ ನಾವು ಸೋತಿದ್ದೇವೆ. ಧಾರವಾಡ ಪೇಡಾ, ಮೈಸೂರು ಪಾಕ್ನಂತೆ ಮಂಡ್ಯದ ಬೆಲ್ಲ ಎಂಬ ಬ್ರ್ಯಾಂಡ್ ರೂಪ ಸಿಗಬೇಕು ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು.
ಬ್ರ್ಯಾಂಡ್ ರೂಪ ಸಿಗಬೇಕಾದರೆ ಅಂತಾರಾಷ್ಟ್ರೀಯ ಗುಣಮಟ್ಟದ ಬೆಲ್ಲ ಉತ್ಪಾದನೆಗೆ ಆದ್ಯತೆ ನೀಡಬೇಕು ಸಂಸದೆ ಸುಮಲತಾ ಅಂಬರೀಶ್ ಅಭಿಪ್ರಾಯಪಟ್ಟಿದ್ದಾರೆ.
ಒಂದು ಜಿಲ್ಲೆ ಒಂದು ಉತ್ಪನ್ನ: ಮಂಡ್ಯದ ಬೆಲ್ಲಕ್ಕೆ ಬರಲಿದೆಯಾ ಶುಕ್ರದೆಸೆ?
ಕೇಂದ್ರ ಸರ್ಕಾರದ ಆತ್ಮ ನಿರ್ಭರ ಭಾರತ ಯೋಜನೆ ಅಡಿ ಮಂಡ್ಯ ಜಿಲ್ಲೆಯಲ್ಲಿ ಆಲೆಮನೆಗಳ ಪುನಶ್ಚೇತನದೊಂದಿಗೆ ಮಂಡ್ಯ ಬೆಲ್ಲಕ್ಕೆ ಉತ್ತೇಜನ ನೀಡುವ ಅಗತ್ಯವಿದೆ ಎಂದರು. ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಮಂಡ್ಯ ಜಿಲ್ಲೆಯ ಆಲೆಮನೆಗಳ ಪುನಶ್ಚೇತನ ಕೈಗೊಳ್ಳುವ ಸಂಬಂಧ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಸಭೆಯಲ್ಲಿ ಮಾತನಾಡಿದರು.
ಈ ವೇಳೆ ಸಣ್ಣ ಲಾಭಗಳ ಬಗ್ಗೆ ಯೋಚಿಸುವುದರಿಂದ ಪ್ರಯೋಜನವಿಲ್ಲ. ಬ್ರಾಂಡಿಂಗ್, ಪ್ರಮೋಟಿಂಗ್, ಮಾರ್ಕೆಟಿಂಗ್ನೊಂದಿಗೆ ರೈತರಿಗೆ ದೊಡ್ಡಮಟ್ಟದ ಲಾಭ ದೊರಕುವಂತೆ ಮಾಡಬೇಕು.
ಯೂರೋಪ್ ದೇಶಗಳಲ್ಲಿ 1 ಕೆಜಿ ಬೆಲ್ಲಕ್ಕೆ 1 ಸಾವಿರದವರೆಗೂ ಬೆಲೆ ಇದೆ. ನಮ್ಮ ಜಿಲ್ಲೆಯಲ್ಲಿ ಹೆಚ್ಚಾಗಿ ಉತ್ಪಾದಿಸುವ ಬೆಲ್ಲಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧಿಸುವ ಎಲ್ಲಾ ಅವಕಾಶಗಳಿವೆ ಎಂದು ಹೇಳಿದರು.
ಈಗಾಗಲೇ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆಯ ಯೋಜನೆಯಲ್ಲಿ "ಒಂದು ಜಿಲ್ಲೆ ಒಂದು ಉತ್ಪನ್ನ'ದಡಿ ಮಂಡ್ಯದ ಬೆಲ್ಲಕ್ಕೆ ಮಾನ್ಯತೆ ನೀಡಲಾಗಿದೆ. ಇದರಿಂದ ಸಕ್ಕರೆ ಕಾರ್ಖಾನೆಗಳ ಹೊಡೆತದ ನಡುವೆಯೂ ಕಬ್ಬು ಬೆಳೆದು ಆಲೆಮನೆಯಲ್ಲಿ ಬೆಲ್ಲ ತಯಾರಿಸುತ್ತಾ ಬಂದಿರುವ ರೈತರಲ್ಲಿ ಭರವಸೆಯ ಬೆಳಕು ಮೂಡಿದೆ.