ಸ್ವಂತ ದುಡ್ಡಿನಿಂದ ಪ್ರತಿದಿನ 2,000 ಲೀ. ಆಕ್ಸಿಜನ್ ಪೂರೈಕೆಗೆ ಸಂಸದೆ ಸುಮಲತಾ ನಿರ್ಧಾರ
ಮಂಡ್ಯ, ಮೇ 5: ಕೋವಿಡ್ ಎರಡನೇ ಅಲೆ ಮಂಡ್ಯದಲ್ಲೂ ಭಾರೀ ಸವಾಲುಗಳನ್ನು ತಂದಿದೆ. ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆ ಆಡಳಿತ ವ್ಯವಸ್ಥೆ ಮತ್ತು ವೈದ್ಯಕೀಯ ಸಿಬ್ಬಂದಿ ಮೇಲೆ ಸಾಕಷ್ಟು ಒತ್ತಡ ತಂದಿದೆ.
ವೈದ್ಯರು, ವೈದ್ಯಕೀಯ ಸಿಬ್ಬಂದಿ, ಜಿಲ್ಲಾಧಿಕಾರಿಗಳು, ಜಿಲ್ಲಾಡಳಿತ, ಪೊಲೀಸ್ ಆಯುಕ್ತರು, ಪೊಲೀಸ್ ಸಿಬ್ಬಂದಿ, ಪೌರಾಡಳಿತ ಮತ್ತು ಸಿಬ್ಬಂದಿ ಅವರೆಲ್ಲರೂ ತಮ್ಮ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದು, ಮಂಡ್ಯ ಜನರ ಪರವಾಗಿ ನನ್ನ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ಪೋಸ್ಟ್ ಮಾಡಿದ್ದು, ಎಂದಿನಂತೆ ಕ್ಷೇತ್ರದ ಆಡಳಿತ ಅಧಿಕಾರಿಗಳು, ಆಸ್ಪತ್ರೆಗಳ ವೈದ್ಯಾಧಿಕಾರಿಗಳು ಹಾಗೂ ರಾಜ್ಯ ಸರ್ಕಾರದ ಮಂತ್ರಿಗಳ ಜೊತೆ ನಿತ್ಯ ಸಂಪರ್ಕದಲ್ಲಿದ್ದೇನೆ. ಪ್ರತಿದಿನ ಬೆಡ್, ಔಷಧಿ, ಆಕ್ಸಿಜನ್ ವ್ಯವಸ್ಥೆಗಾಗಿ ತುರ್ತು ಕೋರಿಕೆಗಳು ಬರುತ್ತಲೇ ಇವೆ. ಇವುಗಳನ್ನು ಸಮರೋಪಾದಿಯಲ್ಲಿ ವ್ಯವಸ್ಥೆ ಮಾಡುವ ಕೆಲಸ ಪ್ರತಿದಿನ ನಡೆಯುತ್ತಿದೆ ಎಂದಿದ್ದಾರೆ.
ಮಂಡ್ಯ ಜಿಲ್ಲಾಧಿಕಾರಿಗಳ ಜೊತೆಗೆ ವ್ಯವಸ್ಥೆ
ಕೊರೊನಾ ಎರಡನೇ ಅಲೆ ಬಂದಾಗಿನಿಂದ ಹಿಂದಿಗಿಂತಲೂ ಅತೀ ಹೆಚ್ಚಿನ ಶ್ರಮ ವಹಿಸಲಾಗುತ್ತಿದೆ. ರಾಜ್ಯದ ಆರೋಗ್ಯ ಸಚಿವ ಕೆ.ಸುಧಾಕರ್ ಅವರ ಜೊತೆಗೂ ನೇರ ಸಂಪರ್ಕದಲ್ಲಿದ್ದು, ಅವರು ಇದುವರೆಗೂ ನಮ್ಮ ಎಲ್ಲಾ ಅವಶ್ಯಕತೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಇದಕ್ಕೂ ಮಿಗಿಲಾಗಿ ಮುಂದೆ ಬರಬಹುದಾದ ಇನ್ನಷ್ಟು ಬೇಡಿಕೆಗಳಿಗೆ ಈಗಲೇ ವ್ಯವಸ್ಥೆ ಮಾಡುವ ಕೆಲಸಗಳು ನಡೆಯುತ್ತಿವೆ. ಎಂದಿನಂತೆ ಮಂಗಳವಾರ ಕೂಡ ಮಂಡ್ಯ ಜಿಲ್ಲಾಧಿಕಾರಿಗಳ ಜೊತೆಗೆ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಣೆ ಮಾಡುವ ಕುರಿತಾಗಿ ಮಾತುಕತೆ ನಡೆಸಿದೆ. ಇಂದಿನ ಸಭೆಯಲ್ಲಿ ಕೆಲವು ಮಹತ್ವದ ನಿರ್ಧಾರಗಳನ್ನು ಮಾಡಲಾಯಿತು ಎಂದು ಸಂಸದೆ ಸುಮಲತಾ ಹೇಳಿದ್ದಾರೆ.
ಪ್ರತಿದಿನ 3 ಕ್ವಿಂಟಾಲ್ ಆಕ್ಸಿಜನ್ ಕೊರತೆ
ಮಂಡ್ಯ ಜಿಲ್ಲಾಧಿಕಾರಿಗಳು ಮತ್ತು DHO ಅವರು ಮಂಡ್ಯ ಜಿಲ್ಲೆಗೆ ಪ್ರತಿದಿನ 3 ಕ್ವಿಂಟಾಲ್ ಆಕ್ಸಿಜನ್ ಕೊರತೆ ಎದುರಾಗಿದೆ ಎಂದು ನನ್ನ ಗಮನಕ್ಕೆ ತಂದರು. ಸದ್ಯದ ಪರಿಸ್ಥಿತಿಯಲ್ಲಿ ಸಂಸದರ ಫಂಡ್ ಇಲ್ಲದ ಕಾರಣ ಹಾಗೂ ಅನುದಾನದ ಮೂಲಗಳಿಂದ ದುಡ್ಡು ಒದಗಿಬರುವುದು ತಡವಾಗಬಹುದಾದ ಕಾರಣ ಸದ್ಯಕ್ಕೆ ತುರ್ತು ಪರಿಸ್ಥಿತಿಯನ್ನು ಎದುರಿಸಲು ನನ್ನ ಸ್ವಂತ ದುಡ್ಡಿನಿಂದ ಪ್ರತಿದಿನ 2,000 ಲೀಟರ್ (2KL ಆಕ್ಸಿಜನ್) ವ್ಯವಸ್ಥೆ ಮಾಡಲು ನಿರ್ಧರಿಸಿದ್ದೇನೆ. ಆಕ್ಸಿಜನ್ ಕೊರತೆಯಿಂದ ಯಾವುದೇ ಸಾವು-ನೋವು ಜಿಲ್ಲೆಯಲ್ಲಿ ಸಂಭವಿಸದಂತೆ ಅಧಿಕಾರಿಗಳಿಗೆ ಎಚ್ಚರ ವಹಿಸಲು ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.
ಮಂಡ್ಯಕ್ಕೆ ತನ್ನದೇ ಆಕ್ಸಿಜನ್ ಘಟಕ ಬೇಕು
ಆಕ್ಸಿಜನ್ ಸಿಲಿಂಡರ್ ತುಂಬಿಸುವುದಕ್ಕೆ ಹಾಸನ, ಮೈಸೂರು, ಹಾಗೂ ರಾಮನಗರಗಳಿಗೆ ಹೋಗಬೇಕಾದ ಪರಿಸ್ಥಿತಿ ಇದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಈ ಪರಿಸ್ಥಿತಿಯನ್ನು ಹೀಗೇ ಮುಂದುವರೆಯಲು ಬಿಡಲು ಆಗುವುದಿಲ್ಲ. ಮಂಡ್ಯಕ್ಕೆ ತನ್ನದೇ ಆಕ್ಸಿಜನ್ ಘಟಕ ಬೇಕು. ಇದು ಅತ್ಯಂತ ಶೀಘ್ರದಲ್ಲಿ ಸ್ಥಾಪನೆ ಆಗಬೇಕು ಎಂದು ನಿರ್ದೇಶನ ಕೊಟ್ಟಿದ್ದೇನೆಂದರು. ಜಿಲ್ಲಾಧಿಕಾರಿಗಳಿಗೆ ಆಕ್ಸಿಜನ್ ಘಟಕ ಸ್ಥಾಪನೆಗೆ ಕೊಡಬೇಕಾಗಿರುವ ಸೌಲಭ್ಯಗಳು (liquid tank ಮುಂತಾದವು) ಮತ್ತು ಅನುಮತಿಗಳನ್ನೂ ಅತೀ ಶೀಘ್ರದಲ್ಲಿ ಜಾರಿ ಮಾಡುವಂತೆ ತಿಳಿಸಿದ್ದು, ಕೋವಿಡ್ ಮೂರನೇ ಅಲೆ ಬರುವ ಮುಂಚೆ 13KL ಆಕ್ಸಿಜನ್ ಸಾಮರ್ಥ್ಯ ಪಡೆಯುವತ್ತ ಜಿಲ್ಲೆ ಹೆಜ್ಜೆ ಹಾಕಿದೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ಉಸ್ತುವಾರಿ ಸಚಿವರ ಜೊತೆ ತಕ್ಷಣ ಚರ್ಚೆ
ಕೇಂದ್ರದ National Disaster Response Fund (NDRF) ಮೂಲಕ 10 ಕೋಟಿ ರೂಪಾಯಿಗಳು ಬಿಡುಗಡೆಯಾಗಿದೆ. ಈ ಅನುದಾನವನ್ನು ತಹಶೀಲ್ದಾರಗಳ ಬೇಡಿಕೆಗೆ ಅನುಗುಣವಾಗಿ ಕೋವಿಡ್ ಅವಶ್ಯಕತೆಗಳಿಗೆ ಬಳಸಿಕೊಳ್ಳಲು ಜಿಲ್ಲಾಧಿಕಾರಿಗಳ ಅನುಮತಿ ಕೊಡಿಸಲಾಗಿದೆ. ಮಂಡ್ಯ ಜಿಲ್ಲೆಯ ಡಿಸ್ಟ್ರಿಕ್ಟ್ ಮಿನರಲ್ ಫಂಡ್ (ಡಿಎಂಎಫ್) ಖಾತೆಯಲ್ಲಿ Rs.2.5 ಕೋಟಿ ರೂಪಾಯಿಗಳಿವೆ. ಈ ಮೊತ್ತದಲ್ಲಿ ವೈದ್ಯಕೀಯ ಸಲಕರಣೆಗಳು ಮತ್ತು ಉಪಕರಣಗಳನ್ನು ಖರೀದಿಸುವ ಸಾಧ್ಯತೆ ಬಗ್ಗೆ ಮಾನ್ಯ ಉಸ್ತುವಾರಿ ಸಚಿವರ ಜೊತೆ ತಕ್ಷಣ ಚರ್ಚಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದಿದ್ದಾರೆ.