ಈ ಬಾರಿ ಕೆಆರ್ಎಸ್ ನೀರನ್ನು ನಂಬಿದವರಿಗಿಲ್ಲ ಸಂಕಷ್ಟ!
ಮಂಡ್ಯ, ಮೇ 09; ಸಾಮಾನ್ಯವಾಗಿ ಬೇಸಿಗೆಯ ಈ ಕಾಲಾವಧಿಯಲ್ಲಿ ಕುಡಿಯುವ ನೀರಿನ ಭಯ ಶುರುವಾಗುತ್ತಿತ್ತು. ಅದರಲ್ಲೂ ಕೆಆರ್ಎಸ್ ಜಲಾಶಯದ ನೀರನ್ನು ನಂಬಿರುವ ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಜನರು ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು.
ಅತ್ತ ಕೆಆರ್ಎಸ್ನಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದ್ದರೆ, ಇತ್ತ ನೀರಿಗಾಗಿ ಪರದಾಟ ಹೆಚ್ಚಾಗುತ್ತಿತ್ತು. ಆದರೆ ಈ ಬಾರಿ ಇನ್ನೂ 100 ಅಡಿಯಷ್ಟು ನೀರು ಸಂಗ್ರಹವಾಗಿರುವುದರಿಂದ ಜನ ನೆಮ್ಮದಿಯುಸಿರು ಬಿಡುವಂತಾಗಿದೆ. ವರುಣನ ಕೃಷೆಯಿಂದಾಗಿ ಕಳೆದ 5 ವರ್ಷಗಳಿಂದ ಕೆಆರ್ಎಸ್ ಜಲಾಶಯ ಭರ್ತಿಯಾಗುತ್ತಿದ್ದು, ನೀರಿನ ಬವಣೆ ಕಡಿಮೆಯಾಗಿದೆ. ಕೆಲವು ವರ್ಷಗಳ ಕಾಲ ಮುಂಗಾರು ಕೈಕೊಟ್ಟ ಕಾರಣ ಜಲಾಶಯ ಭರ್ತಿಯಾಗಿರಲಿಲ್ಲ. ಹೀಗಾಗಿ 2016ರಲ್ಲಿ ಜಲಾಶಯದ ನೀರಿನ ಮಟ್ಟ ಡೆಡ್ ಸ್ಟೋರೆಜ್ ತಲುಪಿತ್ತು.
ಮಳೆ ಅಬ್ಬರ; 119 ಅಡಿ ತಲುಪಿದ ಕೆಆರ್ಎಸ್ ನೀರಿನ ಮಟ್ಟ
ಆದರೆ 2017ರಲ್ಲಿ ಮುಂಗಾರು ಕೈಕೊಟ್ಟರೂ ಹಿಂಗಾರು ಮಳೆ ಕೈಹಿಡಿದಿತ್ತು. ಪರಿಣಾಮ ಒಂದಷ್ಟು ನೀರು ಜಲಾಶಯಕ್ಕೆ ಹರಿದು ಬಂದಿತ್ತು. ಆದರೆ ಜಲಾಶಯ ಭರ್ತಿಯಾಗಿರಲಿಲ್ಲ. ಈ ಬಾರಿ ಮುಂಗಾರು ಅವಧಿ ಮುಗಿದ ಬಳಿಕ ಚಂಡಮಾರುತದ ಪ್ರಭಾವದಿಂದ ಸುರಿದ ಮಳೆಯಿಂದಾಗಿ ಡ್ಯಾಂ ಭರ್ತಿಯಾಗಿದೆ.
ವಿಶೇಷ ಲೇಖನ; ಕೆಆರ್ಎಸ್ ಮತ್ತು ಮಂಡ್ಯದ ರಾಜಕೀಯ!
ಕೆಲವು ವರ್ಷಗಳ ಹಿಂದೆ ಡ್ಯಾಂ ನೀರಿನ ಮಟ್ಟ ಕಡಿಮೆಯಾದಾಗ ಜನ ಅನುಭವಿಸಿದ ಕಷ್ಟ ಕಾರ್ಪಣ್ಯಗಳು ಒಂದೆರಡಲ್ಲ. ನೀರನ್ನು ನಂಬಿ ವ್ಯವಸಾಯ ಮಾಡುತ್ತಿದ್ದ ರೈತರು ನೀರಿನ ಅಭಾವದಿಂದಾಗಿ ಬೆಳೆ ಬೆಳೆಯಲಾಗದೆ ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ನೆನಪಿಸಿಕೊಳ್ಳಬಹುದಾಗಿದೆ. ಈ ಬಾರಿ ಮುಂಗಾರು ಆಶಾದಾಯಕವಾಗಿ ಕೆಆರ್ಎಸ್ ಜಲಾಶಯ ಬೇಗ ಭರ್ತಿಯಾಗುವಂತಾಗಲಿ ಎನ್ನುವುದೇ ಆಶಯವಾಗಿದೆ.
ಕೆಆರ್ಎಸ್ ಸುತ್ತ ಕಲ್ಲು ಗಣಿಗಾರಿಕೆ; ಲೈಸೆನ್ಸ್ ನವೀಕರಣಕ್ಕೆ ಹಲವು ಅರ್ಜಿ
2018ರಿಂದ ನೀರಿಗೆ ಹಾಹಾಕಾರವಿಲ್ಲ
2018ರಲ್ಲಿ ಸುರಿದ ಕುಂಭದ್ರೋಣ ಮಳೆ ಕೊಡಗು ಸೇರಿದಂತೆ ಮಲೆನಾಡಿನಲ್ಲಿ ಪ್ರವಾಹ ಸೃಷ್ಟಿಸಿದ್ದಲ್ಲದೆ, ಭೂಕುಸಿತಕ್ಕೂ ಕಾರಣವಾಗಿತ್ತು. ಆದರೆ ಕಾವೇರಿ ತುಂಬಿ ಹರಿದ ಪರಿಣಾಮ ಜಲಾಶಯ ಭರ್ತಿಯಾಗುವುದರೊಂದಿಗೆ ಲಕ್ಷಾಂತರ ಕ್ಯುಸೆಕ್ ಹೆಚ್ಚುವರಿ ನೀರನ್ನು ಹೊರ ಬಿಡಲಾಯಿತು. ಅದಾದ ನಂತರ ಪ್ರತಿ ವರ್ಷವೂ ಉತ್ತಮವಾಗಿ ಮಳೆಯಾಗುತ್ತಿರುವುದರಿಂದ ಜಲಾಶಯ ಭರ್ತಿಯಾಗುತ್ತಿದೆ. ಕಳೆದ ವರ್ಷ ನವೆಂಬರ್ನಲ್ಲಿ ಜಲಾಶಯ ಭರ್ತಿಯಾಗಿತ್ತು. ಆದಾದ ನಂತರ ಡಿಸೆಂಬರ್ ತನಕವೂ ಹಿಂಗಾರು ಮಳೆ ಸುರಿದ ಕಾರಣ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರಲಿಲ್ಲ. ಇದರ ಪರಿಣಾಮ ಈ ಬಾರಿ ಈ ಸಮಯದಲ್ಲಿಯೂ ನೂರು ಅಡಿಯಷ್ಟು ನೀರು ಇರುವುದು ಖುಷಿ ಕೊಟ್ಟಿದೆ.
ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳ
ಈಗಾಗಲೇ ಕೊಡಗು ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣವೂ ಹೆಚ್ಚಾಗಿದೆ. ಮೊದಲೆಲ್ಲ ಈ ವೇಳೆಗೆ ನದಿಯಲ್ಲಿ ನೀರು ಬತ್ತಿಹೋಗುತ್ತಿತ್ತು. ಆದರೆ ಈ ಬಾರಿ ವರುಣನ ಕೃಪೆಯಿಂದಾಗಿ ಎಲ್ಲವೂ ಸುಗಮವಾಗಿದೆ. ಕಳೆದ 5 ವರ್ಷಗಳ ಹಿಂದೆಗೆ ಹೋದರೆ ಈ ಹೊತ್ತಿಗೆಲ್ಲ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆಯಾಗಿ ತಳ ಕಾಣುವಂತಾಗಿತ್ತು. ಅಲ್ಲದೆ ಮುಂಗಾರು ಆರಂಭವಾಗುವ ವೇಳೆಗೆ ಡೆಡ್ ಸ್ಟೋರೆಜ್ ತಲುಪುವಂತಾಗಿತ್ತು. ನೀರು ಬತ್ತಿದ ಕಾರಣ ಜಲಾಶಯದ ಹಿನ್ನೀರಿನಲ್ಲಿ ಮುಳುಗಿದ್ದ ದೇಗುಲಗಳು ಕಾಣಿಸಿದ್ದವು.
ಸದ್ಯ ಡ್ಯಾಂನಲ್ಲಿ ಎಷ್ಟು ನೀರಿದೆ?
ಜಲಾಶಯದ ನೀರಿನ ಮಟ್ಟ ಡೆಡ್ ಸ್ಟೋರೇಜ್ ತಲುಪಿದಾಗ ಕೆಲವು ರೈತರು ಉಳುಮೆ ಮಾಡಿ ಬೇಸಾಯವನ್ನು ಕೂಡ ಮಾಡಿದ್ದರು. ಆದರೆ ದೇವರ ದಯೆಯಿಂದಾಗಿ ಉತ್ತಮ ಮಳೆಯಾಗಿದ್ದರಿಂದ ಜಲಾಶಯದಲ್ಲಿ ನೀರಿನ ಸಂಗ್ರಹ ಉತ್ತಮವಾಗಿದೆ. ಇನ್ನೊಂದು ತಿಂಗಳಲ್ಲಿ ಮಲೆನಾಡಿನಲ್ಲಿ ಮುಂಗಾರು ಆರಂಭಗೊಳ್ಳುವುದರಿಂದ ಜಲಾಶಯಕ್ಕೆ ನೀರು ಹರಿದು ಬರಬಹುದು ಎಂಬ ನಿರೀಕ್ಷೆ ಜನರದ್ದಾಗಿದೆ.
124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಕೆಆರ್ಎಸ್ ಜಲಾಶಯದಲ್ಲಿ ಇದೀಗ 100 ಅಡಿಯಷ್ಟು ನೀರಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 7 ಅಡಿಯಷ್ಟು ಹೆಚ್ಚಿನ ನೀರಿನ ಸಂಗ್ರಹವಿರುವುದು ನೆಮ್ಮದಿ ತರುವ ವಿಚಾರವಾಗಿದೆ. ಹೀಗಾಗಿ ಕೆಆರ್ಎಸ್ ನೀರನ್ನು ನಂಬಿರುವ ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಜಿಲ್ಲೆಯ ಜನರು ತಮಗೆ ನೀರಿನ ಸಮಸ್ಯೆಯಾಗದು ಎಂಬ ಖುಷಿಯಲ್ಲಿದ್ದಾರೆ.
ಜಲಾಶಯದ ನೀರಿನ ಸೋರಿಕೆ ತಡೆಯಲಾಗಿದೆ
"ಈಗ ಜಲಾಶಯದಲ್ಲಿ ನೀರು ಇರುವುದರಿಂದ ಪ್ರಸ್ತುತ ಬೆಳೆದು ನಿಂತಿರುವ ಬೆಳೆಗಳಿಗೆ ನೀರು ಹರಿಸಲಾಗುತ್ತಿದೆ. ಕಳೆದ ಐದು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಉತ್ತಮವಾಗಿದೆ. ಡ್ರಿಪ್ ಯೋಜನೆಯಡಿ ಹಳೆಯ ಗೇಟುಗಳನ್ನು ಬದಲಾವಣೆ ಮಾಡಿದ್ದರಿಂದ ನೀರಿನ ಸೋರಿಕೆ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗುವುದಿಲ್ಲ" ಎಂದು ಮಂಡ್ಯ ವೃತ್ತ ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಇಂಜಿನಿಯರ್ ಕೆ. ಜೆ. ವಿಜಯಕುಮಾರ್ ಹೇಳಿದ್ದಾರೆ.
Recommended Video