'ಸ್ವಂತ ತಂಗಿ ಮಗನನ್ನೇ ನಾನು ಊರಿಗೆ ಕರೆಸಿಲ್ಲ' ಸಚಿವರ ಹೇಳಿಕೆ
ಬೆಂಗಳೂರು, ಮೇ 20: ಈಗ ಕೊರೊನಾ ವೈರಸ್ ರಾಜಕೀಯ ಶುರುವಾಗಿದೆ. ಯಾರು? ಎಲ್ಲಿಂದ ಎಷ್ಟು ಜನರನ್ನು ಕರೆಸಿದ್ದಾರೆ? ಅವರಲ್ಲಿ ಎಷ್ಟು ಜನರಿಗೆ ಕೋವಿಡ್ ಸೋಂಕು ಇತ್ತು ಎಂಬುದರ ಚರ್ಚೆ ಆರಂಭವಾಗಿದೆ.
ಕೇಂದ್ರ ಸರ್ಕಾರವೇ ಮೊಬೈಲ್ ಕಾಲರ್ ಟೋನ್ನಲ್ಲಿ, 'ಕೊರೊನಾ ವೈರಸ್ ಅಂದ್ರೆ ಕೋವಿಡ್ ವಿರುದ್ಧ ಇಡೀ ದೇಶವೇ ಹೋರಾಡ್ತಿದೆ. ಆದ್ರೆ ನೆನಪಿಡಿ ನಾವು ರೋಗದ ವಿರುದ್ಧ ಹೋರಾಡ್ಬೇಕು, ರೋಗಿಯ ವಿರುದ್ಧ ಅಲ್ಲ. ಅವರಲ್ಲಿ ಬೇದಭಾವ ಮಾಡದೇ ಆರೈಕೆ ಮಾಡಿ. ಈ ರೋಗದಿಂದ ಪಾರಾಗಲು.....' ಅಂತಾ ತಿಳಿವಳಿಕೆ ಮೂಡಿಸುವ ಪ್ರಯತ್ನ ಮಾಡುತ್ತಿದೆ.
ಈ ಮಧ್ಯೆ ಕೊರೊನಾ ವೈರಸ್ ತನ್ನಂತೆಯೆ ಹೊಸ ಹೊಸ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಜೊತೆಗೆ ಊರಿಗೆ ಬರುವವರನ್ನು ಆತಂಕದಿಂದಲೇ ಸ್ವಾಗತಿಸುವ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್ 19 ಪ್ರಕರಣಗಳಿಗೆ ತಡೆ ಹಾಕುವ ನಿಟ್ಟಿನಲ್ಲಿ ಮಂಡ್ಯದಲ್ಲಿ ಜನಪ್ರತಿನಿಧಿಗಳ ಸಭೆ ನಡೆಯಿತು.
ಎಂಎಲ್ಸಿ ಶ್ರೀಕಂಠೇಗೌಡ ವಿರುದ್ಧ ಸಚಿವ ನಾರಾಯಣ ಗೌಡ ಗರಂ
ಮಂಡ್ಯ ಜಿಲ್ಲೆಯಲ್ಲಿ ಮಾತ್ರ ಲಾಕ್ಡೌನ್
ಹೊರ ರಾಜ್ಯಗಳಿಂದ ಮಂಡ್ಯ ಜಿಲ್ಲೆಗೆ ಈಗಾಗಲೇ 1400 ಜನರು ಬಂದಿದ್ದಾರೆ, ಅವರೆಲ್ಲರನ್ನು ಕ್ವಾರಂಟೈನ್ ಮಾಡಲಾಗಿದೆ. ಆದರೆ ಅನುಮತಿ ಪಡೆಯದೇ ಜಿಲ್ಲೆಗೆ ಜನರು ಬಂದಿರುವ ಸಾಧ್ಯತೆಯೂ ಇದೆ. ಇದು ಆತಂಕಕ್ಕೆ ಕಾರಣವಾಗಿದೆ.
ಹೀಗಾಗಿ ಮಂಡ್ಯ ಜಿಲ್ಲೆಯಲ್ಲಿ ಇದೇ ವೇಳೆ ಕೆಲ ಶಾಸಕರು ಮಂಡ್ಯದಲ್ಲಿ ಲಾಕ್ಡೌನ್ ಮುಂದುವರೆಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಅವರು ಹೇಳಿದ್ದಾರೆ. ಚುಂಚನಗಿರಿ ಮೆಡಿಕಲ್ ಕಾಲೇಜಿನ ಆಡಿಟೋರಿಯಂನಲ್ಲಿ ನಡೆದ ಜನಪ್ರತಿನಿಧಿಗಳ ಸಭೆಯಲ್ಲಿ ನಾರಾಯಣಗೌಡ ಮಾತನಾಡಿದರು.
ಸ್ವಂತ ತಂಗಿ ಮಗನನ್ನೇ ನಾನು ಊರಿಗೆ ಕರೆಸಿಲ್ಲ
ಕೆಲ ನಾಯಕರಿಂದ ಬಂದಿದ್ದ ಆರೋಪಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಅವರು ಇದೇ ಸಂದರ್ಭದಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ. ಜಿಲ್ಲೆಗೆ ಮುಂಬೈನಿಂದ ಸಾವಿರಾರು ಜನ ಬಂದಿದ್ದಾರೆ. ಅವರೆಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ. ಅವರು ಈ ನೆಲದ ಜನ. ಅವರಿಗೆ ಇಲ್ಲೆ ಕ್ವಾರಂಟೈನ್ ಸೌಲಭ್ಯ ನೀಡೋದು ನಮ್ಮ ಕರ್ತವ್ಯ. ಆದ್ರೆ ನಾನು ಯಾರನ್ನೂ ಕರೆಸಿಲ್ಲ. ಸ್ವಂತ ತಂಗಿ ಮಗನನ್ನೇ ನಾನು ಊರಿಗೆ ಕರೆಸಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಆದೇಶ ದಂತೆ ಸೇವಾ ಸಿಂಧುವಿನಲ್ಲಿ ಅರ್ಜಿಗಳನ್ನು ಹಾಕಿದವರಿಗೆ ಮುಂಬೈ ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಶಿಕ್ಷಕರನ್ನು ಬಳಸಿಕೊಂಡು ಯಾರಾದರೂ ಹೊಸದಾಗಿ ಗ್ರಾಮಕ್ಕೆ ಬಂದರೆ ಸಮೀಕ್ಷೆ ನಡೆಸಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.
ಇನ್ನೂ 2 ಸಾವಿರ ಜನರಿಗೆ ಕ್ವಾರಂಟೈನ್ ವ್ಯವಸ್ಥೆ
ಜಿಲ್ಲೆಗೆ ಒಮ್ಮೆಲೆ ಜನರು ಬಂದರೆ ಕ್ವಾರಂಟೈನ್ ಮಾಡುವುದು ಸಾಧ್ಯವಾಗುವುದಿಲ್ಲ. ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಭೇಟಿ ಮಾಡಿ ಮುಂಬೈಯಿಂದ ಹಂತ ಹಂತವಾಗಿ ಜನರನ್ನು ಕರೆಸಲು ಮನವಿ ಮಾಡಿದ್ದೇವೆ. ಕ್ವಾರಂಟೈನ್ ಮಾಡಲು ಹಣದ ಕೊರತೆ ಇಲ್ಲ. ಆದರೆ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿ ಕ್ವಾರಂಟೈನ್ ಮಾಡೋದು ಸರಿಯಲ್ಲ. ಹಾಗಂತ ಜನ ಆತಂಕಗೊಳ್ಳೋದು ಬೇಡ. ಇನ್ನೂ ಎರಡು ಸಾವಿರ ಜನರಿಗೆ ಕ್ವಾರಂಟೈನ್ ಮಾಡುವ ಸಾಮರ್ಥ್ಯ ಇದೆ. ಕೋವಿಡ್ - 19 ವಿಚಾರದಲ್ಲಿ ಎಲ್ಲರೂ ಒಂದಾಗಿ ಹೋರಾಡಬೇಕು. ಪಕ್ಷಾತೀತವಾಗಿ ಎಲ್ಲ ಜನಪ್ರತಿನಿಧಿಗಳು ಕೈ ಜೋಡಿಸಬೇಕು ಎಂದು ನಾರಾಯಣಗೌಡ ಮನವಿ ಮಾಡಿಕೊಂಡರು.
ವೈಜ್ಞಾನಿಕ ಕೆಲಸ ನಡೆಯಲಿ, ಮಠದಿಂದ ಯಾಗ
ಇನ್ನು ಸಭೆಯಲ್ಲಿದ್ದ ಆದಿಚುಂನಗಿರಿ ಮಹಾಸಂಸ್ಥಾನಮಠದ ನಿರ್ಮಲಾನಂದನಾಥ ಶ್ರೀಗಳು ಮಾತನಾಡಿ, ಕೊರೊನಾ ವಿಚಾರದಲ್ಲಿ ಮುಂಜಾಗ್ರತೆ ಮುಖ್ಯ. ಅಧಿಕಾರಿಗಳು ಅವರ ಕಾರ್ಯ ಮಾಡಲಿ. ವೈಜ್ಞಾನಿಕವಾಗಿ ನಡೆಯಬೇಕಾದ ಕೆಲಸಗಳು ನಡೆಯಲಿ. ಮುಂಬೈನಿಂದ ಬಂದವರಿಗೆ ನಿಯಮಾನುಸಾರ Rapid ಟೆಸ್ಟ್ ಮಾಡಿಸಿ. ಸೂಕ್ತ ಚಿಕಿತ್ಸೆ ನೀಡುವ ಕೆಲಸ ಕೂಡ ಆಗಲಿ. ಇತ್ತ ಮಠದ ವತಿಯಿಂದ ಅತಿರುದ್ರಯಾಗ ಮಾಡುವ ತೀರ್ಮಾನ ಮಾಡಿದ್ದೇವೆ ಎಂದು ಸ್ವಾಮಿಜಿ ಹೇಳಿದರು.
ಒಟ್ಟಾರೆ ತಮ್ಮೂರಿಗೆ ಬರುವ ಜನರಿಗೆ ಅವಕಾಶ ಸಿಗಲಿ, ಆದರೆ ಅವರೆಲ್ಲರೂ ಖಡ್ಡಾಯವಾಗಿ ಕ್ವಾರಂಟೈನ್ಗೆ ಒಳಗಾಗಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕೊರೊನಾ ವೈರಸ್ ಕುರಿತು ನಡೆದ ಚರ್ಚೆಯಲ್ಲಿ ಮೇಲುಕೋಟೆ ಶಾಸಕ ಸಿ.ಎಸ್. ಪುಟ್ಟರಾಜು, ಮಂಡ್ಯ ಶಾಸಕ ಶ್ರೀನಿವಾಸ್, ನಾಗಮಂಗಲ ಶಾಸಕ ಸುರೇಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಅಪ್ಪಾಜಿಗೌಡ, ಕೆ ಟಿ ಶ್ರೀಕಂಠೇಗೌಡ ಹಾಗೂ ಜಿಲ್ಲೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.