"ಪಾಂಡವಪುರ ಸಕ್ಕರೆ ಕಾರ್ಖಾನೆಗೆ ಮಹಾರಾಷ್ಟ್ರದಿಂದ ಬಂದ ಕಾರ್ಮಿಕರು''
ಮಂಡ್ಯ, ಜುಲೈ 16: ಪಾಂಡವಪುರ ಸಕ್ಕರೆ ಕಾರ್ಖಾನೆ (PSSK) ಗೆ ಮಹಾರಾಷ್ಟ್ರದಿಂದ ಕಾರ್ಮಿಕರು ಬರುತ್ತಿದ್ದು, ಸ್ಥಳೀಯ ಉದ್ಯೋಗಾಕಾಂಕ್ಷಿಗಳಿಗೆ ಎಳ್ಳು ನೀರು ಬಿಟ್ಟಂತಾಗಿದೆ ಎಂದು ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಆರೋಪಿಸಿದ್ದಾರೆ.
ಸಕ್ಕರೆ ಕಾರ್ಖಾನೆ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಉದ್ಯೋಗ ಬಯಸಿ ಸ್ಥಳೀಯ ಹಾಗೂ ಜಿಲ್ಲೆಯ ವಿವಿಧ ಭಾಗಗಳ ಸಾವಿರಾರು ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಕೆಯಾಗಿದೆ ಎಂದರು.
ಮಂಡ್ಯದಲ್ಲಿ ಮಹಿಳಾ ಸಂಘಟನೆಗೆ ಒತ್ತುಕೊಟ್ಟ ಕೈ-ಕಮಲ
150 ಹುದ್ದೆಗಳಿಗೆ ಬರೋಬ್ಬರಿ 7,500 ಮಂದಿಯಿಂದ ಅರ್ಜಿ ಸಲ್ಲಿಸಲಾಗಿದ್ದು, ಹಾಲಿ ನೌಕರರು, ಸ್ಥಳೀಯ ನಿರುದ್ಯೋಗಿಗಳ ಕಡೆಗಣನೆಯಾಗಿದೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಆರೋಪ ಮಾಡಿದರು.
ಸ್ಥಳೀಯರನ್ನು ಕಡೆಗಣಿಸಿ ಹೊರಗಿನವರಿಗೆ ಆದ್ಯತೆ ನೀಡಲಾಗುತ್ತಿದೆ, ಮಹಾರಾಷ್ಟ್ರ, ಬೆಳಗಾವಿ ಜಿಲ್ಲೆಯವರಿಗೆ ಮನ್ನಣೆ ಹಾಕಲಾಗಿದೆ. ನಿರಾಣಿ ಶುಗರ್ಸ್ ಮಾಲೀಕ ಮುರುಗೇಶ್ ನಿರಾಣಿ ಅವರು, ಮಹಾರಾಷ್ಟ್ರದಿಂದ 200ಕ್ಕೂ ಹೆಚ್ಚು ಕಾರ್ಮಿಕರನ್ನು ಕರೆತಂದಿದ್ದಾರೆ ಎಂದು ತಿಳಿಸಿದರು.
ನಿರಾಣಿ ಶುಗರ್ಸ್ ಮಾಲೀಕ ಮುರುಗೇಶ್ ನಿರಾಣಿ ಅವರು PSSK ಯನ್ನು 40 ವರ್ಷ ಗುತ್ತಿಗೆಗೆ ಪಡೆದಿರುತ್ತಾರೆ. ಕಾರ್ಮಿಕರ ಕೈಯಲ್ಲಿ ಕ್ವಾರಂಟೈನ್ ಸೀಲ್ ಇದ್ದರೂ ಸಂಚಾರ ಮಾಡುತ್ತಿದ್ದಾರೆ, ಪಾಂಡವಪುರ, ಶ್ರೀರಂಗಪಟ್ಟಣ ಭಾಗಗಳಲ್ಲಿ ಸಂಚರಿಸುತ್ತಿದ್ದಾರೆ ಎಂದು ಹೇಳಿದರು.
ಈ ಭಾಗದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಾದರೆ ಅದಕ್ಕೆ ನಿರಾಣಿಯೇ ಹೊಣೆಯಾಗುತ್ತಾರೆ, ಅವರ ವರ್ತನೆಯನ್ನು ಈ ಭಾಗದ ಜನ ಒಪ್ಪಲ್ಲ. ಅವರಿಗೆ ಕಾರ್ಖಾನೆಯನ್ನು ಗುತ್ತಿಗೆಗೆ ಅಷ್ಟೇ ನೀಡಿರುವುದು, ಫ್ಯಾಕ್ಟರಿಯನ್ನು ತನಗೇ ಮಾರಿಬಿಟ್ಟಿದ್ದಾರೆ ಎಂಬಂತಹ ವರ್ತನೆ ಸರಿಯಲ್ಲ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಟೀಕಿಸಿದರು.