ಕಾರು ಹತ್ತಿಸಿಕೊಂಡು ವಿದ್ಯಾರ್ಥಿಯ ಮರ್ಮಾಂಗ ಕತ್ತರಿಸಿದ ದುಷ್ಕರ್ಮಿಗಳು
ಮಂಡ್ಯ, ಫೆಬ್ರವರಿ 15: ಡ್ರಾಪ್ ಕೊಡುವುದಾಗಿ ವಿದ್ಯಾರ್ಥಿಯನ್ನು ಕಾರಿಗೆ ಹತ್ತಿಸಿಕೊಂಡ ದುಷ್ಕರ್ಮಿಗಳು ಆತನ ಮರ್ಮಾಂಗವನ್ನು ಕತ್ತರಿಸಿರುವ ಅಮಾನವೀಯ ಘಟನೆ ಪಾಂಡವಪುರ ತಾಲೂಕಿನಲ್ಲಿ ನಡೆದಿದೆ.
ವಿದ್ಯಾರ್ಥಿಯು ಕೆ.ಆರ್.ಪೇಟೆ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಾಲೇಜಿಗೆ ಹೋಗಲು ಪಾಂಡವಪುರ ತಾಲೂಕಿನ ಸೀತಾಪುರ ಗೇಟ್ ಬಳಿ ನಿಂತಿದ್ದ. ಈ ವೇಳೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ವಿದ್ಯಾರ್ಥಿಯನ್ನು ಎಲ್ಲಿಗೆ ಹೋಗಬೇಕು ಎಂದು ಕೇಳಿದ್ದಾರೆ. ಆಗ ವಿದ್ಯಾರ್ಥಿಯು, ನಾನು ಕೆ.ಆರ್.ಪೇಟೆಗೆ ಹೋಗಬೇಕು ಎಂದಿದ್ದಾನೆ. ಅದಕ್ಕೆ ಈ ದುಷ್ಕರ್ಮಿಗಳು, 'ಬಾ ನಮ್ಮ ಜೊತೆ. ನಾವು ಆ ಕಡೆಯೇ ಹೋಗುತ್ತಿದ್ದೇವೆ ಎಂದು ಕಾರಿನಲ್ಲಿ ಕರೆದಿದ್ದಾರೆ. ಆದರೆ ಆ ವಿದ್ಯಾರ್ಥಿ, ಇಲ್ಲ ನಾನು ಬಸ್ ಗೆ ಕಾಯುತ್ತಿದ್ದೇನೆ. ಬಸ್ನಲ್ಲೇ ಹೋಗುತ್ತೇನೆ ಎಂದಾಗ, ಆತನನ್ನು ಪರವಾಗಿಲ್ಲ ಬಾ ಎಂದು ಬಲವಂತವಾಗಿ ಕಾರಿನಲ್ಲಿ ಕರೆದೊಯ್ದಿದ್ದಾರೆ.
ಶಿಕ್ಷಕಿಯ ಕೈಕಾಲು ಕಟ್ಟಿ ರಸ್ತೆಯಲ್ಲಿ ಎಳೆದೊಯ್ದ ಟಿಎಂಸಿ ಮುಖಂಡ
ಅಲ್ಲಿಂದ ಐದು ಕಿ.ಮೀ ದೂರ ಸಾಗಿದ ಬಳಿಕ ದುಷ್ಕರ್ಮಿಗಳು ವಿದ್ಯಾರ್ಥಿಯ ಮರ್ಮಾಂಗವನ್ನು ಕಾರಿನಲ್ಲೇ ಕತ್ತರಿಸಿದ್ದಾರೆ. ಬಳಿಕ ಆತನನ್ನು ರಸ್ತೆ ಬದಿ ಎಸೆದು ಪರಾರಿಯಾಗಿದ್ದಾರೆ. ಈ ವೇಳೆ ವಿದ್ಯಾರ್ಥಿ ನರಳಾಡುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ವಿದ್ಯಾರ್ಥಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಈ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಾವ ಕಾರಣಕ್ಕೆ ದುಷ್ಕರ್ಮಿಗಳು ಈ ರೀತಿ ಮಾಡಿದ್ದಾರೆ ಎಂದು ತಿಳಿದು ಬಂದಿಲ್ಲ. ಪೊಲೀಸರು ದುಷ್ಕರ್ಮಿಗಳ ಹುಡುಕಾಟಕ್ಕೆ ಬಲೆ ಬೀಸಿದ್ದಾರೆ.