ಮಹಾಪೂಜೆ ಮುಗಿಯುತ್ತಿದ್ದಂತೆಯೇ ಭಕ್ತರಿಗೆ ನಿಜರೂಪ ದರ್ಶನ ನೀಡಿದ ಹೊಳೆ ಆಂಜನೇಯ
Recommended Video
ಮಂಡ್ಯ, ನ 14: ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದಲ್ಲಿರುವ ಐತಿಹಾಸಿಕ ಶ್ರೀಹೊಳೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ರಾತ್ರಿ (ನ 13) ಅಚ್ಚರಿಯೊಂದು ನಡೆದಿದೆ.
ಶಿಂಷಾ ನದಿ ದಡದಲ್ಲಿರುವ ಶ್ರೀಪಾದರಾಜರು ಮತ್ತು ಶ್ರೀವ್ಯಾಸರಾಜರು ಪ್ರತಿಷ್ಠಾಪಿಸಿರುವ ಈ ಆಂಜನೇಯಸ್ವಾಮಿ ದೇವಾಲಯಕ್ಕೆ, ಉಡುಪಿ ಅಷ್ಟಮಠಗಳಲ್ಲೊಂದಾದ ಸೋದೆ ಮಠದ ವಿಶ್ವವಲ್ಲಭ ಶ್ರೀಗಳು ಧಾರ್ಮಿಕ ಸಂಚಾರ ಪರ್ಯಟನೆಯ ಭಾಗವಾಗಿ ದೇವಾಲಯಕ್ಕೆ ಆಗಮಿಸಿದ್ದರು.
ಮಲ್ಲೇನಹಳ್ಳಿ ಬಿಂಡಿಗ ದೇವಿರಮ್ಮನ ಪವಾಡ ನೋಡಲು ಸಾಗರೋಪಾದಿ ಬಂದ ಜನ
ಆಂಜನೇಯನಿಗೆ ಅಲಂಕಾರ ಮಾಡಿದ ನಂತರ, ದೇವರ ಮುಖಭಾಗಕ್ಕೆ ಬೆಳ್ಳಿಯ ಆಭರಣವನ್ನು ತೊಡಿಸಲಾಗಿತ್ತು. ಸೋದೆ ಶ್ರೀಗಳ ಪೂಜೆ ಮುಗಿಯುತ್ತಿದ್ದಂತೆಯೇ, ಬೆಳ್ಳಿಯ ಆಭರಣ ಎಡಭಾಗಕ್ಕೆ ಜಾರಿ, ಮೂಲಸ್ವರೂಪದ ದರ್ಶನವಾಗಿದೆ. (ವಿಡಿಯೋ ಕೊನೆಯವರೆಗೆ ನೋಡಿ)
ಮೂಜೆ ಮುಗಿಯುತ್ತಿದ್ದಂತೆಯೇ ಆಂಜನೇಯ ಸ್ವಾಮಿಯ ನಿಜ ದರ್ಶನ ಕಂಡು ಇಡೀ ಭಕ್ತ ಸಮೂಹವೇ ಪುಳಕಿತವಾಗಿದೆ. ಭಾವೀ ಸಮೀರ ಶ್ರೀ ವಾದಿರಾಜ ಗುರು ಪರಂಪರೆಯ ಯತಿಗಳಾದ ವಿಶ್ವವಲ್ಲಭ ಶ್ರೀಗಳ ಪೂಜೆಗೆ ಆಂಜನೇಯ ನೀಡಿದ ದರ್ಶನವಿದು ಎನ್ನುವುದು ಭಕ್ತವೃಂದದ ಅಂಬೋಣ.
ರಾಗೀಗುಡ್ಡದ ಆಂಜನೇಯ ಸ್ವಾಮಿಗೆ ಸುವರ್ಣ ಮಹೋತ್ಸವದ ಸಂಭ್ರಮ
ಹೊಳೆ ಆಂಜನೇಯಸ್ವಾಮಿಯ ಮೂಲ ಮೂರ್ತಿಯ ಎರಡು ಬೆರಳುಗಳು ಉದ್ದವಾಗಿ ಬೆಳೆಯುತ್ತಲೇ ಇದೆ. ಇದು ಮಧ್ವಾಚಾರ್ಯರ ದ್ವೈತ ಸಿದ್ದಾಂತವನ್ನು ಪ್ರತಿಪಾದಿಸುತ್ತದೆ ಎನ್ನುವುದು ಪ್ರತೀತಿ.
ಈ ಸ್ಥಳದ ವಿಶೇಷವೇನಂದರೆ, ಇಲ್ಲಿಗೆ ಬರುವ ಭಕ್ತರು ಒಂದು ರೂಪಾಯಿ ನಾಣ್ಯವನ್ನು ಹಿಡಿದುಕೊಂಡು ಸಂಕಲ್ಪ ಮಾಡಿ, ಅರ್ಚಕರ ಕೈಯಲ್ಲಿ ಕೊಟ್ಟರೆ, ಅವರು ಅದನ್ನು ದೇವರ ಪಾದಕ್ಕೆ ಸಮರ್ಪಿಸಿ, ಪೂಜೆ ಸಲ್ಲಿಸುತ್ತಾರೆ. ಹೀಗೆ ಮಾಡಿದರೆ, ಮದುವೆಗೆ ಇರುವ ಅಡ್ಡಿ, ಸಂತಾನಭಾಗ್ಯ, ಹಣಕಾಸಿನ ವ್ಯಾಜ್ಯಗಳು ಪರಿಹಾರವಾಗುತ್ತದೆ ಎನ್ನುವುದು ನಂಬಿಕೆ.
ಶ್ರೀಹೊಳೆ ಆಂಜನೇಯಸ್ವಾಮಿ ದೇವಸ್ಥಾನ, ಮದ್ದೂರು ರೈಲ್ವೇ ನಿಲ್ದಾಣದಿಂದ ಮೂರು ಕಿಲೋಮೀಟರ್ ದೂರದಲ್ಲಿದೆ. ಈ ದೇವಸ್ಥಾನ, ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಾಣವಾಗಿದ್ದು ಎನ್ನುವ ಮಾಹಿತಿಯಿದೆ.