ಮಂಡ್ಯದಲ್ಲಿ ಅಕ್ಕನ ಸಾವಿನ ಸೇಡಿಗೆ ಪೂಜಾ ಕುಣಿತದವನ ಕೊಂದ ಬಾಲಕ
ಮಂಡ್ಯ, ಜೂನ್ 01: ಅಕ್ಕನ ಸಾವಿಗೆ ಕಾರಣನಾಗಿದ್ದ ಪೂಜಾ ಕುಣಿತ ಕಲಾವಿದನನ್ನು ಬಾಲಕನೊಬ್ಬ ದ್ವೇಷ ಸಾಧಿಸಿ ಕೊಲೆ ಮಾಡಿರುವ ಘಟನೆ ಮಂಡ್ಯದ ಭಾರತೀನಗರ ಸಮೀಪದ ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ.
Recommended Video
ಹುಲ್ಲು ತರಲು ಹೋಗಿದ್ದ ಪೂಜಾ ಕುಣಿತ ಕಲಾವಿದನೊಬ್ಬ ಈಚೆಗೆ ನಿಗೂಢವಾಗಿ ಕೊಲೆಯಾಗಿದ್ದನು. ಈ ಕೊಲೆಯ ಜಾಡನ್ನು ಹಿಡಿದು ಆರೋಪಿಯ ಪತ್ತೆಗೆ ಪೊಲೀಸರು ಮುಂದಾಗಿದ್ದರು. ಆರೋಪಿಯ ಬಗ್ಗೆ ತಿಳಿದುಕೊಂಡು ಆತನಿಗೆ ಶೋಧ ಕಾರ್ಯ ಮುಂದುವರೆಸುತ್ತಿದ್ದಂತೆ ಆತನೇ ಪೊಲೀಸರ ಮುಂದೆ ಬಂದು ಶರಣಾಗಿದ್ದಾನೆ. ತಾನು ಕೊಲೆ ಮಾಡಿದ್ದಾಗಿ ಬಾಲಕ ಒಪ್ಪಿಕೊಂಡಿದ್ದಾನೆ. ಆ ಕೊಲೆಯ ಕಾರಣವನ್ನೂ ಬಿಡಿಸಿಟ್ಟಿದ್ದಾನೆ.
ಲಾಕ್ ಡೌನ್ ವೇಳೆ ಕೆಲಸ ಹುಡುಕದ ಪತಿಯನ್ನೇ ಕೊಂದ ಪತ್ನಿ.!
ಮೇ.28ರಂದು ಕೊಲೆಯಾಗಿದ್ದ ರಘು
ಕೆ.ಶೆಟ್ಟಹಳ್ಳಿ ಗ್ರಾಮದ ಪೂಜಾ ಕುಣಿತ ಕಲಾವಿದ ರಘು ಮೇ.28ರಂದು ಕೊಲೆಯಾಗಿದ್ದನು. ಈತನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಇಷ್ಟಕ್ಕೂ ಆತನನ್ನು ಕೊಲೆ ಮಾಡಿದ್ದು ಯಾರು ಎಂದು ಹುಡುಕುತ್ತಾ ಹೋದ ಪೊಲೀಸರಿಗೆ ಬಾಲಕ ಕೊಲೆ ಮಾಡಿರುವುದು ದೃಢವಾಗಿತ್ತು. ಆತನನ್ನು ಹುಡುಕಲು ಆರಂಭಿಸುತ್ತಿದ್ದಂತೆ ಆತನೇ ಪೊಲೀಸ್ ಠಾಣೆಗೆ ಶರಣಾಗಿದ್ದು, ಆತ ಏಕೆ ಕೊಲೆ ಮಾಡಿದೆ ಎಂಬುದನ್ನು ಬಾಯಿಬಿಟ್ಟಿದ್ದಾನೆ.
ಕೊಲೆ ಹಿಂದಿದೆ ಪ್ರೇಮ ಕಥೆ
ಈ ಕೊಲೆಯ ಹಿಂದೆ ಪ್ರೇಮ ಕಥೆಯ ದ್ವೇಷ ಅಡಗಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಬಾಲಕ ತನ್ನ ಅಕ್ಕನ ಸಾವಿಗೆ ದ್ವೇಷ ತೀರಿಸಿಕೊಂಡಿರುವುದನ್ನು ಬಾಯಿ ಬಿಟ್ಟಿದ್ದಾನೆ. ಇಷ್ಟಕ್ಕೂ ಆಗಿದ್ದೇನು ಗೊತ್ತಾ? ಐದು ವರ್ಷಗಳ ಹಿಂದೆ ಪೂಜಾ ಕುಣಿತ ಕಲಾವಿದ ರಘು ಈ ಬಾಲಕನ ಅಕ್ಕನನ್ನು ಪ್ರೀತಿಸುತ್ತಿದ್ದನು. ಇವರ ಪ್ರೀತಿಯ ವಿಚಾರ ಎರಡೂ ಮನೆಯವರಿಗೆ ತಿಳಿದು ಮದುವೆಗೆ ವಿರೋಧಿಸಿದ್ದರು. ಹೀಗಾಗಿ ರಘು ಮತ್ತು ಆ ಯುವತಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದರು. ಈ ವೇಳೆ ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟರೆ, ವಿಷ ಸೇವಿಸಿದ್ದ ಕಲಾವಿದ ರಘು ಪ್ರಾಣಾಪಾಯದಿಂದ ಪಾರಾಗಿದ್ದನು.
ಅಕ್ಕನ ಸಾವಿಗೆ ಕಾರಣನಾದವನ ಕೊಲೆ
ಅಕ್ಕನನ್ನು ಕಳೆದುಕೊಂಡ ಬಾಲಕ ಅವತ್ತಿನಿಂದಲೇ ತನ್ನ ಅಕ್ಕನ ಸಾವಿಗೆ ಕಾರಣನಾದ ರಘುವನ್ನು ಮುಗಿಸಲು ಹೊಂಚು ಹಾಕುತ್ತಾ ಬಂದಿದ್ದು, ಮೇ. 28ರಂದು ಸಮಯ ಸಾಧಿಸಿದ ಬಾಲಕ ಗ್ರಾಮದ ಹೊರ ವಲಯಕ್ಕೆ ಹುಲ್ಲು ತರಲು ಬಂದಿದ್ದ ವೇಳೆ ರಘುವಿಗೆ ಬರೋಬ್ಬರಿ ಹದಿನೇಳು ಬಾರಿ ಚಾಕುವಿನಿಂದ ಎದೆಗೆ ಚುಚ್ಚಿದಲ್ಲದೆ, ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಪೊಲೀಸರಿಗೆ ಶರಣಾದ ಬಾಲಕ
ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದರು. ಇದರಿಂದ ಹೆದರಿದ ಬಾಲಕ ಪೊಲೀಸರಿಗೆ ಶರಣಾಗಿದ್ದಾನೆ. ಸರ್ಕಲ್ ಇನ್ಸ್ಪೆಕ್ಟರ್ ಶಿವಮಲವಯ್ಯ, ಸಬ್ ಇನ್ಸ್ಪೆಕ್ಟರ್ ಶೇಷಾದ್ರಿ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.