ಸಿಎಂ ಗ್ರಾಮವಾಸ್ತವ್ಯದಿಂದ ಸಾಲಗಾರನಾದ ಆರೋಪ: ಸಚಿವ ಪುಟ್ಟರಾಜು ಭೇಟಿ
Recommended Video
ಮಂಡ್ಯ, ಜೂನ್ 13: ಸಿ.ಎಂ.ಗ್ರಾಮ ವಾಸ್ತವ್ಯದಿಂದ ಮನೆ ಮಾಲೀಕ ಸಾಲಗಾರನಾದ ವರದಿ ಬಿತ್ತರವಾದ ಹಿನ್ನೆಲೆ ಮಂಡ್ಯ ಜಿಲ್ಲೆ ಉಸ್ತುವಾರಿ ಸಚಿವ ಪುಟ್ಟರಾಜು ಮಂಡ್ಯದ ನವಿಲುಮಾರನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಖರ್ಚನ್ನು ಭರಿಸುವುದಾಗಿ ಭರವಸೆ ನೀಡಿದ್ದಾರೆ.
ಸಿಎಂ ಗ್ರಾಮ ವಾಸ್ತವ್ಯದಿಂದ ಸಾಲಗಾರನಾದ ಮನೆ ಮಾಲೀಕ
ಇಂದು ಬೆಳಿಗ್ಗೆ ಗ್ರಾಮಕ್ಕೆ ಭೇಟಿ ನೀಡಿದ ಸಚಿವ ಪುಟ್ಟರಾಜು, ಮನೆಯ ಮಾಲೀಕ ಮಾಯೀಗೌಡನನ್ನು ಭೇಟಿ ಮಾಡಿ ಸಮಸ್ಯೆ ಆಲಿಸಿದರು. ಅಲ್ಲದೇ ಮನೆಯ ಮಾಲೀಕನಿಗೆ ಭರವಸೆ ನೀಡಿ ಗ್ರಾಮಸ್ಥರಿಂದ ಸಮಸ್ಯೆ ಅಹವಾಲು ಸ್ವೀಕಾರ ಮಾಡಿದರು. ಇದೇ ವೇಳೆ ಮಾತನಾಡಿದ ಅವರು, ಗ್ರಾಮಕ್ಕೆ ಭೇಟಿ ನೀಡಿದ ಬಳಿಕ ಸಿ.ಎಂ. ಕುಮಾರಸ್ವಾಮಿಯಿಂದ ಸಾಲ ಆಗಿರುವ ಆರೋಪ ಒಪ್ಪುವುದಿಲ್ಲ. ತಾಂತ್ರಿಕ ಕಾರಣದಿಂದ ಸ್ವಲ್ಪ ವ್ಯತ್ಯಾಸವಾಗಿದೆ ಅಷ್ಟೆ. ಸಿ.ಎಂ ಈ ಗ್ರಾಮಕ್ಕೆ ಬಂದ ಮೇಲೆ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ ಎಂದು ಸ್ಪಷ್ಟನೆ ನೀಡಿದ್ದಾರೆ.
2006ರಲ್ಲಿ ಮಾಯೀಗೌಡರ ಮನೆಯಲ್ಲಿ ಸಿಎಂ ವಾಸ್ತವ್ಯ ಹೂಡುವ ಸಲುವಾಗಿ ಅಲ್ಲಿನ ರಿಪೇರಿ ಕಾಮಗಾರಿಗಾಗಿ 1.20 ಲಕ್ಷ ಸಾಲ ಮಾಡಿದ್ದರು. ಅಂದಿನಿಂದ ಇಂದಿನವರೆಗೂ ಅಧಿಕಾರಿಗಳು ಮನೆ ದುರಸ್ತಿ ಮಾಡಿಸಿದ್ದ ಹಣ ನೀಡಿಲ್ಲವೆಂದು ಮನೆಯ ಮಾಲೀಕ ಆರೋಪ ಮಾಡಿದ್ದರು. ಈ ಸುದ್ದಿ ಮಾಧ್ಯಮದಲ್ಲಿ ಬಿತ್ತರವಾಗುತ್ತಿದ್ದಂತೆ ಸಚಿವರು ಭೇಟಿ ನೀಡಿ ಆತನಿಗೆ ಹಣ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.